Home News ವಕೀಲರ ಸಂಘದ ಸದಸ್ಯರಿಂದ ಕಾನೂನು ತಿದ್ದುಪಡಿಗೆ ವಿರೋಧ

ವಕೀಲರ ಸಂಘದ ಸದಸ್ಯರಿಂದ ಕಾನೂನು ತಿದ್ದುಪಡಿಗೆ ವಿರೋಧ

0

ವಕೀಲರ ವೃತ್ತಿಗೆ ಹಾಗು ವಕೀಲರ ಹಕ್ಕುಗಳಿಗೆ ಚ್ಯುತಿ ತರುವಂತಹ ಅಸಂವಿಧಾನಿಕ ಅಂಶಗಳನ್ನು ಒಳಗೊಂಡ ಕಾನೂನು ತಿದ್ದುಪಡಿಗೆ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಿರುವ ಕ್ರಮವನ್ನು ವಿರೋಧಿಸಿ ಶುಕ್ರವಾರ ವಕೀಲರ ಸಂಘದ ಸದಸ್ಯರು ಕಲಾಪದಿಂದ ಹೊರಗುಳಿದು ಕಾನೂನು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಕಾನೂನು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಕಕ್ಷಿದಾರರು ವಕೀಲರ ವಿರುದ್ಧ ದಾಖಲಿಸುವ ದೂರುಗಳ ವಿಚಾರಣೆಗೆ ಸಂಬಂಧಿಸಿದಂತೆ ವಕೀಲರ ಕಾಯ್ದೆ ೧೯೬೧ ಕ್ಕೆ ತರಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆ ವಕೀಲರ ವೃತ್ತಿ ಹಾಗೂ ಹಕ್ಕುಗಳಿಗೆ ಚ್ಯುತಿ ಉಂಟು ಮಾಡುವಂತಿದೆ. ಆದ್ದರಿಂದ ಇದನ್ನು ವಿರೋಧಿಸುತ್ತಿದ್ದೇವೆ.
ಕಕ್ಷಿದಾರರು ತಮ್ಮ ವಕೀಲರ ವಿರುದ್ಧ ನೀಡಿದ ದೂರು ಸಾಬೀತಾದರೆ ೩ ಲಕ್ಷ ದಂಡ ಹಾಗೂ ೫ ಲಕ್ಷ ಪರಿಹಾರ ನೀಡಲು ಉದ್ದೇಶಿತ ಮಸೂದೆಯಡಿ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಈ ಮಸೂದೆ ವಕೀಲರಿಗೆ ಮಾರಕವಾಗಿದೆ. ವಿಚಾರಣೆ ಸಮಿತಿಗೆ ಸಾರ್ವಜನಿಕ ವಲಯದಿಂದ ಲೆಕ್ಕ ಪರಿಶೋಧಕರು, ವೈದ್ಯರನ್ನು ನೇಮಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಅಧಿಕಾರ ಕೊಡುವ ಶಿಫಾರಸ್ಸು ಒಪ್ಪಲು ಸಾಧ್ಯವಿಲ್ಲವೆಂದರು.
ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ಚಂದ್ರಶೇಖರ್, ಮಂಜುನಾಥ್, ವೀರಕುಮಾರ್, ಮುರಳಿ, ಕೃಷ್ಣ, ರಘು, ಮಂಜುಕಿರಣ್‌ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!