Home News ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಅವರ ೧೦೧ ನೇ ಜನ್ಮದಿನಾಚರಣೆ ಕಾರ್ಯಕ್ರಮ

ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಅವರ ೧೦೧ ನೇ ಜನ್ಮದಿನಾಚರಣೆ ಕಾರ್ಯಕ್ರಮ

0

ತಾಲ್ಲೂಕಿನ ಮಳ್ಳೂರು ಗ್ರಾಮದ ಡೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಅವರ ೧೦೧ ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿ ಭೂ ಜಲ ವಿಜ್ಞಾನಿ ಡಾ.ವಿ.ಎಸ್. ಪ್ರಕಾಶ್ ಮಾತನಾಡಿದರು.
ಸರ್ಕಾರಗಳು ಬದ್ಧತೆಯಿಂದ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದರೆ, ನೀರಿನ ಕೊರತೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯಿರಬೇಕು. ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುನ್ನಾ ವಿಚಾರ ಮಂಥನಗಳಾಗಬೇಕು ಎಂದು ಅವರು ಹೇಳಿದರು.
ನೀರಾವರಿ ಯೋಜನೆಯೆಂಬ ಗಂಭೀರವಾದ ಸಮಸ್ಯೆಯ ಕುರಿತು ಚರ್ಚೆಗಳಾಗಬೇಕು. ಸಾಧಕ ಭಾಧಕಗಳ ಕುರಿತು ವಿಮರ್ಶೆಗಳಾಗಬೇಕು. ಜನರಿಗೆ ಸಂಪೂರ್ಣವಾದ ಮಾಹಿತಿ ಲಭ್ಯವಾಗಬೇಕು. ದುರಾದೃಷ್ಟವೆಂದರೆ ಯೋಜನೆಗಳ ಅನುಷ್ಠಾನದ ಕುರಿತು ಪ್ರಶ್ನೆ ಮಾಡುವಂತಹ ಮನೋಭಾವನೆಯನ್ನು ಜನರು ಕಳೆದುಕೊಂಡಿದ್ದಾರೆ. ಬಯಲು ಸೀಮೆಯ ಭಾಗಗಳಿಗೆ ನೀರು ಹರಿಸುವ ಕನಸನ್ನು ಕಂಡಿದ್ದ ಪರಮಶಿವಯ್ಯ ಅವರ ಕನಸು ನನಸಾಗಬೇಕಾದರೆ ನಾವೆಲ್ಲರೂ ಅಂತರ್ಜಲದ ಮಟ್ಟದ ಏರಿಳಿತಗಳನ್ನು ಪರಿಶೀಲಿಸಬೇಕು. ನಾವೇ ಸ್ವತಃ ವಿಜ್ಞಾನಿಗಳಾಗಿ ಕೆಲಸ ಮಾಡಬೇಕು. ಅಂತರ್ಜಲದಿಂದ ಸಿಗುತ್ತಿರುವ ನೀರಿನಲ್ಲಿರುವ ಅಂಶಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.
ಇಸ್ರೇಲ್‌ಗಿಂತ ಕೋಲಾರದಲ್ಲಿ ನೀರಿನ ಭವಣೆ ಹೆಚ್ಚಾಗಿದೆ. ನೀರಿನ ಭವಣೆ ಇಷ್ಟೊಂದು ಗಂಭೀರವಾಗಿದ್ದರೂ ಉತ್ಪಾದನೆ ಕುಂಠಿತವಾಗಿಲ್ಲ. ರೈತರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಹೀಗಿದ್ದರೂ ಸರ್ಕಾರ ಇಸ್ರೇಲ್ ಮಾದರಿಯನ್ನು ತೋರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ.
ಮಳೆಯ ನೀರು ಸಂಗ್ರಹ ಎಲ್ಲಿ ಆಗುತ್ತಿದೆ. ಎಷ್ಟರ ಪ್ರಮಾಣದಲ್ಲಿ ಆಗುತ್ತಿದೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ನೀರು ಹೇಗೆ ಬರಲಿಕ್ಕೆ ಸಾಧ್ಯ? ನಮ್ಮಲ್ಲಿ ನೀರಿನ ಅವಶ್ಯಕತೆ ಎಷ್ಟಿದೆ, ಎನ್ನುವ ಕುರಿತು ಪೂರ್ಣ ಪ್ರಮಾಣದ ದತ್ತಾಂಶ ಸೃಷ್ಟಿಯಾಗಬೇಕಾಗಿದೆ. ವಾರ್ಷಿಕವಾಗಿ, ಮಾಸಿಕವಾಗಿ ಎಷ್ಟು ನೀರು ಬೇಕು ಎನ್ನುವ ಬಗ್ಗೆ ಖಾತರಿಯಾಗಬೇಕು. ಈ ಬಗ್ಗೆ ವಿದ್ಯಾವಂತರು ಒಂದಾಗಿ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರಗಳು ನಿಮ್ಮ ಮಾತು ಕೇಳುತ್ತವೆ. ಇಲ್ಲವಾದರೆ ಸುಳ್ಳು ಭರವಸೆಗಳನ್ನು ಕೊಟ್ಟು ನಿಮ್ಮನ್ನು ಯಾಮಾರಿಸುತ್ತಾರೆ ಎಂದರು.
ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಆಂಜನೇಯರೆಡ್ಡಿ ಮಾತನಾಡಿ, ಬಯಲು ಸೀಮೆ ಭಾಗಗಳಲ್ಲಿ ಕೆರೆಗಳಿಗೆ ನೀರು ತುಂಬಬೇಕು, ನೀರಿಗಾಗಿ ಬಸವಳಿದು ಹೋಗಿರುವ ಭೂಮಿಗಳು ಫಲವತ್ತಾಗಬೇಕು. ನಮ್ಮ ಮಕ್ಕಳು ಭವಿಷ್ಯದಲ್ಲಿ ನೀರಿನ ಅಭಾವ ಎದುರಿಸಬಾರದು ಎನ್ನುವ ಕಾರಣದಿಂದ ನಮ್ಮ ಹೋರಾಟವಿದೆ. ನೀರು ಕೊಡ್ತೇವೆ ಎಂದರೆ ಅದಕ್ಕಿಂತ ಸಂತೋಷದ ವಿಚಾರ ಮತ್ತೊಂದಿಲ್ಲ, ಕೆ.ಸಿ.ವ್ಯಾಲಿ ಯೋಜನೆ, ಎಚ್.ಎನ್.ವ್ಯಾಲಿ ಯೋಜನೆಗೆ ನಮ್ಮ ವಿರೋಧವಿಲ್ಲ. ಅದನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ಕೊಡದಿದ್ದರೆ, ನಾವು ಮತ್ತು ಭವಿಷ್ಯದ ಜನರು ಸಾಕಷ್ಟು ಭವಣೆ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಅಂಕಿ ಅಂಶಗಳ ಸಮೇತವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ ನಂತರವೇ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಸರ್ಕಾರ, ಈಗಲೂ ಮೂರು ಹಂತದಲ್ಲಿ ಶುದ್ಧೀಕರಿಸಿ, ಶುದ್ಧವಾದ ನೀರು ಕೊಡುತ್ತಿರುವುದಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದನ್ನು ಬಿಟ್ಟು, ರಾಜಕಾರಣಕ್ಕಾಗಿ ಹೋರಾಟಗಾರರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಬಾರದು. ಕೋಲಾರದ ಕಡೆಗೆ ಈಗಾಗಲೇ ಹರಿಸಿರುವ ನೀರಿನಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಈಗಾಗಲೇ ಜನರಿಗೆ ಗೊತ್ತಿದೆ. ಶುದ್ಧವಾದ ನೀರು ಕೇಳಲಿಕ್ಕೆ ನಮಗೆ ಹಕ್ಕಿದೆ ಎಂದರು.
ಯುವಶಕ್ತಿ ಸಂಚಾಲಕ ವಿಜಯಭಾವರೆಡ್ಡಿ ಮಾತನಾಡಿ, ನಾವು ಚುನಾವಣೆಗಳಲ್ಲಿ ಆಯ್ಕೆ ಮಾಡಿ ಕಳುಹಿಸುತ್ತಿರುವ ಜನಪ್ರತಿನಿಧಿಗಳು ನಮ್ಮ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡಿಲ್ಲ. ಕೆಲ ರೈತ ಮುಖಂಡರು, ಸದ್ಯದ ಪರಿಸ್ಥಿತಿಯಲ್ಲಿನ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ಸಾಮಾಜಿಕ ಜಾಲತಾಣಗಳಲ್ಲಿ ತಮಗಿಷ್ಟ ಬಂದ ಹಾಗೇ ಮಾತನಾಡುತ್ತಿದ್ದಾರೆ. ಹೋರಾಟಗಳನ್ನು ಮೊಟಕುಗೊಳಿಸಲಿಕ್ಕೆ ರಾಜಕಾರಣಿಗಳ ಕೈಗೊಂಬೆಗಳಂತೆ ಕುಣಿಯುವವರು ಅವರ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಯುವಕರು ಎಚ್ಚರವಾಗಬೇಕು. ನಮಗೆ ಸಿಗಬೇಕಾಗಿರುವ ಶುದ್ಧ ನೀರು ಪಡೆಯಲು ಕೈ ಜೋಡಿಸಬೇಕು ಎಂದರು.
ಡೇರಿಯ ವತಿಯಿಂದ ವಿಜ್ಞಾನಿ ಪ್ರಕಾಶ್ ಹಾಗೂ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ದಂಪತಿಗಳನ್ನು ಸನ್ಮಾನಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮಶಿವಕುಮಾರ್, ಉಪಾಧ್ಯಕ್ಷ ಗೋಪಾಲಪ್ಪ, ನೀರಾವರಿ ಹೋರಾಟಗಾರ ಮಳ್ಳೂರು ಹರೀಶ್, ಸುರೇಶ್ ಬಾಬು, ಪಿಳ್ಳವೆಂಕಟಸ್ವಾಮಪ್ಪ, ಉಪನ್ಯಾಸಕ ರವೀಂದ್ರ, ಭೈರೇಗೌಡ, ಗೋಪಣ್ಣ, ಮಂಜುನಾಥ್ ಬಾಬು, ಎಂ.ಎನ್.ಗೋಪಾಲಪ್ಪ, ರಾಜೇಶ್, ಸೋಮಣ್ಣ, ಗ್ರಾಮದ ಮುಖಂಡರು ಹಾಜರಿದ್ದರು.

error: Content is protected !!