Home News ನಾಗಮಂಗಲ ಗ್ರಾಮದಲ್ಲಿ ನೈರ್ಮಲ್ಯ ಸ್ವಚ್ಛತಾ ಸಪ್ತಾಹ

ನಾಗಮಂಗಲ ಗ್ರಾಮದಲ್ಲಿ ನೈರ್ಮಲ್ಯ ಸ್ವಚ್ಛತಾ ಸಪ್ತಾಹ

0

ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿರುವ ತಾಲ್ಲೂಕಿನಲ್ಲಿ ನೀರನ್ನು ಉಳಿತಾಯ ಮಾಡಿ ನೀರಿನ ಕೊರತೆಯನ್ನು ನೀಗಿಸಲು ಮಹಿಳೆಯರ ಸಹಕರಿಸಬೇಕು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್.ಗುರುಬಸಪ್ಪ ಹೇಳಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ತಾಲ್ಲೂಕು ಪಂಚಾಯತಿ ್ತಿವತಿಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಛತಾ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಬೀರ ಸ್ಚರೂಪವನ್ನು ಪಡೆಯುತ್ತಿದ್ದು ಕೊಳವೆಬಾವಿಗಳಲ್ಲಿ ಸುಮಾರು ೧೫೦೦ ಅಡಿಗಳಿಂದ ನೀರು ತೆಗೆಯಲಾಗುತ್ತಿದೆ, ನೀರಿನಲ್ಲಿ ಫ್ಲೋರೈಡ್ನ ಅಂಶ ಹೆಚ್ಚಾಗಿರುವುದರಿಂದ ಈ ಭಾಗದಜನತೆ ಹಲ್ಲುಗಳ ಸವೆತ, ಮೂಳೆಗಳ ಸವೆತ, ಹಾಗೂ ಕ್ಯಾನ್ಸರ್ ಖಾಯಿಲೆಗಳಿಂದ ಬಳಲುವಂತಾಗಿದೆ, ತಾಲ್ಲೂಕಿನಲ್ಲಿ ೧೬ ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರುಗಳ ಮುಖಾಂತರ ನೀಡುತ್ತಿದ್ದೇವೆ. ೫ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರನ್ನು ಪಡೆಯಲಾಗುತ್ತಿದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆರು ಪ್ರತಿಯೊಂದುಗ್ರಾಮದಲ್ಲಿನಜನರಿಗೆ ತಿಳುವಳಿಕೆಯನ್ನು ಹೇಳಿ ನೀರನ್ನು ಮಿತಬಳಕೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ರೈತರು ಮಳೆಯ ನೀರನ್ನು ತಮ್ಮ ಹೊಲಗಳಲ್ಲಿ ಇಂಗಿಸುವಂತಹ ಕೆಲಸವನ್ನು ಮಾಡಿ, ಅಂತರ್ಜಲದ ವೃದ್ಧಿಗಾಗಿ ಸಹಕಾರ ನೀಡಬೇಕು.
ಪ್ರತಿಯೊಂದು ಮನೆಗೂ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು, ಬಯಲು ಬಹಿರ್ದೇಸೆಯಿಂದಾಗಿಯೂ ಅನೇಕ ಖಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ ಸರ್ಕಾರದಿಂದ ಶೌಚಾಲಯಗಳ ನಿರ್ಮಾಣಕ್ಕೆ ಬೇಕಾಗುವಂತಹ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ನಾಗರೀಕರು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಎಇಇ ಗಣಪತಿ ಸಾಕರೆ ಮಾತನಾಡಿ ಲಭ್ಯವಿರುವ ನೀರನ್ನು ಶುದ್ಧೀಕರಿಸಿಕೊಳ್ಳಲು ಜಿಲ್ಲಾ ಪಂಚಾಯತಿಯಿಂದ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದರು.
ನೀರಿನ ಮಿತಬಳಕೆ ಹಾಗೂ ನೈರ್ಮಲ್ಯವನ್ನುಕಾಪಾಡುವ ಬಗ್ಗೆ ಶಾಲಾ ಮಕ್ಕಳಿಂದ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಲಾಯಿತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಗ್ರಾಮ ಪಂಚಾಯತಿ ಪಂಚಾಯತಿ ಅಧ್ಯಕ್ಷೆ ರೂಪಶಿವಕುಮಾರ್, ಉಪಾಧ್ಯಕ್ಷ ನಾರಾಯಣಪ್ಪ, ಜಿಲ್ಲಾ ಪಂಚಾಯತಿ ಎಇಇ ಶಿವಾನಂದ, ತಾಲ್ಲೂಕು ಪಂಚಾಯತಿ ಸದಸ್ಯ ಚನ್ನಕೃಷ್ಣಪ್ಪ, ಶ್ರೀನಿವಾಸಗೌಡ, ಕೆ.ಎಂ.ರಾಮಕೃಷ್ಣಪ್ಪ, ಮಮತಾಗೋಪಾಲ್, ಮುನಿರತ್ನಮ್ಮ, ರಾಧಮ್ಮ, ಸ್ವಚ್ಛ ಭಾರತ ಅಭಿಯಾನದ ತಾಲ್ಲೂಕು ಸಂಯೋಜಕ ಬಾಸ್ಕರ್, ಸರೋಜಮ್ಮ, ಪಿ.ಡಿ.ಓ.ಗೋಪಿಗೋಪಾಲಕೃಷ್ಣ, ಕೆಂಪರೆಡ್ಡಿ, ರಘುರಾಮ್, ಟಿ.ಎಂ.ಅಶ್ವಥ್, ಪಿ.ವಿ.ಸಿದ್ದಣ್ಣ, ಗೌಸ್ಫಿರ್, ಶ್ರೀನಿವಾಸ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.