Home News ಯಾವುದೇ ಜನಪರ ಕೆಲಸಗಳಿಗೆ ನನ್ನ ವಿರೋಧವಿಲ್ಲ – ಶಾಸಕರ ಸ್ಪಷ್ಟನೆ

ಯಾವುದೇ ಜನಪರ ಕೆಲಸಗಳಿಗೆ ನನ್ನ ವಿರೋಧವಿಲ್ಲ – ಶಾಸಕರ ಸ್ಪಷ್ಟನೆ

0

ಕ್ಷೇತ್ರದಾದ್ಯಂತ ಸಮಾಜಮುಖಿ ಕೆಲಸಗಳು ಮಾಡುವ ಸಮಾಜ ಸೇವಕರು ಅಥವ ಚಾರಿಟೆಬಲ್ ಟ್ರಸ್ಟ್ ಗಳು ಮಾಡುವ ಯಾವುದೇ ಜನಪರ ಕೆಲಸಗಳಿಗೆ ನನ್ನ ವಿರೋಧವಿಲ್ಲ. ಅವರು ಮಾಡುವ ಕೆಲಸಗಳು ಜನರಿಗೆ ತಲುಪಬೇಕಾದರೆ ಅದು ಸರ್ಕಾರದ ನೀತಿ, ನಿಯಮಾನುಸಾರ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಯಾವುದೇ ಒಂದು ರಾಜಕೀಯ ಪಕ್ಷ ಅಥವ ಟ್ರಸ್ಟ್ ಮತ್ತು ಖಾಸಗಿ ವ್ಯಕ್ತಿಗಳು ಸರ್ಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಉಚಿತವಾಗಿ ನೀಡಬೇಕಾದರೆ ಆ ವಾಃನವನ್ನು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರ ಹೆಸರಿಗೆ ನೋಂದಣಿ ಮಾಡಿಸಬೇಕು. ಆ ರೀತಿ ನೀಡುವಾಗ ಸರ್ಕಾರಿ ನಿಯಮಾನುಸಾರ ಕ್ರಮ ಜರುಗಿಸಬೇಕುಎಂದಷ್ಟೇ ಹೇಳಿದ್ದೇನೆ ಹೊರತು ಸಮಾಜ ಸೇವಕರು ಅಥವ ಮತ್ಯಾವುದೋ ಟ್ರಸ್ಟ್ ನವರು ಮಾಡುವ ಸಾಮಾಜಿಕ ಸೇವೆಗಳ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಎಚ್.ಡಿ.ದೇವೆಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ಆಂಬುಲೆನ್ಸ್ ಸೇವೆ ಆರಂಭಿಸಿದರೆ ನಮ್ಮದು ಯಾವುದೇ ತಕರಾರಿಲ್ಲ. ಒಂದು ವೇಳೆ ಅದನ್ನು ಸರ್ಕಾರಿ ಆಸ್ಪತ್ರೆಗೆ ನೀಡಬೇಕಾದಲ್ಲಿ ಸರ್ಕಾರಿ ನಿಯಮಾನುಸಾರ ವಾಹನ ನೀಡಬೇಕು. ವಾಹನದ ಮೇಲೆ ಯಾವುದೇ ವ್ಯಕ್ತಿಯ ಭಾವಚಿತ್ರ, ಟ್ರಸ್ಟ್ ನ ಹೆಸರು, ಪಕ್ಷದ ಚಿಹ್ನೆ ಇವ್ಯಾವು ಇರಬಾರದು ಎಂದರು.
ಈ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರಿಗೂ ಮಾಹಿತಿ ನೀಡಿದ್ದು ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರ ತೀರ್ಮಾನದಂತೆ ಮುಂದುವರೆಯುತ್ತೇವೆ ಎಂದರು.
