ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜೀವನದ ಪುಟಗಳ ಆಯ್ದ ಭಾಗವನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಡುವ ಮೂಲಕ “ಪಾಪು-ಬಾಪು” ನಾಟಕ ಪ್ರೇಕ್ಷಕರ ಮನಗೆದ್ದಿತು.
ನಗರದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿವಮೊಗ್ಗ ರಂಗಾಯಣ ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ “ಪಾಪು-ಬಾಪು” ನಾಟಕವು ಶ್ರೀಪಾದ್ ಭಟ್ ನಿರ್ದೇಶಕದಲ್ಲಿ ಗಾಂಧಿ-150 ಕಲಾವಿದರ ತಂಡದ ಸಾರಥ್ಯದಲ್ಲಿ ವಿಭಿನ್ನವಾಗಿ ಮೂಡಿಬಂದಿತು. ಬೊಳುವಾರು ಮಹಮದ್ ಕುಂಞ ಅವರ “ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ” ಕೃತಿ ಆಧರಿಸಿದ “ಪಾಪು ಬಾಪು” ನಾಟಕದ ಪ್ರತಿ ಪಾತ್ರಗಳು ಗಾಂಧೀಜಿ ಅವರ ಜೀವನ ಚಿತ್ರಣದ ದರ್ಶನ ನೀಡುತ್ತಾ, ಗಾಂಧಿ ದೇವಮಾನವರಲ್ಲ, ಎಲ್ಲರಂತೆಯೇ ಹುಟ್ಟಿ, ಎಲ್ಲರಂತೆಯೇ ಬೆಳೆದ ಶ್ರೀಸಾಮಾನ್ಯರೇ ಆಗಿದ್ದವರು ಎಂಬುದನ್ನು ತಿಳಿಸಿತು.
ಸತ್ಯ ಹರಿಶ್ಚದ್ರ ನಾಟಕ ಗಾಂಧಿ ಅವರಲ್ಲಿ ನಡೆ-ನುಡಿ ಬದಲಾವಣೆ ಮತ್ತು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಲು ಪ್ರೇರಣೆಯಾಯಿತು. ಶಾಂತಿ-ಸಮಾನತೆಗಾಗಿ ಹಾತೊರೆಯುತ್ತಿದ್ದ ಗಾಂಧಿ ಮನಸ್ಸಿಯಲ್ಲಿ ಸುಳ್ಳು ಮತ್ತು ಅನ್ಯಾಯದ ವಿರುದ್ಧ ಎದೆಗುಂದದೆ ಹೋರಾಟ ಮಾಡುವ ಗುಣಗಳಿದ್ದವು. ಬಾಲ್ಯದಿಂದ ಮುಪ್ಪಿನವರಿಗೆಗೂ ಜೀವಿಸಿದ ಗಾಂಧಿ ನಮ್ಮ ನಡುವೆಯೇ ಮಹಾತ್ಮರಾಗಿ ರೂಪಗೊಂಡರು ಎಂಬ ಅಂಶಗಳನ್ನು ನಾಟಕ ಸಹಜವಾಗಿ ನಿರೂಪಿಸಿತು.
ಒಂದೂವರೆ ತಾಸು ನಡೆದ ಈ ರಂಗಪ್ರಯೋಗದಲ್ಲಿ ಗಾಂಧಿ-150 ಕಲಾವಿದರ ತಂಡ ತಮ್ಮ ಪಾತ್ರಕ್ಕೆ ಅಚ್ಚುಕಟ್ಟಾಗಿ ನ್ಯಾಯ ಒದಗಿಸಿತು. ನಾಟಕದಲ್ಲಿ ಎಸ್.ಎಂ.ಮಹದೇವಸ್ವಾಮಿ, ಪೂರ್ಣಿಮ ಭೈ ಗಬ್ಬೂರು, ಅಶ್ವಿನಿ ಪ್ರಸಾದ್, ಎ.ಎನ್.ವಿದ್ಯಾರಾಣಿ, ಆರ್.ದಿಲೀಪ್ ಕುಮಾರ್, ಆರ್.ಸ್ವರೂಪ, ಎಂ.ನಂದೀಶ, ಜಗದೀಶ ಕಟ್ಟಿಮನಿ, ಬಿ.ರಂಜಿತ್ ಕುಮಾರ್, ಎ.ವೆಂಕಟೇಶ್, ಲಕ್ಷ್ಮಣ ರೊಟ್ಟಿ, ಸುಮನರಾಜ್ ವೈ ಹಿಮ್ಮಡಿ, ಮಂಜುನಾಥ ಕಠಾರಿ, ಬಿ.ಕೆ.ಮಹಾಬಲೇಶ್ವರ, ಎಂ.ಗಣೇಶ, ಜಂಗಮಕೋಟೆಯ ತಿಲಕ್ ರಂಗರೂಪಕವನ್ನು ಕಟ್ಟಿಕೊಟ್ಟರು. ಗಾಂಧಿ ರಂಗಪಯಣದ ಜತೆಗೆ ಪ್ರೇಕ್ಷಕರ ಪ್ರೀತಿಯ ಸಹಯೋಗ ನಾಟಕ ಪ್ರದರ್ಶನದುದ್ದಕ್ಕೂ ಎದ್ದು ಕಾಣುತ್ತಿತ್ತು.
ಪಾಪು-ಬಾಪು ನಾಟಕ ನೋಡುಗರನ್ನು ಅನನ್ಯ ಭಾವದೆಡೆಗೆ ಕರೆದುಕೊಂಡು ಹೋಗುತ್ತದೆ. ಜನ ಸಾಮಾನ್ಯರ ದಿನನಿತ್ಯದ ಗೋಳಾಡದ ಕಥೆ, ಸಾಮಾನ್ಯ ಗಾಂಧಿ ಮಹಾತ್ಮರಾದ ಚಿತ್ರಣವನ್ನ ನಾಟಕದ ಮೂಲಕ ಅತ್ಯುತ್ತಮವಾಗಿ ಮಕ್ಕಳಿಗೆ ಮತ್ತು ಜನಸಮುದಾಯಕ್ಕೆ ನಾಟಕದ ಮೂಲಕ ತಲುಪಿಸಿದ್ದಾರೆ. ಗಾಂಧೀಜಿ ಪ್ರತಿಪಾದಿಸಿದ ಸತ್ಯ,ಶಾಂತಿ ಮತ್ತು ಅಹಿಂಸೆಯನ್ನು ಅಪ್ಪಿಕೊಳ್ಳಬೇಕು. ಕೋಮು ಸೌಹಾರ್ದತೆಯನ್ನು ಒಪ್ಪಿಕೊಳ್ಳಬೇಕು ಶಿಕ್ಷಕಿ ಪಿ.ಮಂಜುಳಾ ಕಲ್ಯಾಣ್ ಕುಮಾರ್ ಹೇಳಿದರು.