Home News ಲೋಕಸಭಾ ಚುನಾವಣೆ – ಕುಸಿತ ಕಂಡ ಶೇಕಡಾವಾರು ಮತದಾನ

ಲೋಕಸಭಾ ಚುನಾವಣೆ – ಕುಸಿತ ಕಂಡ ಶೇಕಡಾವಾರು ಮತದಾನ

0

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದಿದೆ. ಮತಚಲಾಯಿಸಲು ನಿಧಾನಗತಿಯಿಂದಲೇ ಜನರು ಬರತೊಡಗಿದರು. ಕೆಲವೆಡೆ ಹಿರಿಯರನ್ನು ಮತ್ತು ಅಂಗವಿಕಲರನ್ನು ಕರೆದುಕೊಂಡು ಬರಲಾಯಿತು. ಸಖಿ ಬೂತ್ ಗಳನ್ನು ಹೊರತುಪಡಿಸಿದರೆ, ತಿಮ್ಮನಾಯಕನಹಳ್ಲಿಯಲ್ಲಿ ಮತದಾನದ ಬೂತನ್ನು ಸುಂದರವಾಗಿ ಅಲಂಕರಿಸಲಾಗಿತ್ತು.
ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ವಿಕಲಚೇತನ ಪುನರ್ವಸತಿ ಕಾರ್ಯಕರ್ತೆ ಭಾಗ್ಯಮ್ಮ ಅವರು ಅಂಗವಿಕಲರು ಹಾಗೂ ಬುದ್ದಿಮಾಂಧ್ಯ ಮತದಾರರನ್ನು ಆಟೋದಲ್ಲಿ ಅವರ ಕುಟುಂಬದ ಸದಸ್ಯರೊಂದಿಗೆ ಕರೆತಂದು ಮತದಾನ ಮಾಡಲು ಸಹಕರಿಸಿದರು.
ಮುಂಜಾನೆಯಿಂದಲೂ ನಗರದ ಮುಖ್ಯ ರಸ್ತೆಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಗ್ರಾಮೀಣ ಪ್ರದೇಶದ ಜನತೆ ನಗರಕ್ಕೆ ಬಾರದೇ ಇದ್ದುದರಿಂದ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಚುನಾವಣೆಯ ದಿನ ಬೆಳಿಗ್ಗೆ ಏಳು ಗಂಟೆಗೆ ಮತದಾನದ ಪ್ರಕ್ರಿಯೆ ಪ್ರಾರಂಭವಾಯಿತು. ಕ್ಷೇತ್ರದ ಕೆಲವು ಬೂತ್ ಗಳಲ್ಲಿ ಮತಯಂತ್ರವನ್ನು ಅಧಿಕಾರಿಗಳು ನಿಧಾನವಾಗಿ ಪರಿಶೀಲನೆ ನಡೆಸಿ ಚಾಲನೆ ನೀಡಿದ್ದು ಗಮನಕ್ಕೆ ಬಂತು.
ಕೆಲವೆಡೆ ಮತದಾನ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಜನರು ಬೆಳಿಗ್ಗೆಯೇ ಉತ್ಸಾಹ ಭರಿತರಾಗಿ ಬೇಗ ಬಂದು ಸರತಿಸಾಲುಗಳಲ್ಲಿ ನಿಂತು ಮತದಾನ ಮಾಡಿದರೆ, ಕೆಲವೆಡೆ ಮಧ್ಯಾಹ್ನದ ವರೆಗೂ ಜನರು ಬರುವುದು ಕಡಿಮೆಯಾಗಿತ್ತು.
ಶಾಸಕ ವಿ.ಮುನಿಯಪ್ಪ ಸ್ವಗ್ರಾಮ ಹಂಡಿಗನಾಳ ಗ್ರಾಮದಲ್ಲಿ ಮತಚಲಾಯಿಸಿದರೆ, ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಸ್ವಗ್ರಾಮ ಮೇಲೂರಿನಲ್ಲಿ ಮತಚಲಾಯಿಸಿದರು.
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶೇ 78.42 ರಷ್ಟು ಮಾತ್ರ ಮತದಾನವಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಶೇ 85.45 ರಷ್ಟು ಆಗಿದ್ದ ಮತದಾನ ಈ ಬಾರಿ ಸಾಕಷ್ಟು ಇಳಿಮುಖ ಕಂಡಿದೆ.

error: Content is protected !!