ಕಳೆದ ಜುಲೈ ೦೨ ರ ಭಾನುವಾರ ತಾಲ್ಲೂಕಿನ ಸಾದಲಿಯ ಸಾದಲಮ್ಮ ದೇವಾಲಯದ ಬಳಿ ಎಚ್.ಡಿ.ದೇವೆಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾ ಟ್ರಸ್ಟ್ ವತಿಯಿಂದ ಸಾದಲಿ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ಆಂಬ್ಯುಲೆನ್ಸ್ ನೀಡಲಾಗಿತ್ತು. ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಖಾಸಗಿ ವ್ಯಕ್ತಿಗಳು ಅಥವ ಯಾವುದೋ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನೀಡುವ ಆಂಬ್ಯುಲೆನ್ಸ್ ವಾಹನಗಳನ್ನು ಸರ್ಕಾರದ ಆದೇಶದಂತೆ ನಿಯಮಾನುಸಾರ ಕ್ರಮ ಜರುಗಿಸಲಾಗಿದೆಯೇ? ಇವ್ಯಾವುದು ಇಲ್ಲದೇ ತಾವು ಯಾವ ರೀತಿ ವಾಹನವನ್ನು ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದೆ. ಇದಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ತಾಲ್ಲೂಕಿನ ವಿವಿಧ ಪ್ರಾಥಮಿಕ ಕೇಂದ್ರಗಳ ವೈದ್ಯರಿಗೆ ಪತ್ರ ಮುಖೇನ ನಿರ್ದೇಶನ ನೀಡಿದ್ದು ಅದರಲ್ಲಿ ಸರ್ಕಾರದ ಆದೇಶ ಎನ್ನುವುದರ ಬದಲಿಗೆ ಶಾಸಕರ ಆದೇಶ ಎಂದು ನಮೂದು ಮಾಡಿರುವುದು ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದೆಯೇ ಹೊರತು ಇದರಲ್ಲಿ ನನ್ನ ತಪ್ಪೇನೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ, ಸ್ಥಾಯಿಸಮಿತಿ ಅದ್ಯಕ್ಷ ಪಿ.ಕೆ.ಕಿಷನ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಆಶ್ವತ್ಥನಾರಾಯಣ, ಕೆ.ಎಸ್.ಕನಕಪ್ರಸಾದ್, ರಹಮತ್ತುಲ್ಲಾ, ಎಚ್.ಕ್ರಾಸ್ ರವಿ, ಆಂಜಿನಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.
ಬಿ ಫಾರಂ ನನಗೆ ಖಚಿತ: ಈಗಾಗಲೇ ಪಕ್ಷದ ಹಿರಿಯರು ಸೇರಿದಂತೆ ಪಕ್ಷದ ಸಭೆಯಲ್ಲಿ ತೀರ್ಮಾನವಾಗಿದ್ದು ಮುಂದಿನ ಚುನಾವಣೆಗೆ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಭರವಸೆ ಪಕ್ಷದಿಂದ ಸಿಕ್ಕಿದೆ. ಆದ್ದರಿಂದ ಬಿಫಾರಂ ಕುರಿತಂತೆ ಗೊಂದಲವಿಲ್ಲ. ನನಗೆ ಖಚಿತ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು. ಬಿ.ಎನ್.ರವಿಕುಮಾರ್ ಹಾಗು ನಮ್ಮ ನಡುವೆ ಯಾವುದೇ ವೈಯಕ್ತಿಕ ಬಿನ್ನಾಬಿಪ್ರಾಯಗಳಿಲ್ಲ. ಕಳೆದ ನಾಲ್ಕೈದು ತಿಂಗಳುಗಳಿಂದ ಅವರ ಕಾರ್ಯ ವೈಖರಿ ಬದಲಾಗಿದೆ. ಈಚೆಗೆ ಶುರುಮಾಡಿದ ಟ್ರಸ್ಟ್ ನ ಯಾವುದೇ ಕಾರ್ಯಕ್ರಮಗಳಿಗೂ ನನ್ನನ್ನು ಆಹ್ವಾನಿಸದೇ ಇದ್ದುದರಿಂದ ನಾನು ಭಾಗವಹಿಸಿಲ್ಲ ಎಂದರು.