ದುಷ್ಕರ್ಮಿಗಳು ಔಷಧಿ ಸಿಂಪಡಿಸಿದ್ದರಿಂದ ಐದನೇ ಹಂತದಲ್ಲಿದ್ದ ರೇಷ್ಮೆ ಹುಳುಗಳು ಸತ್ತು ಸುಮಾರು ಮುಕ್ಕಾಲು ಲಕ್ಷ ರೂಗಳಷ್ಟು ನಷ್ಟವಾಗಿರುವ ಘಟನೆ ಸೋಮವಾರ ನಡೆದಿದೆ.
ನಗರದ ಉಲ್ಲೂರುಪೇಟೆಯ ವಾಸಿ ವಿ.ಆಂಜಿನಪ್ಪ ಕಸಬಾ ಹೋಬಳಿ ವ್ಯಾಪ್ತಿಯಲ್ಲಿನ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದಿರುವ ಹಿಪ್ಪುನೇರಳೆ ಸೊಪ್ಪನ್ನು ಭಾನುವಾರ ಸಂಜೆ ಕಟಾವು ಮಾಡಿ ರಾತ್ರಿ ಐದನೇ ಹಂತದಲ್ಲಿದ್ದ ಹುಳುಗಳಿಗೆ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ನೋಡಿದಾಗ ಹುಳುಗಳು ಸತ್ತಿವೆ. ನಂತರ ಸೊಪ್ಪನ್ನು ತೋಟದಲ್ಲಿ ಪರಿಶೀಲಿಸಿದಾಗ ಬಿಳಿ ಬಣ್ಣದ ಚುಕ್ಕೆಗಳು ಕಂಡು ಬಂದಿದ್ದು, ಔಷಧಿಯ ವಾಸನೆ ಸಹ ಬಂದಿದೆ. ತಕ್ಷಣ ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ ಪರಿಶೀಲನೆ ನಡೆಸಿದರು.
‘ಸುಮಾರು 100 ಮೂಟೆಯಷ್ಟು ಹಿಪ್ಪುನೇರಳೆ ಸೊಪ್ಪು ಉಪಯೋಗಕ್ಕೆ ಬರದಂತಾಗಿದೆ. ಮುನ್ನೂರು ಮೊಟ್ಟೆ ತಂದು ಐದನೇ ಹಂತದವರೆಗೂ ಸಾಕಿದ್ದೇವೆ. ನಮ್ಮ ಕೂಲಿಯನ್ನು ಬಿಟ್ಟು 75 ಸಾವಿರ ರೂಗಳಷ್ಟು ನಷ್ಟವಾಗಿದೆ. ಸರ್ಕಾರದಿಂದ ಪರಿಹಾರವನ್ನು ಕೊಡಿಸಬೇಕು’ ಎಂದು ರೈತ ವಿ.ಆಂಜಿನಪ್ಪ ಅಧಿಕಾರಿಗಳನ್ನು ಕೋರಿದರು.
ರೈತ ಮುಖಂಡ ವೇಣುಗೋಪಾಲ್, ದೇವರಾಜ್, ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.