Home News ಬಿಜೆಪಿ ಸೇರುವಂತೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ – ಶಾಸಕ ಎಂ.ರಾಜಣ್ಣ ಸ್ಪಷ್ಟನೆ

ಬಿಜೆಪಿ ಸೇರುವಂತೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ – ಶಾಸಕ ಎಂ.ರಾಜಣ್ಣ ಸ್ಪಷ್ಟನೆ

0

ಬಿಜೆಪಿಗೆ ಸೇರುವಂತೆ ಬಿಜೆಪಿ ಮುಖಂಡರು ನನ್ನನ್ನು ಸಂಪರ್ಕಿಸಿರುವುದಾಗಿ ಮಾದ್ಯಮಗಳಲ್ಲಿ, ವ್ಯಾಟ್ಸಾಪ್ಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರ. ಅದರಲ್ಲಿ ಎಳ್ಳಷ್ಟು ಸತ್ಯವೂ ಇಲ್ಲ ಎಂದು ಶಾಸಕ ಎಂ.ರಾಜಣ್ಣ ಸ್ಪಷ್ಟಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಶಾಸಕ ಎಂ.ರಾಜಣ್ಣ ಪತ್ರಿಕಾಗೋಷ್ಟಿ ನಡೆಸಿ, ನನ್ನನ್ನು ಬಿಜೆಪಿ ಸೇರುವಂತೆ ಬಿಜೆಪಿ ಮುಖಂಡರು ನನಗೆ ಗಾಳ ಹಾಕಿರುವುದಾಗಿ ಮಾದ್ಯಮಗಳು, ವ್ಯಾಟ್ಸಾಪ್ಗಳಲ್ಲಿ ಹರಿದಾಡುತ್ತಿರುವುದು ಕೇವಲ ವದಂತಿಯಷ್ಟೆ ಎಂದು ಸ್ಪಷ್ಟಪಡಿಸಿದರು.
ನಾನು ರಾಜಕೀಯ ಆರಂಭಿಸಿದ್ದೇ ಜೆಡಿಎಸ್ನಿಂದ, ನನ್ನ ಬೆಳವಣಿಗೆಯೂ ಜೆಡಿಎಸ್ನಿಂದಲೆ ಆಗಿದೆ. ಹಾಗಾಗಿ ನಾನು ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಸೇರುವುದು ಕನಸಿನಲ್ಲಿಯೂ ನಡೆಯದ ಮಾತು ಎಂದರು.
ನನ್ನನ್ನು ಬಿಜೆಪಿ ಅಥವಾ ಇನ್ನಾವುದೆ ಪಕ್ಷದ ಮುಖಂಡರು ರಾಜಕೀಯ ಕಾರಣಕ್ಕಾಗಿ ಭೇಟಿ ಮಾಡಿಲ್ಲ. ನನ್ನ ಮಗಳ ಮದುವೆ ಇರುವ ಕಾರಣ ಅಧಿವೇಶನದಲ್ಲಿ ಭಾಗವಹಿಸಲು ಆಗದ ಬಗ್ಗೆ ಪಕ್ಷದ ವರಿಷ್ಠರಿಗೂ ವಿಚಾರ ತಿಳಿಸಿದ್ದೇನೆ. ಮದುವೆ ಆಹ್ವಾನ ಪತ್ರಿಕೆ ನೀಡುವುದಕ್ಕಾಗಿ ಎಲ್ಲ ಪಕ್ಷದಲ್ಲಿನ ನನ್ನ ಸ್ನೇಹಿತರಿಗೂ, ನಮ್ಮ ಪಕ್ಷದ ಎಲ್ಲರಿಗೂ ಆಹ್ವಾನ ಪತ್ರಿಕೆ ನೀಡುತ್ತಿದ್ದೇನೆ. ಕೆಲ ಮಾದ್ಯಮಗಳಲ್ಲಿ ಹಾಗೂ ವ್ಯಾಟ್ಸಾಪ್, ಫೇಸ್ಬುಕ್ಗಳಲ್ಲಿ ನನ್ನನ್ನು ಬಿಜೆಪಿ ಪಕ್ಷಕ್ಕೆ ಸೆಳೆಯಲು ಕಸರತ್ತುಗಳು ನಡೆದಿವೆ ಎಂಬ ವದಂತಿಯನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ನಗರಸಭೆ ಹಿರಿಯ ಸದಸ್ಯ ಬಿ.ಅಫ್ಸರ್ ಪಾಷ, ಮುಖಂಡರಾದ ಎಸ್.ರಹಮತ್ತುಲ್ಲ, ಕನಕಪ್ರಸಾದ್, ಸೋಮಶೇಖರ್, ಸುರೇಂದ್ರ ಈ ಸಂದರ್ಭದಲ್ಲಿ ಹಾಜರಿದ್ದರು.