ಗ್ರಾಮಗಳು ಗಟ್ಟಿಗೊಳ್ಳಬೇಕಾದರೆ ಗ್ರಾಮದ ಸರ್ಕಾರಿ ಶಾಲೆಗಳನ್ನು ಸಮುದಾಯದ ಸಹಭಾಗಿತ್ವದಲ್ಲಿ ಪೋಷಿಸಬೇಕು ಎಂದು ಅವಿರತ ಟ್ರಸ್ಟ್ ಅಧ್ಯಕ್ಷ ಶಿವಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಗೆ ದಾನಿಗಳ ನೆರವಿನಿಂದ ವಿವಿಧ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾವು 130 ಮಂದಿ ಸ್ನೇಹಿತರು ಸೇರಿಕೊಂಡು ಕಳೆದ ಒಂಭತ್ತು ವರ್ಷಗಳಿಂದ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಪುಸ್ತಕಗಳನ್ನು ವಿತರಿಸುತ್ತಿದ್ದೇವೆ. ಈ ಬಾರಿ 220 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿರುವ 15 ಸಾವಿರ ಮಕ್ಕಳಿಗೆ ಒಟ್ಟು ಎರಡು ಲಕ್ಷ 20 ಸಾವಿರ ಪುಸ್ತಕಗಳನ್ನು ನೀಡಲಿದ್ದೇವೆ. ಸಮುದಾಯದ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳು ಉತ್ತಮಗೊಂಡಲ್ಲಿ ಖಾಸಗಿ ಶಾಲೆಗಳಿಗೆ ಹೋಗುವುದು ತಪ್ಪುತ್ತದೆ ಎಂದು ಹೇಳಿದರು.
ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥೀಗಳಿಗೆ ಅವಿರತ ಟ್ರಸ್ಟ್ ವತಿಯಿಂದ ನೋಟ್ ಪುಸ್ತಕಗಳು, ಚಿಂತಾಮಣಿ ಅಶೋಕ್ ಮತ್ತು ಸ್ನೇಹಿತರಿಂದ ಶಾಲಾ ಬ್ಯಾಗ್ಗಳು, ದೊಡ್ಡದಾಸೇನಹಳ್ಳಿ ಡಿ.ವಿ.ಆಂಜನೇಯರೆಡ್ಡಿ ಅವರಿಂದ ಶಾಲೆಗೆ ನೀರಿನ ತೊಟ್ಟಿ, ಡಿ.ಎನ್.ಆಂಜನೇಯರೆಡ್ಡಿ ಅವರಿಂದ ಟೈ ಮತ್ತು ಬೆಲ್ಟ್ಗಳು, ಆನಂದಪ್ಪ ಅವರಿಂದ ಗುರುತಿನ ಚೀಟಿಗಳು, ಮುಸ್ತಾಫ ಅವರಿಂದ ಲೇಖನ ಸಾಮಗ್ರಿಗಳು, ಅಪ್ಪಣ್ಣ ಅವರಿಂದ ಶಾಲೆಗೆ ಕುರ್ಚಿಗಳು, ಹಿಂದೂಪುರ ಕೃಷ್ಣಮೂರ್ತಿ ಅವರಿಂದ ಜಮಖಾನ, ಉಮೇಶ್ ಹಾಗೂ ಮುತ್ತಣ್ಣ ಅವರಿಂದ ಚೇರ್ಗಳು, ರಾಜಣ್ಣ ಮತ್ತು ಅಂಬರೀಷ್ ಅವರಿಂದ ಆಸನದ ವ್ಯವಸ್ಥೆ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು. ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಮುಖ್ಯಶಿಕ್ಷಕ ಶ್ರೀಕಾಂತ್, ಶಿಕ್ಷಕರಾದ ಮಹೇಶ್, ದೇವರಾಜ್, ವೆಂಕಟರಮಣ, ಮಂಜುನಾಥ್, ಅವಿರತ ಟ್ರಸ್ಟ್ನ ರೂಪಾ, ಮಲ್ಲಿಕಾರ್ಜುನ ಪ್ರಸಾದ್, ಮಹೇಶ್ ಕುಮಾರ್, ಚಂದನ್, ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ವಿ.ಆಂಜನೇಯರೆಡ್ಡಿ, ಸುಮಿತ್ರ ಗುರುಮೂರ್ತಿ, ಗ್ರಾಮದ ಮೇಸ್ತ್ರಿ ವೆಂಕಟರೋಣಪ್ಪ, ಡಿ.ವಿ.ಶ್ರೀನಿವಾಸ್ ಹಾಜರಿದ್ದರು.