ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದಿದೆ. ಮತಚಲಾಯಿಸಲು ನಿಧಾನಗತಿಯಿಂದಲೇ ಜನರು ಬರತೊಡಗಿದರು. ಕೆಲವೆಡೆ ಹಿರಿಯರನ್ನು ಮತ್ತು ಅಂಗವಿಕಲರನ್ನು ಕರೆದುಕೊಂಡು ಬರಲಾಯಿತು. ಸಖಿ ಬೂತ್ ಗಳನ್ನು ಹೊರತುಪಡಿಸಿದರೆ, ತಿಮ್ಮನಾಯಕನಹಳ್ಲಿಯಲ್ಲಿ ಮತದಾನದ ಬೂತನ್ನು ಸುಂದರವಾಗಿ ಅಲಂಕರಿಸಲಾಗಿತ್ತು.

ಮುಂಜಾನೆಯಿಂದಲೂ ನಗರದ ಮುಖ್ಯ ರಸ್ತೆಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಗ್ರಾಮೀಣ ಪ್ರದೇಶದ ಜನತೆ ನಗರಕ್ಕೆ ಬಾರದೇ ಇದ್ದುದರಿಂದ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಚುನಾವಣೆಯ ದಿನ ಬೆಳಿಗ್ಗೆ ಏಳು ಗಂಟೆಗೆ ಮತದಾನದ ಪ್ರಕ್ರಿಯೆ ಪ್ರಾರಂಭವಾಯಿತು. ಕ್ಷೇತ್ರದ ಕೆಲವು ಬೂತ್ ಗಳಲ್ಲಿ ಮತಯಂತ್ರವನ್ನು ಅಧಿಕಾರಿಗಳು ನಿಧಾನವಾಗಿ ಪರಿಶೀಲನೆ ನಡೆಸಿ ಚಾಲನೆ ನೀಡಿದ್ದು ಗಮನಕ್ಕೆ ಬಂತು.
ಶಾಸಕ ವಿ.ಮುನಿಯಪ್ಪ ಸ್ವಗ್ರಾಮ ಹಂಡಿಗನಾಳ ಗ್ರಾಮದಲ್ಲಿ ಮತಚಲಾಯಿಸಿದರೆ, ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಸ್ವಗ್ರಾಮ ಮೇಲೂರಿನಲ್ಲಿ ಮತಚಲಾಯಿಸಿದರು.
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶೇ 78.42 ರಷ್ಟು ಮಾತ್ರ ಮತದಾನವಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಶೇ 85.45 ರಷ್ಟು ಆಗಿದ್ದ ಮತದಾನ ಈ ಬಾರಿ ಸಾಕಷ್ಟು ಇಳಿಮುಖ ಕಂಡಿದೆ.