ಬೆಟ್ಟದ ಜೇನುನೊಣಗಳ ಧಾಳಿಯಿಂದ ತಾಲ್ಲೂಕಿನ ಜಯಂತಿ ಗ್ರಾಮದ ಹತ್ತು ಮಂದಿ ಅಸ್ವಸ್ಥರಾಗಿ ಸಾರ್ವಜನಿಕ ಆಸ್ವತ್ರೆಗೆ ದಾಖಲಾಗಿರುವ ಘಟನೆ ಬುಧವಾರ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಜಯಂತಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ತೋಟದಲ್ಲಿ ಹಿಪ್ಪು ನೇರಳೆ ಬೆಳೆಗೆ ಗೊಬ್ಬರ ಹಾಕುವಾಗ ಪಕ್ಕದಲ್ಲಿ ಗೊಡಂಬಿ ಬೆಳೆ ಇದ್ದ ಕಾರಣ ಅಲ್ಲಿಗೆ ಧಾವಿಸಿದ ಜೇನು ನೊಣದ ಗುಂಪು ಗೊಬ್ಬರ ಹಾಕುತ್ತಿದ್ದ ಜನರ ಮೇಲೆ ಏಕಾಏಕಿ ಧಾಳಿ ಮಾಡಿದೆ. ಜೇನುಗಳ ಧಾಳಿಯಿಂದ ಕಂಗಾಲಾದ ಜನರು ಅಕ್ಕ ಪಕ್ಕದ ತೋಟಗಳಿಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಜೇನುಗಳಿಂದ ಹೆಚ್ಚು ಕಡಿತಕ್ಕೊಳಗಾದ ದ್ಯಾವಮ್ಮ ಎಂಬುವವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿದೆ. ಅವರೊಂದಿಗೆ ಜೇನು ಕಡಿತಕ್ಕೊಳಗಾದ ಮಮತ, ಲಕ್ಷ್ಮಮ್ಮ, ಗಂಗಪ್ಪ, ಮಂಜುಳ, ಸ್ವಪ್ನ, ನಾಗೇಶ್, ನಾರಾಯಣಸ್ವಾಮಿ ಅವರುಗಳೂ ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದರು.