Home News ಬೆಳೆ ವಿಮೆ ಮಾಡಿಸಲು ರೈತರು ಮುಂದಾಗಬೇಕು

ಬೆಳೆ ವಿಮೆ ಮಾಡಿಸಲು ರೈತರು ಮುಂದಾಗಬೇಕು

0

ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯ ಮುಂಗಾರು- ೨೦೧೬ ರ ವಿಮೆಯನ್ನು ಮಾಡಿಸಲು ಜುಲೈ ೩೦ ರಂದು ಕೊನೆಯ ದಿನವಾಗಿದ್ದು ನಿಗದಿತ ಅವಧಿಯೊಳಗೆ ವಿಮೆ ಮಾಡಿಸಲು ರೈತರು ಮುಂದಾಗಬೇಕು ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್ ಮನವಿ ಮಾಡಿದರು.
ನಗರದದಲ್ಲಿ ಶನಿವಾರ ಈ ಬಗ್ಗೆ ಸುದ್ದಿಘೋಷ್ಠಿ ನಡೆಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ೨೦೧೬ ರ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಅನುಷ್ಟಾನಗೊಳಿಸಲು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿದೆ. ರಾಜ್ಯದಲ್ಲಿ ಈ ಯೋಜನೆಯು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಎಂಬ ಹೆಸರಿನಲ್ಲಿ ಅನುಷ್ಟಾನಕ್ಕೆ ಬಂದಿದೆ ಎಂದರು.
ಜಿಲ್ಲೆಯಲ್ಲಿ ಅಧಿಸೂಚಿತ ಬೆಳೆಗಳಾದ ರಾಗಿ (ಮಳೆಯಾಶ್ರಿತ ಮತ್ತು ನೀರಾವರಿ) ಭತ್ತ, (ನೀರಾವರಿ) ಮುಸುಕಿನ ಜೋಳ (ಮಳೆಯಾಶ್ರಿತ ಮತ್ತು ನೀರಾವರಿ) ತೊಗರಿ (ಮಳೆಯಾಶ್ರಿತ ಮತ್ತು ನೀರಾವರಿ) ಹುರುಳಿ (ಮಳೆಯಾಶ್ರಿತ) ನೆಲೆಗಡಲೆ (ಮಳೆಯಾಶ್ರಿತ) ಅವರೆ (ಮಳೆಯಾಶ್ರಿತ) ಬೆಳೆಗಳನ್ನು ಬೆಳೆಯುವ ರೈತರು ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ.
ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಲು ಆಯ್ಕೆಯ ಅವಕಾಶವಿದೆ, ಆದರೆ ಅಧಿಸೂಚಿತ ಬೆಳೆಗಳಿಗೆ ಬೆಳೆಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆವಿಮೆಗೆ ಒಳಪಡಿಸಲಾಗುವುದು.
ಯೋಜನೆಯ ಉದ್ದೇಶ: ಸ್ಥಳ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಸಂಧರ್ಭದಲ್ಲಿ ಬೆಳೆ ನಷ್ಟವುಂಟಾದರೆ ವೈಯಕ್ತಿಕ ನಷ್ಟದ ಆರ್ಥಿಕ ಭದ್ರತೆಯನ್ನು ನೀಡುವುದು. ಕಟಾವಿನ ನಂತರ ವಾರದೊಳಗಾಗಿ (೧೪ ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾದಲ್ಲಿ ನಷ್ಟ ಪರಿಹಾರವನ್ನು ನೀಡುವುದು ಮುಖ್ಯ ಉದ್ದೇಶವಾಗಿದೆ, ಬೆಳೆ ಸಾಲ ಪಡೆಯದ ರೈತರು ಪ್ರತಿ ಎಕರೆ ರಾಗಿ ಬೆಳೆಗೆ ರೂ ೨೭೨ ರೂಗಳನ್ನು ಮತ್ತು ಮುಸುಕಿನ ಜೋಳ ಬೆಳೆಗೆ ೩೮೪ ರೂಗಳ ವಿಮೆಯ ಕಂತನ್ನು ಭರಿಸಬೇಕಾಗುತ್ತದೆ. ಬ್ಯಾಂಕುಗಳಿಂದ ಸಾಲ ಪಡೆಯದ ರೈತರು ಹಾಗೂ ಸಾಲ ಪಡೆದ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಸಲ್ಲಿಸಲು ಜುಲೈ ೩೦ ಕೊನೆಯ ದಿನವಾಗಿರುತ್ತದೆ.
ಈಗಾಗಲೇ ಯೋಜನೆಯ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದ್ದಾರಾದರೂ ಪ್ರತಿ ಸಣ್ಣ ರೈತರಿಗೂ ಇದರ ಮಾಹಿತಿ ಮುಟ್ಟಲಿ ಹಾಗು ಇದರ ಸದುಪಯೋಗವನ್ನು ಪ್ರತಿ ರೈತರು ಪಡೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಕೆ.ಆರ್.ಸುರೇಂದ್ರಗೌಡ, ರಮೇಶ್ಬಾಯಿರಿ, ರೈತ ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ದೊಣ್ಣಹಳ್ಳಿ ರಾಮಣ್ಣ, ಮುಖಂಡರಾದ ಕೃಷ್ಣಮೂರ್ತಿ, ಇರಗಪ್ಪನಹಳ್ಳಿ ನಾರಾಯಣಸ್ವಾಮಿ, ದಾಮೋದರ್, ಮಂಜುಳಮ್ಮ ಹಾಜರಿದ್ದರು.