ಲೋಕಸಭಾ ಚುನಾವಣೆಯ ಪ್ರಯುಕ್ತ ಸರ್ವಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಸುಮಾರು ೭೦೦ ಮಂದಿ ಪೋಲಿಂಗ್ ಅಧಿಕಾರಿಗಳಿಗೆ ಚುನಾವಣೆಗೆ ಸಂಬಂಧಿಸಿದ ಸಲಕರಣೆಗಳು ಹಾಗೂ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ಕ್ಷೇತ್ರದ ೨೪೨ ಮತದಾನ ಕೇಂದ್ರಗಳಲ್ಲಿ ಪೋಲಿಂಗ್ ಅಧಿಕಾರಿಗಳಿಗೆ ಬೇಕಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಶೌಚಾಲಯ, ನೀರು, ಫ್ಯಾನು, ಮೇಜು ಎಲ್ಲದರ ವ್ಯವಸ್ಥೆ ಮಾಡಲಾಗಿದೆ. ಎಲೆಕ್ಟ್ರಾನಿಕ್ ಮತಯಂತ್ರದ ಜೊತೆಯಲ್ಲಿ ಅಧಿಕಾರಿಗಳಿಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ನೀಡಿ ಅವರ ಅನುಮಾನಗಳನ್ನು ಪರಿಹರಿಸಲಾಗಿದೆ. ಐದು ಸಖಿ ಬೂತ್ ಗಳನ್ನು ಸ್ಥಾಪಿಸಿದ್ದು ಅದರಲ್ಲಿ ಪೋಲಿಂಗ್ ಅಧಿಕಾರಿಗಳೆಲ್ಲರೂ ಮಹಿಳೆಯರೇ ಇರುತ್ತಾರೆ. ಅವರಿಗಾಗಿ ವಿಶೇಷ ಸೌಲಭ್ಯಗಳನ್ನು ನೀಡಿದ್ದೇವೆ.
ಶಾಂತಿ ಹಾಗೂ ಸುರಕ್ಷಿತವಾಗಿ ಮತದಾನ ಪ್ರಕ್ರಿಯೆ ನಡೆಯಬೇಕೆಂಬ ಉದ್ದೇಶದಿಂದ ೩೮೫ ಪೊಲೀಸ್ ಸಿಬ್ಬಂದಿ ನೇಮಕಗೊಂಡಿದ್ದಾರೆ. ಎಲ್ಲ ಪೋಲಿಂಗ್ ಅಧಿಕಾರಿಗಳನ್ನು ಅವರು ಕಾರ್ಯನಿರ್ವಹಿಸಬೇಕಾಗಿರುವ ಬೂತ್ ಗಳಿಗೆ ಹೋಗಿ ಬರಲು ಒಟ್ಟು ೪೦ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ನಿಯೋಜಿಸಲಾಗಿದೆ ಎಂದು ವಿವರ ನೀಡಿದರು.
ಪೋಲಿಂಗ್ ಅಧಿಕಾರಿಗಳಿಗೆಂದು ಮಾಡಿಸಲಾಗಿದ್ದ ಒಬ್ಬಟ್ಟು, ಪಲಾವ್ ಮುಂತಾದ ತಿಂಡಿಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮತ್ತು ತಂಡ ಬಂದು ಪರಿಶೀಲಿಸಿದರು.
ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್, ತಹಶೀಲ್ದಾರ್ ಎಸ್.ಅಜಿತ್ಕುಮಾರ್ ರೈ ಹಾಜರಿದ್ದರು.