ತಾಲ್ಲೂಕಿನ ಒಂಬೈನೂರು ವರ್ಷಗಳಷ್ಟು ಹಳೆಯದಾದ ಚಿಕ್ಕದಾಸರಹಳ್ಳಿ ಬಳಿಯಿರುವ ಗುಟ್ಟದ ಮೇಲಿನ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಾತ್ರಿ ಹುಂಡಿಯನ್ನು ಒಡೆದು ಹಣವನ್ನು ದೋಚಲಾಗಿದೆ.
ದಕ್ಷಿಣ ದಿಕ್ಕಿನ ಮುಖ್ಯ ಬಾಗಿಲನ್ನು ಮುರಿದಿರುವ ಕಳ್ಳರು ಹುಂಡಿಯನ್ನು ಒಡೆದು ಅದರಲ್ಲಿರುವ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಾಲಯಕ್ಕೆ ಉಪ ತಹಶೀಲ್ದಾರ್ ಮುನಿಕೃಷ್ಣಪ್ಪ, ರಾಜಸ್ವ ನಿರೀಕ್ಷಕ ಮೋಹನ್, ಮುಜರಾಯಿ ಇಲಾಖೆಯ ಅಧಿಕಾರಿ ಭಾಗ್ಯಮ್ಮ, ಗ್ರಾಮ ಲೆಕ್ಕಿಗ ನಾಗರಾಜು ಭೇಟಿ ನೀಡಿ ಅರ್ಚಕರಿಂದ ದೂರನ್ನು ಪಡೆದರು.
‘ಕಳೆದ ಡಿಸೆಂಬರ್ ತಿಂಗಳಿನಲ್ಲಿ ನೋಟು ಅಮಾನ್ಯೀಕರಣದ ಕಾರಣ ಹುಂಡಿಯನ್ನು ತೆರೆಯಲಾಗಿತ್ತು. ಆ ನಂತರ ಬ್ರಹ್ಮರಥೋತ್ಸವ ನಡೆದಿತ್ತು. ಸುಮಾರು 50 ಸಾವಿರ ರೂಗಳಷ್ಟು ಹಣವಿದ್ದಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ಗ್ರಾಮದ ಹಿರಿಯರಾದ ಬ್ಯಾಟರಾಯಶಟ್ಟಿ ತಿಳಿಸಿದರು.