ನಗರದಲ್ಲಿ ಭಾನುವಾರ ರಾತ್ರಿ ಬಿದ್ದ ಮಳೆಯಿಂದ ನಗರದ ಮಯೂರ ವೃತ್ತದಲ್ಲಿ ಯು.ಜಿ.ಡಿ ನೀರು ಮನೆಗಳಿಗೆ ನುಗ್ಗಿದ ಕಾರಣ ಆಕ್ರೋಷಗೊಂಡ ಸಾರ್ವಜನಿಕರು ಸೋಮವಾರ ಬೆಳಿಗ್ಗೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ನಗರದಲ್ಲಿ ಎಲ್ಲಾ ವಾರ್ಡ್ಗಳಲ್ಲಿ ಯು.ಜಿ.ಡಿ ಅಳವಡಿಸಲಾಗಿದ್ದು, ತ್ಯಾಜ್ಯ ನೀರು ಕೆರೆಗಳಿಗೆ ಹರಿದು ಹೋಗಲು ಮಯೂರ ವೃತ್ತದ ಮೂಲಕ ಪೈಪ್ ಲೈನ್ ಹಾಕಲಾಗಿದೆ. ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿಯಿಂದಾಗಿ ಯುಜಿಡಿ ಮುಚ್ಚಿಹೋಗಿದ್ದು ಹಾಗಾಗಿ ರಾತ್ರಿ ಬಿದ್ದ ಮಳೆಯಿಂದ ಯು.ಜಿ.ಡಿ ನೀರು ಮನೆಗಳಿಗೆ ನುಗ್ಗಿದೆ. ಜನರು ನಗರಸಭಾ ಅಧಿಕಾರಿಗಳ ಮೇಲೆ ಶಾಪ ಹಾಕಿದರು.
ಸುಮಾರು ೧೫ ದಿನಗಳ ಹಿಂದೆಯೇ ನಗರಸಭೆಗೆ ದೂರು ನೀಡಲಾಗಿದ್ದರೂ ಅಧಿಕಾರಿಗಳು ಚುನಾವಣೆಯ ನೆಪ ಹೇಳಿ ಯು.ಜಿ.ಡಿ ಸ್ವಚ್ಚ ಮಾಡದೇ ಇರುವುದರಿಂದ ಬಿದ್ದ ನೀರು ಹರಿದುಹೋಗಲು ಸ್ಥಳವಿಲ್ಲದೆ ಯು.ಜಿ.ಡಿ ನೀರು ಮನೆಗಳಿಗೆ ನುಗ್ಗಿ ದುರ್ನಾತ ಬೀರುತ್ತಿದೆ. ರಾತ್ರಿಯೆಲ್ಲಾ ಜನರು ಕಷ್ಟ ಪಡುವಂತಾಗಿದ್ದು, ಕೂಡಲೇ ಅಧಿಕಾರಿಗಳು ಯು.ಜಿ.ಡಿ ಸ್ಚಚ್ಚಗೊಳಿಸಬೇಕು ಎಂದು ಒತ್ತಾಯಿಸಿದರು.
‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ಹಾಕುವಾಗ ಆಗುವ ತೊಂದರೆಗಳನ್ನು ನಿವಾರಿಸಲು ಸುಮಾರು ೭೪ ಲಕ್ಷ ಹಣ ನೀಡಿದ್ದಾರೆ. ಅಧಿಕಾರಿಗಳು ಯಾವುದೇ ಕೆಲಸ ಮಾಡಿಲ್ಲ. ಕೂಡಲೇ ಕ್ರಮ ಕೈಕೊಳ್ಳಬೇಕು’ ಎಂದು ಸ್ಥಳೀಯ ರಾಜ್ಕುಮಾರ್ ಒತ್ತಾಯಿಸಿದರು.
ಸಾರ್ವಜನಿಕರು ಪ್ರತಿಭಟನೆ ಮುಂದುವರೆಸಿದಾಗ ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ನವೀನ್ ಸಾರ್ವಜನಿರೊಂದಿಗೆ ಮಾತನಾಡಿದರು. ನಂತರ ಅವರು ನಗರಸಭಾ ಆಯುಕ್ತ ಅವರೊಂದಿಗೆ ಮಾತನಾಡಿ ಯು.ಜಿ.ಡಿ ಸ್ವಚ್ಚಗೊಳಿಸುವಂತೆ ತಿಳಿಸಿ ಜನರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.