Home News ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ ಮುಂದೆ ರೈತರ ಪ್ರತಿಭಟನೆ

ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ ಮುಂದೆ ರೈತರ ಪ್ರತಿಭಟನೆ

0

ರೈತರು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿದ್ದರೂ ಪಾವತಿಸಿಲ್ಲವೆಂದು ಹೇಳಿ ಮರುಸಾಲ ನೀಡುತ್ತಿಲ್ಲವೆಂದು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ ಮುಂದೆ ಸೋಮವಾರ ರೈತರು ಪ್ರತಿಭಟಿಸಿದರು.
ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ ನಲ್ಲಿ 2012 ರಲ್ಲಿ ಪಡೆದಿದ್ದ ಸಾಲವನ್ನು ರೈತರು ಸಕಾಲದಲ್ಲಿ ಪಾವತಿಸಿದ್ದಾರೆ. ಅದಕ್ಕೆ ದಾಖಲೆಯಾಗಿ ರಸೀದಿಗಳು ಸಹ ಇವೆ. ಬ್ಯಾಂಕಿನಲ್ಲಿ ಸರಿಯಾಗಿ ದಾಖಲಾತಿಗಳನ್ನಿಟ್ಟುಕೊಳ್ಳದೆ, ರೆಮಿಟೆನ್ಸ್‌ ಮಾಡಿಕೊಳ್ಳದೆ ಹಣ ಕಟ್ಟಿಲ್ಲವೆನ್ನುತ್ತಿದ್ದಾರೆ. ಬ್ಯಾಂಕಿನಲ್ಲಿ ನಡೆದ ಅವ್ಯವಹಾರಕ್ಕೆ ರೈತರನ್ನು ಹೊಣೆ ಮಾಡುತ್ತಿದ್ದಾರೆ. ಸಹಕಾರ ಬ್ಯಾಂಕ್‌ ನವರ ಬೇಜವಾಬ್ದಾರಿತನದಿಂದ ಸರ್ಕಾರದಿಂದ ಬರಬೇಕಾಗಿದ್ದ 25 ಸಾವಿರ ರೂಗಳ ಸಹಾಯಧನ ರೈತರಿಗೆ ಸಿಗದಂತಾಗಿದೆ. ಸರ್ಕಾರ ಮನ್ನಾ ಮಾಡಿರುವ ಹಣವನ್ನೂ ಕಟ್ಟುವಂತೆ ರೈತರಿಗೆ ಬ್ಯಾಂಕ್‌ನವರು ನೋಟಿಸ್‌ ನೀಡಿದ್ದಾರೆ. ಬರಗಾಲದ ಈಗಿನ ಪರಿಸ್ಥಿತಿಯಲ್ಲಿ ರೈತರಿಗೆ ಸಾಲ ಕೂಡ ನೀಡದಿರುವುದು ದುರದೃಷ್ಟಕರ. ಸಾಲ ವಾಪಸ್‌ ಮಾಡಿರುವ ರೈತರಿಗೆ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಕೊಡಬೇಕು. ಸಕಾಲದಲ್ಲಿ ಸಾಲ ಮರುಪಾವತಿಸಿರುವ ರೈತರಿಗೂ ಮರು ಸಾಲ ನೀಡಬೇಕು ಎಂಬ ಬೇಡಿಕೆಯೊಂದಿಗೆ ಪ್ರತಿಭಟಿಸಿರುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದ್ದಾರೆ.
ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ ಅಧ್ಯಕ್ಷ ರಾಮಚಂದ್ರ ಮಾತನಾಡಿ, ‘ಸಹಕಾರ ಬ್ಯಾಂಕ್‌ಗೆ ಕಟ್ಟಿರುವ ಹಣದ ಲೆಕ್ಕವಿದೆ. ಯಾವುದೇ ಅವ್ಯವಹಾರ ನಡೆದಿಲ್ಲ. ಐವತ್ತು ಸಾವಿರ ಹಣ ಸಾಲ ಪಡೆದ ರೈತರು 25 ಸಾವಿರ ರೂಗಳನ್ನು ಕಟ್ಟಿದ್ದಾರೆ. ಕಳೆದ ವರ್ಷ ಸರ್ಕಾರ ಸಾಲ ಮನ್ನಾ ಮಾಡಿದ ಸಂದರ್ಭದಲ್ಲಿ ಅವರು ಹಣ ಕಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚಿಸಿ ಪರಿಶೀಲಿಸಲಾಗುವುದು. ಬಾಕಿ ಹಣವನ್ನು ಕಟ್ಟಬೇಕೆಂದು ಈಗಾಗಲೇ ರೈತರಿಗೆ ನೋಟಿಸ್‌ ನೀಡಿದ್ದೇವೆ. ಈಗಿನ ಸರ್ಕಾರ ಬಡ್ಡಿ ರಹಿತ ಸಾಲವನ್ನು ನೀಡುವುದರಿಂದ, ನೀವು ಬಾಕಿ ಹಣವನ್ನು ಕಟ್ಟಿ ಅದರಿಂದ ನಾವು ಜಿಲ್ಲಾ ಸಹಕಾರ ಬ್ಯಾಂಕಿನಿಂದ ಹಣವನ್ನು ತರಲು ಸಾಧ್ಯವೆಂದು ಹೇಳಿದ್ದೇವೆ. ಸಹಕಾರಿ ಬ್ಯಾಂಕ್‌ ಉಳಿಸಿ ಬೆಳೆಸುವ ಕರ್ತವ್ಯ ರೈತರು ಸೇರಿದಂತೆ ನಮ್ಮೆಲ್ಲರದ್ದೂ ಇದೆ. ರೈತರ ಮನವೊಲಿಸುತ್ತೇವೆ’ ಎಂದು ಹೇಳಿದರು.
ರೈತಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್‌, ಮಳಮಾಚನಹಳ್ಳಿ ದೇವರಾಜ್‌, ಚನ್ನರಾಯಪ್ಪ, ಮುನಿನಂಜಪ್ಪ, ಕೃಷ್ಣಪ್ಪ, ಅಬ್ಲೂಡು ಆರ್‌.ದೇವರಾಜ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.