Home News ಶಿಡ್ಲಘಟ್ಟ ತಾಲ್ಲೂಕಿಗೆ ವಲಸೆ ಕುರಿಗಳ ಆಗಮನ

ಶಿಡ್ಲಘಟ್ಟ ತಾಲ್ಲೂಕಿಗೆ ವಲಸೆ ಕುರಿಗಳ ಆಗಮನ

0

ಬೇಸಿಗೆಯ ಬಿಸಿ ನಮಗೆ ಈಗೀಗ ಪ್ರಾರಂಭವಾಗುತ್ತಿದೆ. ಆದರೆ ರಾಜ್ಯದ ವಿವಿಧ ಭಾಗಗಳಲ್ಲಿ ನೀರು, ಮೇವಿನ ಕೊರತೆಯಿಂದ ಕಡೆಗಳಿಂದ ಕುರಿಗಾರರು ಕುರಿಮರಿಗಳೊಂದಿಗೆ ಸಂಸಾರ ಸಮೇತರಾಗಿ ಊರೂರು ತಿರುಗುತ್ತಾರೆ. ಹೀಗೆ ಅಲೆಮಾರಿಗಳಾಗಿ ಬದುಕುವ ಈ ಕುರಿಗಾರರು ತಾಲ್ಲೂಕಿನ ಕಾಚಹಳ್ಳಿ ಸಮೀಪದ ಹೊಲದಲ್ಲಿ ಬಂದು ಬೀಡುಬಿಟ್ಟಿದ್ದಾರೆ.
ಮಧುಗಿರಿ ಮೂಲದಿಂದ ಆಗಮಿಸಿರುವ ಕುರಿಗಾರರಿಗೆ ಒಂದು ದಿನ ಒಂದು ಊರಾದರೆ, ಇನ್ನೊಂದು ದಿನ ಇನ್ನೊಂದು ಊರು. ಸುಮಾರು ಎರಡುವರೆ ಸಾವಿರ ಕುರಿಗಳೊಂದಿಗೆ ತಂಡ ತಂಡಗಳಾಗಿ ವಿಂಗಡಣೆ ಮಾಡಿಕೊಂಡು ಪ್ರತಿವರ್ಷ ಬೇಸಿಗೆಯ ಕಾಲದಲ್ಲಿ ವಲಸೆ ಹೋಗುವ ಪರಿಪಾಠವನ್ನು ಇವರು ರೂಢಿಸಿಕೊಂಡಿದ್ದಾರೆ. ಜನವರಿ ತಿಂಗಳಿನಲ್ಲಿ ಊರನ್ನು ಬಿಡುತ್ತಾರೆ. ನಾಲ್ಕಾರು ತಿಂಗಳು ಊರೂರು ಸುತ್ತಿ ಕುರಿಗಳನ್ನು ಮೇಯಿಸಿಕೊಂಡು ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಸ್ವಗ್ರಾಮಗಳತ್ತ ಹೆಜ್ಜೆ ಹಾಕುತ್ತಾರೆ.
ಈ ರೀತಿ ವಲಸೆ ಹೋಗುವ ಕುರಿಗಾರರಿಗೆ ವಲಸೆ ಹೋಗಲು ಆಗದವರು ತಮ್ಮ ಕುರಿಗಳನ್ನು ಒಪ್ಪಿಸುತ್ತಾರೆ. ದಾರಿಗೆ ಬೇಕಾದ ಆಹಾರ ಧಾನ್ಯಗಳನ್ನು ಒದಗಿಸಿಕೊಡುತ್ತಾರೆ. ವಲಸೆ ಮುಗಿದು ವಾಪಸ್ಸು ಬಂದ ಮೇಲೆ ಎರಡು ಕುರಿಗಳು, ಎರಡು ಮರಿಗಳನ್ನು ಉಚಿತವಾಗಿ ಅವರು ಇವರಿಗೆ ಕೊಡುತ್ತಾರೆ.
‘ಕುರಿ ಸಾಕಿ ಕುಬೇರರಾಗಿ’ ಎನ್ನುವ ಮಾತೊಂದಿದೆ. ಆದರೆ ಹೀಗೆ ಕುಬೇರರಾಗಲು ಕುರಿಗಳ ಪಾಲನೆ ಪೋಷಣೆಗಾಗಿ ಪಡುವ ಕಷ್ಟನಷ್ಟ, ನೋವು ಕುರುಬರ ಕುಟುಂಬಗಳನ್ನು ಕಂಡಾಗ ಸ್ಪಷ್ಟವಾಗುತ್ತದೆ. ಕುರಿಗಳನ್ನು ತಮ್ಮ ಪಾಲಿನ ‘ಲಕ್ಷ್ಮೀ’ಎಂದೇ ಪರಿಗಣಿಸುವ ಹಾಲುಮತ ಜನಾಂಗ ವರ್ಷದ ನಾಲ್ಕಾರು ತಿಂಗಳು ಅಲೆಮಾರಿಗಳಂತೆ ತಮ್ಮ ಕುರಿಗಳ ಜತೆ ವಲಸೆ ಹೋಗುತ್ತಾರೆ.
