Home News ವಿಕೇಂದ್ರೀಕರಣ ಬಳಗದ ಮೂಲಕ ಜಾಗೃತಿ ಕಾರ್ಯಕ್ರಮ

ವಿಕೇಂದ್ರೀಕರಣ ಬಳಗದ ಮೂಲಕ ಜಾಗೃತಿ ಕಾರ್ಯಕ್ರಮ

0

ಹಣವಿಲ್ಲದೆ ಮತ ಚಲಾವಣೆ ಎಂಬ ಆದೋಲನವನ್ನು ವಿಕೇಂದ್ರೀಕರಣ ಬಳಗ ಹಮ್ಮಿಕೊಂಡಿದ್ದು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತ ಚಲಾವಣೆಯಲ್ಲಿ ನಾಗರಿಕರಿಗೆ ಮತ್ತು ಸ್ಪರ್ಧಿಗಳಿಗೆ ತಿಳುವಳಿಕೆ ಹೆಚ್ಚಿಸಲಿದೆ ಎಂದು ವಿಕೇಂದ್ರೀಕರಣ ಬಳಗದ ಮುಖ್ಯಸ್ಥ ಹಾಗೂ ಕುಂದಲಗುರ್ಕಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ.ವೆಂಕಟೇಶ್ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಗ್ರಾಮಪಂಚಾಯತಿಗಳಿಗೆ ನಡೆಯುವ ಚುನಾವಣೆಯಲ್ಲಿ ಮೌಲ್ಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾದ ಬದಲಾವಣೆ ತರುವ ಇಚ್ಛೆ ಹೊಂದಿ ಸ್ವಿಚ್ಛೆಯಿಂದ ರೂಪುಗೊಂಡ ಬಳಗವೇ ವಿಕೇಂದ್ರೀಕರಣ ಬಳಗ.
ಹಿಂದೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೇರಳವಾಗಿ ಅನಾಗರೀಕ ಪದ್ಧತಿಯಲ್ಲಿ ಹಣ ಮತ್ತು ಮದ್ಯಗಳ ಬಳಕೆಯಿಂದ ಅಕ್ರಮಗಳು ನಡೆದು ಸಭ್ಯ ನಾಗರಿಕತೆಗೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನವಾದಂತ ಪರಿಸ್ಥಿತಿ ಏರ್ಪಟ್ಟಿತ್ತು. ಅದು ಸರಿಯಲ್ಲ ಎಂದು ತಿಳಿದಿದ್ದರೂ ಚುನಾವಣೆ ಕಾವು ಹೆಚ್ಚುತ್ತಿದ್ದಂತೆ ಬಹಳಷ್ಟು ಅಕ್ರಮಗಳು ನಡೆದು ಜೈಲು, ಕೋರ್ಟು ಮುಂತಾದವುಗಳಿಗೆ ಅಭ್ಯರ್ಥಿಗಳು ಹೋಗಿ ಬಂದಿರುವುದನ್ನು ಕಂಡಿದ್ದೇವೆ.
ಕಳೆದ ಚುನಾವಣೆಯ ಸಂದರ್ಭದಲ್ಲಿ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಸೇವನೆಯಿಂದ 11 ಜನ ಸಾವನ್ನಪ್ಪಿದ್ದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿತ್ತು. ರಾಜ್ಯ ಚುನಾವಣಾ ಆಯೋಗದ ಮಾರ್ಗದರ್ಶನ ಸಂಹಿತೆ ಪ್ರಕಾರ ಮತಕ್ಕಾಗಿ ಹಣ ಮತ್ತು ಉಡುಗೊರೆ ಕೊಡುವುದು ಮತ್ತು ತೆಗೆದುಕೊಳ್ಳುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ನಮ್ಮ ಮತ್ತು ಮುಂದಿನ ಪೀಳಿಗೆಗೆ ಕಲಿಸುತ್ತಿರುವ ಪಾಠ ಏನು ಎಂಬುದನ್ನು ನಾಗರಿಕರು ಮತ್ತು ಸ್ಪರ್ಧಿಗಳು ಪ್ರಶ್ನಿಸಿಕೊಳ್ಳಬೇಕು.
ವಿಕೇಂದ್ರೀಕರಣ ಬಳಗವು ಕರಪತ್ರಗಳ ಮೂಲಕ ತಿಳುವಳಿಕೆ, ಶಾಲಾ ಮಕ್ಕಳ ಜೊತೆ ಜಾಥಾ, ಶಿಬಿರಗಳ ಮೂಲಕ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಆಸಕ್ತರು ಕೈಜೋಡಿಸಬಹುದು ಎಂದು ತಿಳಿಸಿದರು. ರಾಜೇಂದ್ರ ಪ್ರಸಾದ್, ಮಂಜುನಾಥ್, ಕೃಷ್ಣಪ್ಪ, ಗಣೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.