ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸರ್ಕಾರದಿಂದ ವೇತನ ಪಾವತಿ ಮಾಡುವ ಆದೇಶವು ನಮ್ಮ ಇದುವರೆಗಿನ ಹೋರಾಟಕ್ಕೆ ಸಂದ ಜಯ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಎ.ಸುದರ್ಶನ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಗ್ರಾಮ ಪಂಚಾಯಿತಿ ನೌಕರರೊಂದಿಗೆ ಸೋಮವಾರ ವಿಜಯೋತ್ಸವವನ್ನು ಆಚರಿಸಿ ಅವರು ಮಾತನಾಡಿದರು.
ನಮ್ಮ ಸಂಘಟನೆಯಿಂದ ಕನಿಷ್ಠ ವೇತನಕ್ಕಾಗಿ ಹೋರಾಟ ನಡೆಸಿದ್ದೇವೆ. ಹೋರಾಟದ ಸಮಯದಲ್ಲಿ ಸಂಘಟನೆಯ ಮುಖಂಡರು, ಹಲವಾರು ನೌಕರ ಬಂಧುಗಳು ಪೊಲೀಸ್ ಲಾಠಿ ಏಟು ತಿಂದು ಆಸ್ಪತ್ರೆ ಸೇರಿ, ಜೈಲುಪಾಲಾಗಿ, ನ್ಯಾಯಾಲಯಗಳಿಗೆ ಅಲೆದಿರುವುದನ್ನು ಸ್ಮರಿಸಿಕೊಳ್ಳಬೇಕಿದೆ. ಈ ಗೆಲುವು ಯಾರೂ ಕೂಡ ಸ್ವಯಂಪ್ರೇರಿತರಾಗಿ ದಯಪಾಲಿಸಿದ್ದಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಟ್ಟಿತನದ ಚಳುವಳಿಯಿಂದಾಗಿ ಸಿಕ್ಕ ಗೆಲುವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಉಪಾಧರ್ಯಕ್ಷ ದೇವಪ್ಪ, ಗಂಗಪ್ಪ, ಜನಾರ್ಧನ, ಚನ್ನಪ್ಪ, ರಾಮೇಗೌಡ, ರಾಮಕೃಷ್ಣಪ್ಪ, ಶಶಿಕುಮಾರ್, ಮುನಿಯಪ್ಪ ಹಾಜರಿದ್ದರು.