Home News ಬಿಜೆಪಿ ತಾಲ್ಲೂಕು ಘಟಕದಿಂದ ಮಧ್ಯರಾತ್ರಿ ಧ್ವಜಾರೋಹಣ

ಬಿಜೆಪಿ ತಾಲ್ಲೂಕು ಘಟಕದಿಂದ ಮಧ್ಯರಾತ್ರಿ ಧ್ವಜಾರೋಹಣ

0

ದೇಶಭಕ್ತಿಯೆಂದರೆ ನಮ್ಮ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು, ಸ್ವಚ್ಛ, ಸುಭದ್ರ, ಸಹ್ಯ ವಾತಾವರಣವನ್ನು ಸೃಷ್ಟಿಸುವುದಾಗಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದಲ್ಲಿ ಭಾನುವಾರ ರಾತ್ರಿ ಸ್ವಾತಂತ್ರ್ಯ ದಿನಾಚರಣೆಯ ಸವಿನೆನಪಿಗೆ ಬಿಜೆಪಿ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕವಾಗಿ ಮತ್ತು ಸಾಮಾಜಿಕವಾಗಿ ದೇಶಕ್ಕಾಗಿ ಒಳಿತನ್ನು ಮಾಡುವ ಪ್ರಯತ್ನವೇ ನಿಜವಾದ ದೇಶಭಕ್ತಿ. ನಿಜವಾದ ದೇಶಭಕ್ತನಾದರೆ ಆತ ನನ್ನ ದೇಶ ನನಗೇನು ಕೊಟ್ಟಿದೆ ಎಂದು ಎಂದೂ ಕೇಳುವುದಿಲ್ಲ. ಬದಲಿಗೆ ನನ್ನ ದೇಶಕ್ಕೆ ನಾನೇನು ಕೊಟ್ಟೆ ಎಂದೇ ಕೇಳಕೊಳ್ಳುತ್ತಿರುತ್ತಾನೆ. ನಾವು ಕೇಳದಿದ್ದರೂ ದೇಶ ನಮಗೆ ಸಕಲವನ್ನೂ ಕೊಟ್ಟಿರುತ್ತದೆ. ನಿಲ್ಲಲು ನೆಲೆಯನ್ನು, ವಿದ್ಯೆಯನ್ನು. ವೃತಿಯನ್ನು, ಸೇವೆಮಾಡಲು ಅವಕಾಶವನ್ನು, ಗೌರವವನ್ನು , ಸರ್ವವನ್ನೂ ಆದರೆ ಕೇಲವೊಮ್ಮೆ ಅವುಗಳನ್ನೆಲ್ಲಾ ಸಮರ್ಥವಾಗಿ ಉಪಯೋಗಿಸುವಲ್ಲಿ ನಾವೇ ಎಡವಿ ಬಿದ್ದಿರುತ್ತೇವೆ. ಭಾರತ ಅಮೇರಿಕ ಆಗಲಿ ಎಂದು ಆಶಿಸುವ ಬದಲು, ಭಾರತ ನಿಜವಾದ ಅರ್ಥದಲ್ಲಿ ಭಾರತವಾಗಿ ಉಳಿಯಲಿ ಎಂದು ಬಯಸೋಣ ಎಂದು ಹೇಳಿದರು.
ನಗರದ ಅರಳೇ ಪೇಟೆಯ ಬಸವೇಶ್ವರ ದೇವಾಲಯದ ಆವರಣದಿಂದ ಪಂಜಿನ ಮೆರವಣಿಗೆಯಲ್ಲಿ ಪ್ರಾರಂಭಿಸಿ ಅಶೋಕ ರಸ್ತೆ, ವಾಸವಿ ರಸ್ತೆ, ಸಂತೆ ಬೀದಿ, ಟಿ.ಬಿ.ರಸ್ತೆ, ದಿಬ್ಬೂರಹಳ್ಳಿ ರಸ್ತೆ ಸೇರಿದಂತೆ ಮುಖ್ಯ ಬೀದಿಗಳಲ್ಲಿ ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯನ್ನು ನಡೆಸಿದರು. ಮಧ್ಯರಾತ್ರಿ 12 ಗಂಟೆಗೆ ಹೂವಿನ ವೃತ್ತದಲ್ಲಿ ಧ್ವಜಾರೋಹಣವನ್ನು ನೆರವೇರಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀರಾಮರೆಡ್ಡಿ, ಸುರೇಂದ್ರಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರರೆಡ್ಡಿ, ಮುನಿರಾಜು, ಪುರಸಭಾ ಸದಸ್ಯ ರಾಘವೇಂದ್ರ, ಸುಜಾತಮ್ಮ, ಮಂಜುಳಮ್ಮ, ಪುರುಷೋತ್ತಮ್, ಅಶ್ವಕ್ ಅಹ್ಮದ್, ನರೇಶ್, ದಾಮೋದರ್, ಮುನಿವೆಂಕಟಪ್ಪ, ರವಿ ಮತ್ತಿತರರು ಹಾಜರಿದ್ದರು.