ಇತ್ತೀಚಿನ ದಿನದಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯಿಂದ ಕುರಿಗಾರರು ತಮ್ಮವರೊಂದಿಗೆ ಸತತ ದೂರವಾಣಿ ಸಂಪರ್ಕದಲ್ಲಿರುತ್ತಾರೆ. ಆದರೂ ವಲಸಿಗ ಕುರಿಗಾರರು ವಿವಿಧ ಸ್ಥಳಗಳಲ್ಲಿ ನಾನಾ ತೊಂದರೆಗಳನ್ನು ಅನುಭವಿಸುತ್ತಾರೆ. ಅಲ್ಲೆಲ್ಲಾ ದಿನವಿಡೀ ಕುರಿಗಳೊಂದಿಗೆ ಸುತ್ತಾಡಿ, ರಾತ್ರಿಯೂ ನಿಶ್ಚಿಂತೆಯಿಂದ ನಿದ್ರೆ ಮಾಡದೇ ಕಣ್ಣಲ್ಲಿ ಕಣ್ಣಿಟ್ಟು ಕುರಿಗಳನ್ನು ಇವರು ಸಾಕುತ್ತಾರೆ. ಕುರಿಗಳೊಂದಿಗೆ ಕತ್ತೆಗಳು, ನಾಯಿಗಳೂ ಸಹ ಇವರೊಂದಿಗಿರುತ್ತವೆ.
ರೈತರ ಹೊಲಗಳಲ್ಲಿ ರಾತ್ರಿಯ ವೇಳೆ ಕುರಿಗಳನ್ನು ಮಂದೆ ಹಾಕುತ್ತಾರೆ. ಕುರಿಗಳಿಂದ ಗೊಬ್ಬರವಾಗುತ್ತದೆ ಎಂಬ ಕಾರಣಕ್ಕಾಗಿ ಒಂದು ರಾತ್ರಿಗೆ ರೈತರಿಗೆ 50 ರೂ ಹಣ, 35 ಸೇರು ರಾಗಿ ಮತ್ತು 5 ಸೇರು ಅಕ್ಕಿ ಕೊಡುತ್ತಾರೆ.
‘ಕೆರೆ, ಕುಂಟೆಗಳಲ್ಲಿ ನೀರು ಇರುವ ಕಡೆಗಳಲ್ಲಿ ಕುರಿಗಳಿಗೆ ನೀರು ಕುಡಿಸುತ್ತಾರೆ, ನೀರು ಸಿಗದೆ ಇರುವ ಕಡೆಗಳಲ್ಲಿ ತೋಟಗಳಿಗೆ ಅಳವಡಿಸಿರುವ ಹನಿನೀರಾವರಿಯ ಪೈಪ್ ಗಳ ಸಹಾಯದಿಂದ ಪಾತ್ರೆಗಳನ್ನು ತುಂಬಿಸಿ ಕುರಿಗಳಿಗೆ ನೀರು ಕುಡಿಸುತ್ತಾರೆ. ಕೆಲವೊಮ್ಮೆ ತೋಟಗಳ ಮಾಲೀಕರಿಂದ ಬೈಗುಳಗಳನ್ನೂ ಕೇಳಿಬೇಕಾಗುತ್ತದೆ. ನಾವೇ ಅಡುಗೆ ಸಿದ್ದಪಡಿಸಿಕೊಳ್ಳುತ್ತೇವೆ. ರಾತ್ರಿಯ ವೇಳೆ ಕೆಲವರು ಮಲಗುತ್ತೇವೆ. ಕೆಲವರು ಕಾವಲು ಕಾಯುತ್ತೇವೆ. ಹೀಗೆ ಊರೂರು ಸುತ್ತುತ್ತಾ ಕುರಿಗಳ ಹೊಟ್ಟೆ ತುಂಬಿಸುತ್ತಾ ಜೀವನ ಕಳೆಯುತ್ತಿದ್ದೇವೆ’ ಎನ್ನುತ್ತಾರೆ ಕುರಿಗಾಹಿಗಳಾದ ನಾಗರಾಜು, ಚಿಕ್ಕಣ್ಣ, ಸಿದ್ದಪ್ಪ, ಕರಿಯಪ್ಪ.