ತಾಲ್ಲೂಕಿನ ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾತೃಭೋಜನ ಮತ್ತು ಅಕ್ಷರಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು ಮಾತನಾಡಿದರು.
ತಾಯಿಯಿಂದ ಮಕ್ಕಳಲ್ಲಿ ಸಂಸ್ಕಾರಗಳು ವೃದ್ಧಿಯಾಗುತ್ತವೆ. ಅಕ್ಷರಾಭ್ಯಾಸಕ್ಕೆ ಒಂದು ಪರಂಪರೆಯಿದೆ. “ಅಕ್ಷರ” ಎಂಬ ಶಬ್ದಕ್ಕೆ “ನಕ್ಷರತಿ ಇತಿ ಅಕ್ಷರಂ” ಅಂದರೆ “ಯಾವುದಕ್ಕೆ ಅಳಿವಿಲ್ಲವೋ ಅದು ಅಕ್ಷರ” ಎಂಬ ಅರ್ಥವಿದೆ ಎಂದು ಅವರು ತಿಳಿಸಿದರು.
ಜಗತ್ತಿನ ಮೊದಲು ಗುರು ಮಾತೃ. ತಾಯಿ ಸಮಾಜದಲ್ಲಿ ಸಂಸ್ಕಾರಗಳನ್ನು ಬಿತ್ತುವ ಮೊದಲ ಗುರು. ಮನೆಯೇ ಪಾಠಶಾಲೆ. ಮನೆಯಲ್ಲಿನ ಎಲ್ಲರಿಂದರಿಂದಲೂ ಮೌಲ್ಯಗಳನ್ನು ಮತ್ತು ಜೀವನದ ಸಂಬಂಧಗಳನ್ನು ಮಗು ಕಲಿಯುತ್ತದೆ. ತಾಯಿಯ ಪೋಷಣೆ ಮತ್ತು ಲಾಲನೆಯಿಂದ ಮಗು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತದೆ. ಮಾನವನು ವ್ಯಕ್ತಿತ್ವ ವಿಕಸನ ಮತ್ತು ಎಲ್ಲಾ ರೀತಿಯ ಅನುಬಂಧಗಳನ್ನು ತಾಯಿಯ ಮೂಲಕ ಪಡೆಯುತ್ತಾನೆ. ತಾಯಿಯ ಋಣವನ್ನು ಯಾವುದೇ ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ.
ಇಂದಿನ ಮಕ್ಕಳಿಗೆ ತಂದೆ ತಾಯಿಗಳೇ ಆದರ್ಶರಾಗಬೇಕು. ಮೌಲ್ಯಗಳನ್ನು ಮೊದಲು ಮಗು ಮನೆಯಿಂದಲೇ ಕಲಿಯುತ್ತದೆ, ತಂದೆತಾಯಿಯರಲ್ಲಿ ಮೌಲ್ಯಗಳಿದ್ದರೆ ಅದನ್ನು ಮಗು ಪಾಲಿಸುತ್ತದೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲಿಯೂ ಮಗುವಿನ ಆಲೋಚನೆಗಳನ್ನು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಠಿಸಬೇಕೆಂದರು.
ಇಲ್ಲಿನ ಶಾಲೆಯಲ್ಲಿ ಖಾಸಗಿ ಶಾಲೆಗಿಂತಲೂ ಉತ್ತಮ ಪರಿಸರ, ಭೋದನೆ, ಕಲಿಕೆ, ಸಾಮಾಜಿಕ ಸೇವೆ ಹಾಗೂ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುತ್ತಿರುವುದು ಶ್ಲಾಘನೀಯವಾಗಿದೆ. ಜಿಲ್ಲಾ ಮಟ್ಟದ ಉತ್ತಮ ಪರಿಸರ ಶಾಲೆ ಪ್ರಶಸ್ತಿ ಪಡೆದಿರುವುದು ಇಲ್ಲಿನ ಮುಖ್ಯ ಶಿಕ್ಷಕ ಶ್ರೀಕಾಂತ್ ಮತ್ತು ಮಹೇಶ್ ರವರ ಪರಿಶ್ರಮದ ಪ್ರತೀಕವಾಗಿದೆ. ಅವರಿಗೆ ಇನ್ನಷ್ಟು ಇಂತಹ ಕಾರ್ಯಗಳನ್ನು ಮಾಡಲು ನಾವೆಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಡಿ.ವಿ.ಆಂಜನೇಯರೆಡ್ಡಿ ಮಾತನಾಡಿ, ನಾವೆಲ್ಲರೂ ಸೇರಿ ನಮ್ಮೂರಿನ ಶಾಲೆಯನ್ನು ಬಲಪಡಿಸಬೇಕೆಂದರು. ನಮ್ಮೂರಿನ ಶಾಲೆಯಿಂದ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಲು ಎಲ್ಲರ ಸಹಕಾರ ಮುಖ್ಯ ಎಂದರು.
ಅಕ್ಷರಾಭ್ಯಾಸದ ಮಹತ್ವವನ್ನು ವಿವರಿಸಿ ವೇದ ಬ್ರಹ್ಮಶ್ರೀ ಹಿಂದೂಪುರ ಅನಂತರಾಮು ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಾತೃಭೋಜನವನ್ನು ಅದರ ಪ್ರಾಮುಖ್ಯತೆಯನ್ನು ವೇದ ಬ್ರಹ್ಮಶ್ರೀ ಕಂಗಾನಹಳ್ಳಿ ಚಂದ್ರಮೋಹನ್ ತಿಳಿಸಿದರು. ಚಿಂತಾಮಣಿಯ ಸಿಂಧೂ ಮುದ್ರಣಾಲಯದಿಂದ ಲೇಖನ ಸಾಮಾಗ್ರಿಗಳು ಮತ್ತು ಸ್ಲೇಟು ಇತರ ಪುಸ್ತಕಗಳನ್ನು ಗ್ರಾಮಸ್ಥರು ಕೊಡುಗೆಯಾಗಿ ನೀಡಿದರು. ಸ್ಟೋಡೆಂಟ್ ಜೆರಾಕ್ಸ್ ಅಂಗಡಿ ವತಿಯಿಂದ ಪೆನ್ಸಿಲ್ ಇತರ ಸಾಮಾಗ್ರಿಗಳನ್ನು ಉಚಿತವಾಗಿ ನೀಡಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ಡಿ.ಎನ್.ರಾಮಚಂದ್ರ, ಗ್ರಾಮ ಪಂಚಾಯಿತಿ ಸದಸ್ಯೆ ಸುಮಿತ್ರಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಡಿ.ಎನ್.ಆಂಜನೇಯರೆಡ್ಡಿ, ಶಿಕ್ಷಕರಾದ ಮಂಜುನಾಥ, ಪಿಳ್ಳಣ್ಣ, ಮುಖ್ಯಶಿಕ್ಷಕ ಕೆ.ಎನ್.ಶ್ರೀಕಾಂತ್, ಸಹಶಿಕ್ಷಕ ಎ.ಆರ್.ಮಹೇಶ್, ಅಂಗನವಾಡಿ ಕಾರ್ಯಕರ್ತೆ ಶಶಿಕಲ ಹಾಜರಿದ್ದರು.