ನಗರದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಎಂ.ದಯಾನಂದ್ ಮಾತನಾಡಿದರು.
ಭರತ ಖಂಡವು ಕಂಡ ಮಹಾನ್ ದಾರ್ಶನಿಕರಾದ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸುವ ಮೂಲಕ ಈ ಮಹಾನ್ ಧಾರ್ಮಿಕ ಚಿಂತಕ, ಸಮಾಜ ಸುಧಾರಕರಿಗೆ ಗೌರವ ಸಲ್ಲಿಸುತ್ತಿದ್ದೇವೆ. 19ನೆಯ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಬದುಕಿ ಹೋದ ಮಹಾನ್ ಸಂತರಾದ ನಾರಾಯಣ ಗುರುಗಳ ಬದುಕು ಸದಾ ಪ್ರೇರಣಾದಾಯಕ ಎಂದು ಅವರು ತಿಳಿಸಿದರು.
ನಾರಾಯಣ ಗುರುಗಳು ಕೇರಳದ ತಿರುವನಂತಪುರದ ಹತ್ತಿರದ ಹಳ್ಳಿಯ ಅಂದು “ಅಸ್ಪೃಶ್ಯ” ಎಂದು ಪರಿಗಣಿಸಲ್ಪಟ್ಟಿದ್ದ ಈಳವ ಸಮುದಾಯದಲ್ಲಿ ಜನಿಸಿದ್ದರೂ, ಮುಂದೆ ಇಡೀ ಕೇರಳದ ಲಕ್ಷಾಂತರ ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನೇ ತಂದರು. ನಾರಾಯಣ ಗುರುಗಳು ನಡೆಸಿದ ಸುಧಾರಣಾ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಎಲ್ಲೆಲ್ಲಿ ದೇವಸ್ಥಾನಗಳನ್ನು ಸ್ಥಾಪಿಸಲಾಗುತ್ತದೆಯೋ ಅಲ್ಲಿ ಗ್ರಂಥಾಲಯಗಳಿರಬೇಕು, ಹತ್ತಿರದಲ್ಲಿ ಶಾಲೆಗಳನ್ನು ತೆರೆಯಬೇಕು. ಜ್ಞಾನಾರ್ಜನೆಗೆ ಅವಕಾಶವಿರಬೇಕು. ಆದ್ಯಾತ್ಮಿಕ ತಿಳಿವಳಿಕೆ ನೀಡಬೇಕು. ಜನರನ್ನು ಕಂದಾಚಾರಗಳಿಂದ ಹೊರತರಬೇಕು. ಮದುವೆಗಳನ್ನು ಸರಳವಾಗಿ ನಡೆಸಲು ಪ್ರೇರೇಪಿಸಬೇಕು, ಮುಂತಾಗಿ ಅನೇಕ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂದು ವಿವರಿಸಿದರು.
ಕೆಳ ಜಾತಿಯವರಿಗಾಗಿಯೇ ರಾತ್ರಿ ಶಾಲೆಗಳನ್ನು ತೆರೆದರು. ಇದರ ಪರಿಣಾಮವಾಗಿ ಒಂದು ಶಿಕ್ಷಣ ಕ್ರಾಂತಿಯೇ ನಡೆದು ಹೋಯಿತು. ಅನೇಕ ಬಗೆಯ ಸ್ವಯಂ ಉದ್ಯೋಗಗಳನ್ನು ನಡೆಸಲು ಪ್ರೇರೇಪಿಸಿದರು. ನಾರಾಯಣ ಗುರುಗಳು ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿ ಕಾಣಿಸಿಕೊಂಡರೂ ತಮ್ಮ ಚಿಂತನೆ ಮತ್ತು ಕೆಲಸಗಳ ಮೂಲಕ ತಾವೊಬ್ಬ ಅದ್ವಿತೀಯ ಸಮಾಜ ಸುಧಾರಕೆಂಬುದನ್ನು ಸಾಧಿಸಿ ತೋರಿಸಿದರು. ಕುಸಿದು ಕುಳಿತಿದ್ದ ಜನತೆಯಲ್ಲಿ ಸ್ವಾಭಿಮಾನ ತುಂಬಿದರು, ಅರಿವಿನ ಬೆಳಕು ತೋರಿದರು ಎಂದು ಹೇಳಿದರು.
ಸಾದಲಿ ಎಸ್.ಎನ್.ವೆಂಕಟಾಚಲಪತಿ, ಎಸ್.ಎ.ನಾಗರಾಜು, ನಾಣೆಪ್ಪ, ನವೀನ್ ಕುಮಾರ್, ಎಸ್.ಗೊಲ್ಲಹಳ್ಳಿ ವೆಂಕಟೇಶ್, ದ.ಸಂ.ಸ ಜಿಲ್ಲಾ ಸಂಚಾಲಕ ಮುನಯ್ಯ, ಪೌರಾಯುಕ್ತ ಚಲಪತಿ ಹಾಜರಿದ್ದರು.