ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನಿರ್ವಂಚನೆಯಿಂದ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ರಾಮರತ್ನ ಕುಮಾರ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಯಾವುದೇ ಪ್ರತಿಫಲ ಆಶಿಸದೇ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಮಾಡುವ ಸಹಾಯವೇ ಸೇವೆ. ಹಣ ಪಡೆದು ನೌಕರಿ ಮಾಡುವ ನಾವುಗಳು ಮಾಡುತ್ತಿರುವುದು ಸೇವೆಯಲ್ಲ. ಯಾವುದೇ ರೈತರು, ನಾಗರೀಕರು ಸೇರಿದಂತೆ ಕಚೇರಿಗೆ ಬರುವವರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದರು.
ವಿನಾಕಾರಣ ನಾಗರಿಕರನ್ನು ಅಲೆಸುವುದು ಸೇರಿದಂತೆ ಕೆಲಸ ಮಾಡಲು ಲಂಚ ಕೇಳುವುದನ್ನು ಬಿಡಿ ಎಂದ ಅವರು ಇದ್ದಷ್ಟು ದಿನ ತಮ್ಮ ಕೈಲಾದ ಸಹಾಯವನ್ನು ಜನರಿಗೆ ಮಾಡಿದಾಗ ಕೆಲಸ ಮಾಡಿದ ತೃಪ್ತಿಯ ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ. ಲಂಚದ ಹಣ ಪಡೆದು ತಮ್ಮ ಮುಂದಿನ ಪೀಳಿಗೆಯವರಿಗಾಗಿ ಕೂಡಿಡುವುದರಿಂದ ದೇಶದ ಮುಂದಿನ ಪ್ರಜೆಗಳನ್ನು ಸೋಂಬೇರಿಗಳನ್ನಾಗಿ ಮಾಡಬೇಡಿ ಎಂದರು.
ಇನ್ಸ್ಪೆಕ್ಟರ್ ಆಂಜಪ್ಪ ಮಾತನಾಡಿ, ಯಾವುದೇ ಕಾರಣಕ್ಕೂ ಕಚೇರಿಗೆ ಬರುವ ನಾಗರಿಕರ ಕೆಲಸಗಳನ್ನು ವಿನಾಕಾರಣ ವಿಳಂಬ ಮಾಡಬೇಡಿ. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಕೂಡಲೇ ಅವರ ಕೆಲಸ ಮುಗಿಸಿಕೊಡಿ ಇಲ್ಲವಾದಲ್ಲಿ ಅವರಿಗೆ ಹಿಂಬರಹವನ್ನಾದರೂ ನೀಡಿ ಕಳುಹಿಸಿ. ವರ್ಷಗಟ್ಟಲೇ ಕಚೇರಿಗೆ ಅಲೆದು ಸುಸ್ತಾಗಿ ಕೊನೆಗೆ ನಮ್ಮ ಬಳಿಗೆ ಬಂದು ದೂರು ನೀಡಿದಾಗ ಯಾವುದೇ ಮುಲಾಜಿಲ್ಲದೇ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕಾಗುತ್ತದೆ ಎಂದರು.
ಸಭೆಯಲ್ಲಿ ಸಾರ್ವಜನಿಕರಿಂದ ಯಾವುದೇ ದೂರುಗಳು ಸಲ್ಲಿಕೆಯಾಗಲಿಲ್ಲ.
ತಹಸೀಲ್ದಾರ್ ಪಿ.ಕೆ.ವಾಸುದೇವಮೂರ್ತಿ, ರಾಜಸ್ವ ನಿರೀಕ್ಷಕ ಮೋಹನ್, ಬೆಸ್ಕಾಂ ಎಇಇ ಅನ್ಸರ್ಪಾಷ, ಸಿಡಿಪಿಓ ಲಕ್ಷ್ಮಿದೇವಮ್ಮ, ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕ ರತ್ನಯ್ಯಶೆಟ್ಟಿ, ಪಶುವೈದ್ಯ ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.