Home News ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತಿ ಚುನಾವಣೆಯ ಬಹಿಷ್ಕಾರವನ್ನು ಹಿಂಪಡೆಯುವುದಿಲ್ಲ

ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತಿ ಚುನಾವಣೆಯ ಬಹಿಷ್ಕಾರವನ್ನು ಹಿಂಪಡೆಯುವುದಿಲ್ಲ

0

‘ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತಿ ಚುನಾವಣೆಯ ಬಹಿಷ್ಕಾರವನ್ನು ಹಿಂಪಡೆಯುವುದಿಲ್ಲ, ಇದು ನಮ್ಮ ಸ್ವಾಭಿಮಾನದ ಪ್ರಶ್ನೆ, ಗ್ರಾಮ ದೇವತೆಯ ಹೆಸರಿನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಜನತೆ ಪಕ್ಷ ಬೇಧ ಮರೆತು ಬಹಿಷ್ಕಾರ ಮಾಡಿದ್ದೇವೆ. ಶಾಶ್ವತ ನೀರಿಗಾಗಿ ನಾವು ಈ ಭಾಗದ ಜನತೆಯ ಹಿತದೃಷ್ಠಿಯಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಯಾವ ಪಂಚಾಯತಿಯವರಾದರೂ ಚುನಾವಣೆ ಮಾಡಿಕೊಳ್ಳಲಿ. ನಾವಂತೂ ನಾಮಪತ್ರ ಸಲ್ಲಿಸಲ್ಲ’ ಎಂದು ಅಬ್ಲೂಡು ಪಂಚಾಯತಿಯ ನಾಗರಿಕರು ಗುರುವಾರ ಖಡಾಖಂಡಿತವಾಗಿ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿಯ ಎಲ್ಲಾ ಹಳ್ಳಿಗಳ ಜನರು ಗ್ರಾಮಪಂಚಾಯತಿಯ ಚುನಾವಣೆಯಲ್ಲಿ ನಾಮಪತ್ರಗಳನ್ನೂ ಹಾಕದೆ ಚುನಾವಣೆ ಬಹಿಷ್ಕಾರ ಮಾಡಿರುವ ಬಗ್ಗೆ ಮಾದ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ಧಿಗಳನ್ನು ಆಧರಿಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕಳುಹಿಸಿದ್ದ ಪತ್ರವನ್ನಾಧರಿಸಿ ಗ್ರಾಮಕ್ಕೆ ಆಗಮಿಸಿದ್ದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾಂಜಿನಪ್ಪ ಅವರು ಪಂಚಾಯತಿಯ ಮುಖಂಡರುಗಳನ್ನು ಮನವೊಲಿಸುವಂತಹ ಪ್ರಯತ್ನವನ್ನು ಮಾಡಿದರಾದರೂ ಅಧಿಕಾರಿಗಳ ಪ್ರಯತ್ನ ಫಲನೀಡಲಿಲ್ಲ.
ಇದೇ ವೇಳೆ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಾಡಿಕೊಂಡಿರುವ ನಾವೇ ಅದನ್ನು ಮುರಿಯುವುದು ಬೇಡ. ಚುನಾವಣೆಗಳ ಮುಖಾಂತರ ಆಯ್ಕೆಯಾಗುವಂತಹ ಜನಪ್ರತಿನಿಧಿಗಳ ಮುಖಾಂತರವೇ ಸರ್ಕಾರದ ಕೆಲವು ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ಮುಟ್ಟುವಂತಹ ವ್ಯವಸ್ಥೆಯನ್ನು ಮಾಡಿಕೊಂಡಿರುವುದರಿಂದ ಅಭಿವೃದ್ದಿಗೆ ತೊಡಕಾಗಲಿದೆ. ತಾಲ್ಲೂಕಿನ ೨೪ ಗ್ರಾಮ ಪಂಚಾಯತಿಗಳ ಪೈಕಿ ೨ ಪಂಚಾಯತಿಗಳಲ್ಲಿ ಮಾತ್ರ ಈವರೆಗೂ ನಾಮಪತ್ರಗಳನ್ನು ಸಲ್ಲಿಸಿಲ್ಲ, ಶುಕ್ರವಾರದಂದು ಕಡೆಯ ದಿನವಾಗಿರುವುದರಿಂದ ತಮ್ಮ ತೀರ್ಮಾನಗಳನ್ನು ಪರಿಶೀಲನೆ ಮಾಡಿ, ಚುನಾವಣೆಗೆ ಸಹಕಾರ ನೀಡಿ’ ಎಂದು ಮನವಿ ಮಾಡಿದರು.
ಮುಖಂಡರು ಹಾಗೂ ಗ್ರಾಮಸ್ಥರು ನಮ್ಮ ತೀರ್ಮಾನಗಳಿಂದ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ, ಒಂದು ವೇಳೆ ನಮಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಸರ್ಕಾರದಿಂದ ಪಡೆದುಕೊಳ್ಳುವಂತಹ ಪರಿಸ್ಥಿತಿ ಎದುರಾದರೆ ಹೋರಾಟದ ಮುಖಾಂತರವೇ ಪಡೆದುಕೊಳ್ಳುತ್ತೇವೆ ಎಂದರು.
ಚುನಾವಣಾಧಿಕಾರಿ ಸುಬ್ಬರಾವ್, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಸುಭ್ರಮಣ್ಯಂ, ಅಬ್ಲೂಡು ಗ್ರಾಮ ಪಂಚಾಯತಿ ಅಧ್ಯಕ್ಷ ನಾರಾಯಣಸ್ವಾಮಿ, ಮುನಿವೆಂಕಟಸ್ವಾಮಪ್ಪ, ರಮೇಶ್, ಆರ್.ದೇವರಾಜ್, ಮುನಿರೆಡ್ಡಿ, ಕೆ.ಎಸ್.ದ್ಯಾವಕೃಷ್ಣಪ್ಪ, ಚಂದ್ರು, ದ್ಯಾವಪ್ಪ, ಸೀನಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.