Home News ರೈತ ವಿರೋಧ ನೀತಿಯ ವಿರುದ್ಧ ಧರಣಿ

ರೈತ ವಿರೋಧ ನೀತಿಯ ವಿರುದ್ಧ ಧರಣಿ

0

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆಯನ್ನು ಗುರುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಗರದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದರು.
ಸಾರ್ವಜನಿಕ ಮತ್ತು ರೈತರ ಹಿತರಕ್ಷಣೆಯ ಕಾಳಜಿಯಿಲ್ಲದೆ ಕೇಂದ್ರ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಸುಗ್ರೀವಾಜ್ಞೆಯನ್ನು ಕೇವಲ ತಿದ್ದುಪಡಿ ಎಂದು ಮಾತ್ರ ಕರೆಯಲಾಗದು. ಇದು 2013 ರ ಭೂ ಸ್ವಾಧೀನ ಕಾಯ್ದೆಯ ಮೂಲ ಆಶಯ ಮತ್ತು ಉದ್ದೇಶವನ್ನೇ ನಿರರ್ಥಕಗೊಳಿಸುತ್ತದೆ. 1894ರ ಕಾಯ್ದೆಯಲ್ಲಿ ಸಂತ್ರಸ್ತ ಭೂ ಮಾಲೀಕರಿಗೆ ಆಕ್ಷೇಪ ಎತ್ತಲು ಹಾಗೂ ತಮ್ಮ ಕಷ್ಟ ಕೇಳಿಕೊಳ್ಳಲು ಅವಕಾಶವಾದರೂ ಇತ್ತು. ಆದರೆ ಈಗ ಸುಗ್ರೀವಾಜ್ಞೆಯಲ್ಲಿ ಇಡೀ ವಿದಿವಿಧಾನದ ಅಗತ್ಯಗಳನ್ನೇ ಬೈಪಾಸ್ ಮಾಡಿರುವುದರಿಂದ ಜಮೀನಿನ ಮಾಲೀಕರಿಗೆ ಕನಿಷ್ಟ ರಕ್ಷಣೆಯೂ ಇಲ್ಲದಂತಾಗಿದೆ. ಒಟ್ಟಾರೆ ಇದು ರಿಯಲ್ ಎಸ್ಟೇಟಿಗರ ಮತ್ತು ಕಾರ್ಪೋರೇಟ್ಗಳ ಹಿತರಕ್ಷಣೆಗಾಗಿ ನಡೆಯುತ್ತಿರುವ ಸಂಚಾಗಿದೆ ಎಂದು ಆರೋಪಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಮಳ್ಳೂರು ಹರೀಶ್, ಮಂಜುನಾಥ್, ಕೃಷ್ಣಪ್ಪ, ಬೈಯಣ್ಣ, ನರಸಿಂಹರೆಡ್ಡಿ, ವೇಣುಗೋಪಾಲ್, ಮುನಿರಾಜು, ವೆಂಕಟನಾರಾಯಣಸ್ವಾಮಿ, ಅಬ್ಲೂಡು ದೇವರಾಜ್, ಮುನಿಕೃಷ್ಣ, ನಾಗರಾಜು, ರಾಮಚಂದ್ರ, ರವಿಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.