ಪುರಸಭೆಯಿಂದ ನಗರಸಭೆಯಾಗಿ ಮೇಲ್ದಜೆಗೇರಿದರೂ ಕೂಡಾ ಜನರು ನೆಮ್ಮದಿಯಿಂದ ಜೀವನ ನಡೆಸುವಂತಹ ವಾತಾವರಣ ಶಿಡ್ಲಘಟ್ಟದಲ್ಲಿ ನಿರ್ಮಾಣವಾಗಲಿಲ್ಲವೆಂದು ನಾಗರಿಕರು ನಗರಸಭೆಯ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಗರದಲ್ಲಿ ಸುಮಾರು ೨೭ ವಾರ್ಡುಗಳಿದ್ದು, ಯಾವ ವಾರ್ಡುಗಳಲ್ಲಿಯೂ ಕೂಡಾ ಸರಿಯಾಗಿ ಕಸವಿಲೇವಾರಿಯಾಗುತ್ತಿಲ್ಲ. ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಆಳವಾದ ಗುಂಡಿಗಳಿಂದಾಗಿ ಇಲ್ಲಿನ ಜನತೆ ನರಕಯಾತನೆ ಅನುಭವಿಸುವಂತಾಗಿದೆ. ನಗರದಲ್ಲಿನ ಪ್ರಮುಖ ಉದ್ಯಮ ರೇಷ್ಮೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದರೂ ಕೂಡಾ ಶಿಡ್ಲಘಟ್ಟ ನಗರಕ್ಕೆ ಬೇಟಿ ನೀಡುತ್ತಿದ್ದಂತೆ ಸ್ವಾಗತಿಸುವುದು ಕಸಯುಕ್ತವಾದ ಚರಂಡಿಗಳು. ಬಹುತೇಕ ಹಂದಿಗಳಿಗೆ ತಾಣವಾಗಿ ಪರಿಣಮಿಸಿರುವ ಚರಂಡಿಗಳಲ್ಲಿ ಪ್ಲಾಸ್ಟಿಕ್ ಕವರುಗಳು ಸೇರಿದಂತೆ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸವೆಲ್ಲಾ ಚರಂಡಿಗಳ ಪಾಲಾಗುತ್ತಿದೆ.
ತಾಲ್ಲೂಕಿನ ಹಿತ್ತಲಹಳ್ಳಿಯ ಸಮೀಪದಲ್ಲಿ ನಿರ್ಮಾಣ ಮಾಡಲಾಗಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಪ್ರಯೋಜನವಿಲ್ಲದಂತಾಗಿದೆ. ನಗರದಲ್ಲಿಯೂ ಕೂಡಾ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ, ದಿಬ್ಬೂರಹಳ್ಳಿ ಬೈಪಾಸ್ ರಸ್ತೆ, ಅಶೋಕ ರಸ್ತೆ, ಮಯೂರ ವೃತ್ತ, ವೇಣುಗೋಪಾಲಸ್ವಾಮಿ ದೇವಾಲಯದ ಮುಂಭಾಗ ಸೇರಿದಂತೆ ಎಲ್ಲೆಲ್ಲೂ ಕಸದ ರಾಶಿಗಳ ದರ್ಶನವಾಗುತ್ತಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರ ಪರಿಣಾಮವಾಗಿ ಕಸವು ಎಲ್ಲೆಂದರಲ್ಲಿ ಕೊಳೆತು ದುರ್ನಾತ ಬೀರುತ್ತಿದೆ.
ನಗರಸಭೆಯಲ್ಲಿ ಒಟ್ಟು ೧೦೦ ಮಂದಿ ಪೌರಕಾರ್ಮಿಕರಿದ್ದು, ೪೦ ಮಂದಿ ಖಾಯಂ ನೌಕರರಿದ್ದಾರೆ. ಈ ಹಿಂದೆ ಕಸವನ್ನು ವಿಲೇವಾರಿ ಮಾಡುವಂತಹ ಗುತ್ತಿಗೆಯನ್ನು ಪಡೆದುಕೊಂಡಿದ್ದ ದೊಡ್ಡಬಳ್ಳಾಪುರ ಮೂಲಕ ಗುತ್ತಿಗೆದಾರ ಈ ಕಡೆಗೆ ತಿರುಗಿಯೂ ನೋಡಿಲ್ಲ. ಇದರಿಂದಾಗಿ ಪೌರಕಾಮಿಕರಿಗೆ ಮೂರು ತಿಂಗಳ ಸಂಬಳವನ್ನೆ ನೀಡಿಲ್ಲ. ಹೀಗಾಗಿ ನಗರಸಭೆಯು ಉತ್ತಮವಾಗಿದೆಯೊ ಅಥವಾ ದಿವಾಳಿಯಾಗಿದೆಯೊ ಎನ್ನುವಂತಹ ಅನುಮಾನಗಳು ಜನತೆಯನ್ನು ಕಾಡತೊಡಗಿವೆ.
ನಗರಸಭೆಯ ವ್ಯಾಪ್ತಿಯಲ್ಲಿ ೨೭ ವಾರ್ಡುಗಳಿವೆ, ಅವುಗಳ ಪೈಕಿ ೧೦ ವಾರ್ಡುಗಳಿಂದ ಮಾತ್ರ ನಗರಸಭೆಗೆ ತೆರಿಗೆಗಳು ವಸೂಲಿಯಾಗುತ್ತಿವೆ. ಉಳಿದ ಯಾವ ವಾರ್ಡುಗಳಿಂದಲೂ ತೆರಿಗೆಗಳು ಬರುತ್ತಿಲ್ಲ, ಕಸವಿಲೇವಾರಿಗೆ ಟೆಂಡರ್ ಕರೆದು ಈಗಾಗಲೇ ಅನುಮೊದನೆಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಅನುಮೋದನೆ ದೊರಕಿದ ನಂತರ ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಯುಕ್ತ ಎಚ್.ಎ.ಹರೀಶ್ ತಿಳಿಸಿದ್ದಾರೆ.
- Advertisement -
- Advertisement -
- Advertisement -
- Advertisement -