Home News ಬಡ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮಹಾನ್‌ ನಾಯಕ ದಿವಂಗತ ಡಿ. ದೇವರಾಜ ಅರಸು – ಶಾಸಕ...

ಬಡ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮಹಾನ್‌ ನಾಯಕ ದಿವಂಗತ ಡಿ. ದೇವರಾಜ ಅರಸು – ಶಾಸಕ ಎಂ.ರಾಜಣ್ಣ

0

ಹಿಂದುಳಿದ ವರ್ಗದ ಜನರಿಗಾಗಿ ಭೂಸುಧಾರಣಾ ಕಾಯಿದೆ, ಜೀತದಾಳು ಪದ್ದತಿ ನಿರ್ಮೂಲನೆ, ಉದ್ಯೋಗಕ್ಕಾಗಿ ಮೀಸಲಾತಿ ಸೌಲಭ್ಯ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಶಿಷ್ಯ ವೇತನ ಸೌಲಭ್ಯವನ್ನು ಕಲ್ಪಿಸುವ ಮೂಲಕ ಬಡ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮಹಾನ್‌ ನಾಯಕ ದಿವಂಗತ ಡಿ. ದೇವರಾಜ ಅರಸು ಅವರ ಕಾರ್ಯ ಸ್ಮರಣೀಯವಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ 99ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿವಂಗತ ಡಿ.ದೇವರಾಜ ಅರಸು ಅವರು ವಿಶಾಲ ದೃಷ್ಟಿಕೋನದೊಂದಿಗೆ ಸಮಾಜದ ಎಲ್ಲಾ ವರ್ಗಗಳ, ಅದರಲ್ಲಿಯೂ ವಿಶೇಷವಾಗಿ ಹಿಂದುಳಿದ ವರ್ಗಗಳ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಬಡ ಜನರ ಅನುಕೂಲಕ್ಕಾಗಿ ಭೂಸುಧಾರಣ ಕಾಯ್ದೆ ಜಾರಿ, ಜೀತದಾಳು ಪದ್ಧತಿ ನಿರ್ಮೂಲನೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮಾಜದಲ್ಲಿ ಹಿಂದುಳಿದ ವರ್ಗದ ಜನರನ್ನು ಮೇಲಕ್ಕೆತ್ತುವ ಕಾರ್ಯವನ್ನು ಪರಿಣಾಮ ಕಾರಿಯಾಗಿ ಮಾಡಿದ ಮಹಾನ್‌ ನಾಯಕರಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಮಾತನಾಡಿದ ತಹಶಿಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ಅರಸು ಅವರು ಶೋಷಿತ ಜನಾಂಗದ ಅಭಿವೃದ್ಧಿಯ ಹರಿಕಾರ ಹಾಗೂ ನೊಂದವರ ನಂದಾ ದೀಪದಂತೆ ಇದ್ದರು. ಮಹಾನ್‌ ಮಾನವತಾವಾಗಿ ಹಾಗೂ ಸಮಾಜ ಸುಧಾರಕರಾಗಿದ್ದ ಅವರು ಕೃಷಿ, ನೀರಾವರಿ, ವಿದ್ಯುತ್ ಸುಧಾರಣೆ, ಬಡವರ ಮನೆಗೆ ಬೆಳಕು ಎಂಬ ಯೋಜನೆ ಸೇರಿದಂತೆ ಇನ್ನಿತರ ಹಲವಾರು ಬಡವರ ಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದರು.ಯುವಪೀಳಿಗೆಗೆ ಈ ಮಾಹಾನ್‌ ವ್ಯಕ್ತಿಗಳ ಸಾಧನೆ ಹಾಗೂ ಆದರ್ಶದ ಪರಿಚಯ ಅತ್ಯಗತ್ಯ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2014–15ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಾದ ಕೆ.ಎಂ.ಮಂಜುನಾಥ್‌, ಎನ್‌.ಮುನಿಯಪ್ಪ, ಎಂ.ವಿ.ಗಜೇಂದ್ರ, ಡಿ.ಚಂದ್ರಬಾಬು, ಎಸ್‌.ಡಿ.ವೇಣುಗೋಪಾಲ್‌, ಎನ್‌.ನಯನ, ಸಮ್ರೀನ್‌ ತಾಜ್‌, ವಿ.ವರಲಕ್ಷ್ಮಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪಿ.ಎಲ್‌.ಡಿ ಬ್ಯಾಂಕ್‌ ಅಧ್ಯಕ್ಷ ರಾಮಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಲಕ್ಷ್ಮೀದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಡಿ.ಆರ್‌.ಶಂಕರ್‌, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎನ್‌.ಕೆ.ಗುರುರಾಜರಾವ್‌, ನಿಲಯ ಮೇಲ್ವಿಚಾರಕಿ ಎಚ್‌.ಎಂ.ಲಕ್ಷ್ಮೀದೇವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.