ರಾಜ್ಯದ ಉಚ್ಛನ್ಯಾಯಾಲಯದಲ್ಲಿ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಲ್ಲೂಕು ವಕೀಲರ ಸಂಘದ ಸದಸ್ಯರು ಸೋಮವಾರ ಒತ್ತಾಯಿಸಿದರು.
ನ್ಯಾಯಾಲಯ ಕಲಾಪದಿಂದ ಹೊರಗುಳಿದ ತಾಲ್ಲೂಕು ವಕೀಲರ ಸಂಘದ ಸದಸ್ಯರು ಕೆಂಪು ಪಟ್ಟಿಯನ್ನು ಧರಿಸಿ ಪ್ರಧಾನ ಮಂತ್ರಿಗಳಿಗೆ ತಲುಪಿಸುವಂತೆ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ‘ರಾಜ್ಯದ ಉಚ್ಛನ್ಯಾಯಾಲಯದಲ್ಲಿ 62 ಮಂದಿ ನ್ಯಾಯಾಧೀಶರಿರಬೇಕು. ಆದರೆ 27 ಮಂದಿ ನ್ಯಾಯಾಧೀಶರಿದ್ದಾರೆ. ಹೀಗಾಗಿ ಸುಮಾರು 2 ಲಕ್ಷ ಮೊಕದ್ದಮೆಗಳು ಇತ್ಯರ್ಥವಾಗದೇ ಉಳಿದಿವೆ. ಇದು ಇನ್ನಷ್ಟು ಬೆಳೆಯುತ್ತದೆ. ಆದ್ದರಿಂದ ಆದಷ್ಟು ಬೇಗ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ವಕೀಲರಾದ ಮಂಜುನಾಥ್, ಲೋಕೇಶ್, ವಿಶ್ವನಾಥ್, ಭಾಸ್ಕರ, ನಾಗೇಂದ್ರಬಾಬು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.