Home News ಪ್ರಗತಿಪರ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಮುಂದೂಡಿದೆ

ಪ್ರಗತಿಪರ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಮುಂದೂಡಿದೆ

0

ಮಾರ್ಚ್ ೧೧ ರಂದು ನಡೆಯಬೇಕಿದ್ದ ನಗರದ ಪ್ರಗತಿಪರ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಕಾರಣಾಂತರದಿಂದ ಮುಂದೂಡಲಾಗಿದೆ.
ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ಸಹಕಾರ ಸಂಘವನ್ನು ಮತ್ತೇ ಸ್ಥಾಪಿಸುವ ಉದ್ದೇಶದಿಂದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿಗಳೂ ಸೇರಿದಂತೆ ಸಹಕಾರ ಸಂಘದ ಕೆಲ ಷೇರುದಾರರು ನೂತನ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಮಾಡಲು ಚುನಾವಣೆ ನಡೆಸಲು ತೀರ್ಮಾನಿಸಿದ್ದರು. ಇದಕ್ಕೆ ಸಂಬಂದಿಸಿದಂತೆ ಚುನಾವಣಾ ವೇಳಾಪಟ್ಟಿ ರಚಿಸಿ ಅದರಂತೆ ಮಾರ್ಚ್ ೫ ರಂದು ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ದಿನಾಂಕ ನಿಗದಿಪಡಿಸಲಾಗಿತ್ತು.
ಅದರಂತೆ ಕೆಲವರು ನಾಮಪತ್ರ ಸಲ್ಲಿಸಲು ಮುಂದಾದಾಗ ಕೆಲವರು ಕಚೇರಿಗೆ ನುಗ್ಗಿ ಚುನಾವಣೆ ನಡೆಯುವ ಬಗ್ಗೆ ಬಹುತೇಕ ಷೇರುದಾರರಿಗೆ ಮಾಹಿತಿಯಿಲ್ಲ ಹಾಗಾಗಿ ಚುನಾವಣೆ ದಿನಾಂಕವನ್ನು ಮುಂದೂಡಿ ಎಂದು ಒತ್ತಾಯಿಸಿದರು. ನಿಯಮದಂತೆ ಮಾರ್ಚ್ ೫ ಒಂದು ದಿನ ಮಾತ್ರ ನಾಮಪತ್ರ ಸಲ್ಲಿಸಲು ಅವಕಾಶವಿದ್ದು ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರ ಹಿಂಪಡೆಯಲು ಮಾರ್ಚ್ ೭ ರವರೆಗೂ ಅವಕಾಶವಿದ್ದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವವರೆಗೂ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ಮಾರ್ಚ್ ೬ ರಂದು ಸಹ ಕೆಲವರು ನಾಮಪತ್ರ ಸಲ್ಲಿಸಿದ್ದರು.
ಅರ್ಹ ಅಭ್ಯರ್ಥಿಗಳ ಅಂತಮ ಪಟ್ಟಿ ಪ್ರಕಟಣೆ ಸೇರಿದಂತೆ ಅಭ್ಯರ್ಥಿಗಳಿಗೆ ಚುನಾವಣೆ ಚಿಹ್ನೆಗಳನ್ನು ನೀಡಲು ಬುಧವಾರ ಸಹಕಾರ ಸಂಘದ ಕಚೇರಿಯಲ್ಲಿ ಅಧಿಕಾರಿಗಳು ಸೇರಿದಾಗ ಒಂದು ಗುಂಪಿನವರು ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸುವ ಮುನ್ನ ಷೇರುದಾರರ ಲೆಡ್ಜರ್ ಪುಸ್ತಕದಲ್ಲಿ ನಾಲ್ಕು ನಕಲಿ ಷೇರುದಾರರ ಹೆಸರಿರುವ ಅನುಮಾನವಿದೆ. ಹಾಗಾಗಿ ಲೆಡ್ಜರ್ ಪುಸ್ತಕದಲ್ಲಿರುವ ಹೆಸರುಗಳನ್ನು ಪರಿಶೀಲಿಸಿ ನಂತರ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದು ಪಟ್ಟುಹಿಡಿದರು.
ಮತ್ತೊಂದು ಗುಂಪಿನ ಸದಸ್ಯರು ಹಾಲಿ ಇರುವ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಿ ಇಲ್ಲವಾದಲ್ಲಿ ಚುನಾವಣೆ ಮುಂದೂಡಿ ಎಂದು ಪಟ್ಟು ಹಿಡಿಯುವ ಮೂಲಕ ಪರಸ್ಪರ ಮಾತಿಗೆ ಮಾತು ಬೆಳೆಸಿಕೊಂಡಾಗ ಅಧಿಕಾರಿಗಳು ಕೆಲ ಕಾಲ ಸುಮ್ಮನೆ ಕೂರುವಂತಾಯಿತು. ನಂತರ ಎರಡೂ ಗುಂಪಿನ ಮುಖಂಡರೊಂದಿಗೆ ಚರ್ಚಿಸಿ ಸದ್ಯಕ್ಕೆ ಚುನಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಇಂದಿನ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ನಂತರ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಹೇಳಿ ಅಧಿಕಾರಿಗಳು ಅಲ್ಲಿಂದ ಹೊರಟರು.
ಚುನಾವಣಾಧಿಕಾರಿ ಎಚ್.ಓಬಳೇಶ್, ನಗರಸಭೆ ಮಾಜಿ ಅಧ್ಯಕ್ಷ ಅಪ್ಸರ್ಪಾಷ, ಮುಖಂಡರಾದ ಕದಿರಿಯೂಸುಫ್, ಬಾಂಬ್ ಸಮೀ, ಸೈಯ್ಯದ್, ಆದಿಲ್ಪಾಷ, ಲಕ್ಷ್ಮಿನಾರಾಯಣ ಹಾಜರಿದ್ದರು.