Home News ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನಾವು ಬಿಟ್ಟುಹೋಗಬೇಕು

ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನಾವು ಬಿಟ್ಟುಹೋಗಬೇಕು

0

ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನಾವು ಬಿಟ್ಟುಹೋಗಬೇಕು. ಅದೇ ನಾವು ಅವರಿಗೆ ನೀಡಬಹುದಾದ ಅತ್ಯುತ್ತಮ ಕೊಡುಗೆ. ಪರಿಸರವನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರಿಂದಲೂ, ಎಲ್ಲಾ ಸಮಯದಲ್ಲೂ ಆಗಬೇಕಿದೆ ಎಂದು ಮಳ್ಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಧ ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯ್ತಿಯಿಂದ ಉದ್ಯೋಗಖಾತ್ರಿ ಯೋಜನೆಯಡಿ ಶುಕ್ರವಾರ ಮಳ್ಳೂರು ಗ್ರಾಮದಲ್ಲಿ ೧೫೦೦ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗಿಡಮರಗಳನ್ನು ಬೆಳೆಸುವುದರಿಂದ ಉತ್ತಮ ಮಳೆಯಾಗುವುದಷ್ಟೇ ಅಲ್ಲದೇ ಜನರ ಆರೋಗ್ಯವೂ ಸುಧಾರಿಸುತ್ತದೆ ಹಾಗು ಮುಂದಿನ ಪೀಳಿಗೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಹಿಂದೆ ಪರಿಸರವೆಲ್ಲಾ ಹಸಿರಿನಿಂದ ಕೂಡಿದ್ದು ಸಕಾಲದಲ್ಲಿ ಮಳೆ ಬೆಳೆಗಳಾಗುವುದರೊಂದಿಗೆ ಆರೋಗ್ಯವೂ ಉತ್ತಮವಾಗಿತ್ತು. ಆದರೆ ಇದೀಗ ನಮ್ಮಲ್ಲಿದ್ದ ಗಿಡ ಮರಗಳನ್ನು ನಾವೇ ಕಡಿದುಹಾಕಿದ್ದರಿಂದ ತಾಪಮಾನ ಹೆಚ್ಚಾಗುವುದು ಸೇರಿದಂತೆ ಸಕಾಲದಲ್ಲಿ ಮಳೆ ಬೆಳೆಗಳಾಗದೇ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ.
ಇನ್ನಾದರೂ ನಾವು ಎಚ್ಚೆತ್ತುಕೊಂಡು ಮನೆಗೊಂದು ಸಸಿ ನೆಟ್ಟು ಅದನ್ನು ತಮ್ಮ ಮಕ್ಕಳಂತೆ ಪೋಷಿಸದೇ ಹೋದಲ್ಲಿ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸಸಿ ನೆಟ್ಟು ಪೋಷಿಸಲು ಮುಂದಾಗಬೇಕು ಎಂದರು.
ಗ್ರಾಮ ಪಂಚಾತ್ತಿ ಅಭಿವೃದ್ಧಿ ಅಧಿಕಾರಿ ಸುಧಾಮಣಿ ಮಾತನಾಡಿ ಯಾವುದೇ ವ್ಯಕ್ತಿ ತನ್ನ ಜೀವಮಾನವಿಡೀ ಏನು ಸಾಧನೆ ಮಾಡದಿದ್ದರೂ ಸರಿಯೆ. ಕನಿಷ್ಟ ಕೆಲವೊಂದು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿದರೂ ಸಾಕು. ಅದು ಈ ಪ್ರಕೃತಿಗೆ ಆತ ನೀಡುವ ಬೆಲೆ ಕಟ್ಟಲಾಗದ ದೊಡ್ಡ ಕೊಡುಗೆಯಾಗಲಿದೆ ಎಂದರು.
ಮಳ್ಳೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂ,ವಿ.ಗೋಪಾಲಪ್ಪ, ಸದಸ್ಯ ರವಿ, ಗ್ರಾಮದ ಮುಖಂಡರಾದ ಗಿರೀಶ್, ಅಶೋಕ್, ನರೇಗಾ ಜೆಇ ಹರೀಶ್ ಈ ಸಂದರ್ಭದಲ್ಲಿ ಹಾಜರಿದ್ದರು.