Home News ದಿ ಪ್ರೆಸಿಡೆನ್ಸಿ ಶಾಲೆ ಉದ್ಘಾಟನಾ ಸಮಾರಂಭ

ದಿ ಪ್ರೆಸಿಡೆನ್ಸಿ ಶಾಲೆ ಉದ್ಘಾಟನಾ ಸಮಾರಂಭ

0

ಸಮಾಜದ ಎಲ್ಲಾ ವರ್ಗದ ಜನರಿಗೂ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರವಹಿಸಬೇಕೆಂದು ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್ ತಿಳಿಸಿದರು.
ನಗರದ ೨ನೇ ಟಿ.ಎಂ.ಸಿ ಬಡಾವಣೆಯಲ್ಲಿ ದಿ ಪ್ರೆಸಿಡೆನ್ಸಿ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿರುವ ಎಲ್ಲಾ ವರ್ಗಗಳ ಮಕ್ಕಳು ಸಹ ವಿದ್ಯಾವಂತರಾಗಬೇಕೆಂದು ಸರ್ಕಾರ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಪಠ್ಯಪುಸ್ತಕ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಬಡಜನರಿಗೆ ಹೊರೆಯಾಗದಂತೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ತರಬೇಕೆಂದು ಹೇಳಿದರು.
ಕೇಂದ್ರದಲ್ಲಿ ಅಧಿಕಾರ ನಡೆಸಿದ ಯು.ಪಿ.ಎ. ಸರ್ಕಾರ ಶಿಕ್ಷಣದ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ ಪರಿಣಾಮವಾಗಿ ಆರ್.ಟಿ.ಇ ಯೋಜನೆಯಡಿ ಬಡ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿದ್ದು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಂಡಾಗ ಬದಲಾವಣೆ ತರಲು ಸಾಧ್ಯವೆಂದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಬಂದಿದ್ದು ಬಡವ ಶ್ರೀಮಂತ ಎಂದು ಭೇದಭಾವವಿಲ್ಲದೇ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣ ನೀಡಲು ಉತ್ಸಾಹ ತೋರಿಸುತ್ತಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇವಾ ಮನೋಭಾವ ರೂಡಿಸಿಕೊಂಡು ಪ್ರತಿಯೊಂದು ಮಗು ಸಹ ಶಿಕ್ಷಣ ಪಡೆಯಲು ಆಸಕ್ತಿವಹಿಸಬೇಕೆಂದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನ್ಯಾಮತ್, ಉಪಾದ್ಯಕ್ಷ ಖದೀರ್ಪಾಷ, ಕಾರ್ಯದರ್ಶಿ ಇಮ್ರಾನ್, ಮುಖ್ಯೋಪಾಧ್ಯಾಯ ರಿಯಾಜ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುನಿಕೃಷ್ಣಪ್ಪ, ನಟರಾಜ್, ನಗರಸಭೆಯ ಸದಸ್ಯರಾದ ಇಲಿಯಾಜ್ ಬೇಗ್, ಬಾಬು, ಬಾಲಕೃಷ್ಣ, ಸುಹೇಲ್ ಪಾಷ, ನಯಾಜ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ಸನಾವುಲ್ಲಾ, ನವಾಜ್ ಪಾಷ, ಅಮ್ಜದ್ ಷರೀಫ್, ತನ್ವೀರ್ ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.