Home News ಸರ್ಕಾರಿ ಗೋಮಾಳ ಹಾಗು ಸ್ಮಶಾನದ ಜಾಗ ತೆರವು

ಸರ್ಕಾರಿ ಗೋಮಾಳ ಹಾಗು ಸ್ಮಶಾನದ ಜಾಗ ತೆರವು

0

ಒತ್ತುವರಿಯಾಗಿದ್ದ ಸರ್ಕಾರಿ ಗೋಮಾಳ ಸೇರಿದಂತೆ ಸ್ಮಶಾನದ ಜಾಗವನ್ನು ತಹಶೀಲ್ದಾರ್ ಎಸ್.ಅಜಿತ್ಕುಮಾರ್ ರೈ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ತೆರವುಗೊಳಿಸಿದ್ದಾರೆ.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಂಟೂರು ಗ್ರಾಮದ ಸರ್ಕಾರಿ ಗೋಮಾಳ ಹಾಗು ಸ್ಮಶಾನದ ಜಾಗವನ್ನು ಗ್ರಾಮದ ಕೆಲವರು ಒತ್ತುವರಿ ಮಾಡಿಕೊಂಡಿದ್ದರು ಎನ್ನಲಾಗಿದ್ದು ಮಂಗಳವಾರ ತಹಶೀಲ್ದಾರ್ ಎಸ್.ಅಜಿತ್ಕುಮಾರ್ ರೈ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರಿ ಜಾಗದ ಅಳತೆ ಮಾಡಿಸುವ ಮೂಲಕ ಟ್ರಂಚ್ ಹೊಡೆದು ಗ್ರಾಮದ ಸ್ಮಶಾನಕ್ಕೆ ಮೀಸಲಿಟ್ಟಿದ್ದ ಜಾಗದ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.
ಸರ್ಕಾರಿ ಜಾಗ ಹಾಗು ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ತಾವೇ ಖುದ್ದು ತೆರವುಗೊಳಿಸುವುದಾಗಿ ಸ್ಥಳೀಯರು ಮಾಡಿದ ಮನವಿಗೆ ಸ್ಪಂದಿಸಿ ಮುಂದಿನ ಗುರುವಾರದೊಳಗೆ ಒತ್ತುವರಿಯಾಗಿರುವ ಸರ್ಕಾರಿ ಜಾಗ ಹಾಗು ರಸ್ತೆಯ ಸ್ಥಳವನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.
ಬಶೆಟ್ಟಹಳ್ಳಿ ರಾಜಸ್ವ ನಿರೀಕ್ಷಕ ನರಸಿಂಹಮೂರ್ತಿ, ಗ್ರಾಮ ಲೆಕ್ಕಿಗ ಮುನಿಶಾಮಿ, ರಮೇಶ್, ರಾಕೇಶ್, ಭೂಮಾಪನ ಇಲಾಖೆಯ ದಿಲೀಪ್, ದಿಬ್ಬೂರಹಳ್ಳಿ ಠಾಣೆಯ ಪಿಎಸ್ಸೈ ವಿಜಯ್ರೆಡ್ಡಿ, ಹಾಗು ಸಿಬ್ಬಂದಿ ಹಾಜರಿದ್ದರು.