Home News ಸಂಬಳ ಪಾವತಿ ಆಗ್ರಹಿಸಿ ಜಲಗಾರರು ಮತ್ತು ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ

ಸಂಬಳ ಪಾವತಿ ಆಗ್ರಹಿಸಿ ಜಲಗಾರರು ಮತ್ತು ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ

0

ನಗರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಜಲಗಾರರು ಹಾಗೂ ಪೌರ ಕಾರ್ಮಿಕರಿಗೆ ಬಾಕಿ ಇರುವ ಹದಿನೈದು ತಿಂಗಳುಗಳ ಸಂಬಳವನ್ನು ಕೂಡಲೇ ಪಾವತಿಸಬೇಕು ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಗೌರವಾಧ್ಯಕ್ಷೆ ಮಧುಲತ ಆಗ್ರಹಿಸಿದರು.
ನಗರದ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಜಲಗಾರರು ಹಾಗೂ ಪೌರಕಾರ್ಮಿಕರಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರಸಭೆಯಲ್ಲಿ ಗುತ್ತಿಗೆ ಆದಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಟರ್ ಮನ್ ಗಳು ಹಾಗೂ ಪೌರ ಕಾರ್ಮಿಕರಿಗೆ ಕಳೆದ ಹದಿನೈದು ತಿಂಗಳುಗಳಿಂದ ವೇತನ ನೀಡಿಲ್ಲ. ಈ ಬಗ್ಗೆ ಪೌರಾಯುಕ್ತರನ್ನು ಕೇಳಿದರೆ, “ಇಷ್ಟವಿದ್ದರೆ ಕೆಲಸಕ್ಕೆ ಬನ್ನಿ ಇಲ್ಲವಾದಲ್ಲಿ ಬರಬೇಡಿ ಸಂಬಳ ಕೊಡಲು ಆಗೋಲ್ಲ. ಈ ಬಗ್ಗೆ ನನ್ನನ್ನು ಕೇಳಬೇಡಿ ನಿಮ್ಮ ಗುತ್ತಿಗೆದಾರರನ್ನು ಕೇಳಿ” ಎಂದು ಉತ್ತರಿಸುತ್ತಾರೆ.
ಈ ಹಿಂದೆ ಇದ್ದ ಬಹಳಷ್ಟು ಅಧಿಕಾರಿಗಳು ಇಲ್ಲಿನ ಜಲಗಾರರು ಹಾಗೂ ಪೌರಕಾರ್ಮಿಕರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರು. ಆದರೆ ಇದೀಗ ಬಂದಿರುವ ಪೌರಾಯುಕ್ತರು ಕಚೇರಿಯಲ್ಲಿರುವ ಸಿಬ್ಬಂದಿ ಸೇರಿದಂತೆ ಬೇರಾವ ನೌಕರರಿಗೂ ಕನಿಷ್ಠ ಗೌರವ ನೀಡುವುದಿಲ್ಲ. ನಗರದ ಕೆಲ ವಾರ್ಡುಗಳಲ್ಲಿ ಹದಿನೈದು ದಿನವಾದರೂ ನೀರು ಬಿಡುತ್ತಿಲ್ಲ. ಈ ಬಗ್ಗೆ ನಾಗರಿಕರು ಕೇಳಿದರೆ ಕೆಲಸದವರು ಬಂದಿಲ್ಲ ಎನ್ನುವ ಇವರು ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿಸಲು ಮಾತ್ರ ಸಿದ್ದರಿಲ್ಲ ಎಂದು ದೂರಿದರು.
ಈ ಬಗ್ಗೆ ನಗರಸಭೆ ಅಧ್ಯಕ್ಷರು ಮತ್ತು ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಈವರೆಗೂ ವೇತನ ಸಿಕ್ಕಿಲ್ಲ. ಹಾಗಾಗಿ ಇಂದಿನಿಂದ ಸಿಐಟಿಯು ಬೆಂಬಲದೊಂದಿಗೆ ಅನಿರ್ಧಿಷ್ಟ ಕಾಲ ಹೋರಾಟಕ್ಕೆ ಮುಂದಾಗಿದ್ದು, ಜಲಗಾರರಿಗೆ ವೇತನ ನೀಡುವವರೆಗೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ನಗರಸಭೆಯಲ್ಲಿ ಗುತ್ತಿಗೆ ಆದಾರದ ಮೇಲೆ ಕೆಲಸ ಮಾಡುತ್ತಿರುವ ಜಲಗಾರರು ಹಾಗೂ ಪೌರಕಾರ್ಮಿಕರರಿಗೆ ಸಮಾನ ಕೆಲಸ, ಸಮಾನ ವೇತನ ಸಿಗಬೇಕು. ಕಳೆದ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿರುವ ಇವರನ್ನೇ ಕೆಲಸದಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ನೌಕರರ ಸಂಘದ ತಾಲ್ಲೂಕು ಅದ್ಯಕ್ಷೆ ಮುನಿಲಕ್ಷಮ್ಮ, ಜಲಗಾರರಾದ ನಾಗರಾಜ, ಟಿ.ಎನ್.ರವಿ, ರಮೇಶ್, ರಾಜೇಶ್, ಆನಂದ್, ಮಂಜುನಾಥ್, ಮುರಳಿ, ಬಾಬು, ನವಾಜ್ ಪಾಷಾ, ನವೀನ್‌ಕುಮಾರ್, ಕೆ.ಶ್ರೀನಿವಾಸ್, ನರಸಿಂಹಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!