Home News ಬಡ ಹಾಗೂ ಮಧ್ಯಮ ವರ್ಗದವರಿಗೆ ಆರೋಗ್ಯ ಶಿಬಿರ ಉಪಯುಕ್ತ

ಬಡ ಹಾಗೂ ಮಧ್ಯಮ ವರ್ಗದವರಿಗೆ ಆರೋಗ್ಯ ಶಿಬಿರ ಉಪಯುಕ್ತ

0

ನಿರಂತರ ದುಡಿಮೆ, ಕಲುಷಿತ ನೀರಿನ ಸೇವನೆ, ಬದಲಾಗುತ್ತಿರುವ ಆಹಾರ ಪದ್ದತಿಗಳಿಂದಾಗಿ ವಿವಿಧ ಖಾಯಿಲೆಗಳಿಂದ ಜನರು ಪರಿತಪಿಸುವಂತಾಗಿದೆ ಎಂದು ಎಸ್ ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಎಸ್.ಎನ್ ಕ್ರಿಯಾ ಟ್ರಸ್ಟ್ ಹಾಗು ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಡ ಹಾಗೂ ಮಧ್ಯಮ ವರ್ಗದ ಗ್ರಾಮೀಣ ಪ್ರದೇಶದ ಜನರಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾದ್ಯವಿಲ್ಲ. ಅಂತಹವರಿಗಾಗಿ ತಮ್ಮ ಸಂಸ್ಥೆಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದು ಇಂತಹ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡು ಆರೋಗ್ಯ ತಪಾಸಣೆ ಸೇರಿದಂತೆ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಶಿಬಿರದಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನತೆ ಸೇರಿದಂತೆ ನಗರದ ಸುಮಾರು ೪೦೦೦ ಕ್ಕೂ ಅಧಿಕ ನಾಗರಿಕರು ಭಾಗವಹಿಸಿ ಮಂಡಿನೋವು, ಜಾಯಿಂಟ್ ರಿಪ್ಲೇಸ್ಮೆಂಟ್, ಮಕ್ಕಳ ಪೌಷ್ಠಿಕತೆ, ಬೆಳವಣಿಗೆ, ಗರ್ಭಕೋಶ ಹಾಗು ಸ್ತ್ರೀ ಸಂಬಂದಿತ ತೊಂದರೆ, ಕಿವಿ, ಮೂಗು ಗಂಟಲು ಸಮಸ್ಯೆ, ಪಿತ್ತಕೋಶದ ತೊಂದರೆ, ಸಕ್ಕರೆ ಖಾಯಿಲೆ ಹಾಗು ರಕ್ತದೊತ್ತಡ, ಹಲ್ಲಿನ ತೊಂದರೆಗೆ, ಕಣ್ಣಿನ ಪೊರೆ ಮತ್ತು ರೆಟಿನಾ ಸಮಸ್ಯೆ, ತಲೆನೋವು, ಪಾರ್ಶ್ವವಾಯು ಹಾಗು ನರದೌರ್ಬಲ್ಯ ತೊಂದರೆ ಸೇರಿದಂತೆ ಸೀಳು ತುಟಿ, ಸೀಳು ಅಂಗಳ ಹಾಗು ಮುಖ ದವಡೆಯ ಶಸ್ತ್ರ ಚಿಕಿತ್ಸೆಗೆ ತಪಾಸಣೆ ಮಾಡಿಸಿಕೊಂಡರು.
ಬೆಳಗ್ಗೆ ೮ ಗಂಟೆಗೆ ಶಿಬಿರ ಆರಂಭವಾಗುತ್ತಿದ್ದಂತೆ ಸಾಲುಗಟ್ಟಿ ನಿಂತಿದ್ದ ಜನರರ ಆರೋಗ್ಯ ತಪಾಸಣೆ ನಡೆಸಲು ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆಯ ೨೦ ಕ್ಕೂ ಹೆಚ್ಚು ವೈದ್ಯರು, ಸಿಬ್ಬಂದಿ ಹಾಗು ಎಸ್.ಎನ್.ಕ್ರಿಯಾ ಟ್ರಸ್ಟ್ನ ೨೦೦ ಕ್ಕೂ ಹೆಚ್ಚು ಸ್ವಯಂ ಸೇವಕರು ಸೂಕ್ತ ಮಾರ್ಗದರ್ಶನ ನೀಡಿ ಸಹಕರಿಸಿದರು.
ಪೀಪಲ್ ಟ್ರೀ ಆಸ್ಪತ್ರೆಯ ವೈದ್ಯರು ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ಉಚಿತವಾಗಿ ನೀಡಿದರು.
ಈ ಸಂದರ್ಭದಲ್ಲಿ ನಗರದ ವೃದ್ದೆಯೊಬ್ಬರಿಗೆ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ವ್ಹೀಲ್ಚೇರ್ ಉಚಿತವಾಗಿ ನೀಡಲಾಯಿತು.
ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರೈತಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಬೆಳ್ಳೂಟಿ ಸಂತೋಷ್, ಪೀಪಲ್ ಟ್ರೀ ಆಸ್ಪತ್ರೆಯ ವೈದ್ಯರಾದ ಡಾ.ಚಂದ್ರಶೇಖರ್, ಡಾ.ಸತೀಶ್ವಸಿಷ್ಠ, ವ್ಯವಸ್ಥಾಪಕ ಬಾಲಕೃಷ್ಣ, ಶಿಬಿರದ ಆಯೋಜಕ ಧನಂಜಯ ಮತ್ತಿತರರು ಹಾಜರಿದ್ದರು.

error: Content is protected !!