Home News ಮ್ಯಾನ್ಮಾರ್ ನ ರೋಹಿಂಗ್ಯ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ

ಮ್ಯಾನ್ಮಾರ್ ನ ರೋಹಿಂಗ್ಯ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ

0

ಮ್ಯಾನ್ಮಾರ್ ನ ರೋಹಿಂಗ್ಯ ಮುಸ್ಲಿಮರ ಮೇಲೆ ಅಲ್ಲಿನ ಭದ್ರತಾ ಪಡೆಗಳು ನಡೆಸುತ್ತಿರುವ ದೌರ್ಜನ್ಯ, ಸಾಮೂಹಿಕ ಹತ್ಯೆ ಹಾಗೂ ಅತ್ಯಾಚಾರವನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಮುಸ್ಲೀಮರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಜಾಮಿಯಾ ಮಸೀದಿ ಮುಖಂಡರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಎ.ಪಿ.ಜೆ ಅಬ್ದುಲ್ ಕಲಾಂ ಚಾರಿಟಬಲ್ ಟ್ರಸ್ಟ್ ಸದಸ್ಯರು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಮ್ಯಾನ್ಮಾರ್ ನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದರು.
ಕಳೆದ ವರ್ಷ ದಿಂದ ಸುಮಾರು 70 ಸಾವಿರದಷ್ಟು ರೋಹಿಂಗ್ಯ ಮುಸ್ಲಿಮರು ತಮ್ಮ ದೇಶದಲ್ಲಿ ದಬ್ಬಾಳಿಕೆಗೆ ಹೆದರಿ ಬಾಂಗ್ಲಾದೇಶಕ್ಕೆ ಪಾಲಾಯನ ಮಾಡಿದ್ದಾರೆ. ಮಾನವತೆಯನ್ನು ಮರೆತಿರುವ ಮ್ಯಾನ್ಮಾರ್ ನ ಮಿಲಿಟರಿ ಕಾರ್ಯಾಚರಣೆಯಿಂದ ಲೆಕ್ಕವಿಲ್ಲದಷ್ಟು ಮುಸ್ಲೀಮರು ಹತರಾಗಿದ್ದಾರೆ. ಇದನ್ನು ಸಾರ್ವತ್ರಿಕವಾಗಿ ಖಂಡಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿ ಪ್ರತಿಭಟನಾಕಾರರು ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಪ್ಯಾರೆಗಾನ್ ಮೈದಾನಕ್ಕೆ ತೆರಳಿ ಮ್ಯಾನ್ಮಾರ್ ನಲ್ಲಿ ಸತ್ತಿರುವವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಾಲ್ಲೂಕು ಅಧ್ಯಕ್ಷ ಮೊಹಮ್ಮದ್ ನಿಜಾಮುದ್ದೀನ್, ಎ.ಪಿ.ಜೆ ಅಬ್ದುಲ್ ಕಲಾಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಯ್ಯದ್ ಮುಕ್ತಿಯಾರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತಾಲ್ಲೂಕು ಅಧ್ಯಕ್ಷ ಜಿಯಾವುಲ್ಲ, ನಿಸಾರ್, ಷರೀಫ್, ಜಾಮಿಯಾ ಮಸೀದಿ ಕಾರ್ಯದರ್ಶಿ ಹೈದರಾಲಿ, ಆರಿಫ್ ಪಾಷ, ಫಯಾಜ್ ಹಾಜರಿದ್ದರು.