ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭೌ್ಯಗಳನ್ನು ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳ ಅಗತ್ಯತೆಯನ್ನು ಪೂರೈಸಲು ಸಾರ್ವಜನಿಕರು ಮುಂದಾಗಬೇಕು. ಸರ್ಕಾರಿ ಶಾಲೆಗಳು ಗ್ರಾಮದಲ್ಲಿರುವ ದೇಗುಲದಂತೆ ಎಂದು ರಾಷ್ಟ್ರೀಯ ಕ್ರೀಡಾಪಟು ಜಯಂತಿಗ್ರಾಮದ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮರಿಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ 50 ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ, ಲೇಖನ ಸಾಮಗ್ರಿ ಹಾಗೂ ಸ್ವಾಮಿ ವಿವೇಕಾನಂದರ ಕುರಿತ ಪುಸ್ತಕವನ್ನು ವಿತರಿಸಿ ಅವರು ಮಾತನಾಡಿದರು.
ಮರಿಹಳ್ಳಿ ಗ್ರಾಮವು ನಗರ ಪ್ರದೇಶದಿಂದ ದೂರದಲ್ಲಿದೆ. ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಜನಾಂಗದ ಮಕ್ಕಳು ಹೆಚ್ಚಿದ್ದಾರೆ. ಎಲ್ಲಾ ಮಕ್ಕಳೂ ಪ್ರತಿಭಾವಂತರಾಗಿರುತ್ತಾರೆ. ಅವರಿಗೆ ಸೂಕ್ತ ಸೌಲಭ್ಯ, ಪ್ರೋತ್ಸಾಹ, ಭರವಸೆ, ಆಶೋತ್ತರಗಳನ್ನು ತುಂಬಬೇಕು. ವಿದ್ಯಾರ್ಥಿಗಳ ಅಗತ್ಯತೆಯನ್ನು ಮನಗಂಡು ಸೌಕರ್ಯಗಳನ್ನು ಒದಗಿಸಿದಲ್ಲಿ ಸಾಧಕರಾಗುತ್ತಾರೆ. ಅವರು ಗ್ರಾಮಕ್ಕೆ ಹಾಗೂ ತಾಲ್ಲೂಕಿಗೆ ಕೀರ್ತಿಯನ್ನು ತರುತ್ತಾರೆ ಎಂದು ಹೇಳಿದರು.
ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಕೆಲಸ ಮತ್ತು ಸರ್ಕಾರಿ ಕೆಲಸದಲ್ಲಿರುವವರ ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಓದ ಬೇಕು ಎಂಬ ಕಾನೂನು ಜಾರಿ ಮಾಡಬೇಕು. ಭಾರತ ದೇಶಗಳಲ್ಲಿ ಏಕರೂಪ ಶಿಕ್ಷಣ ಪದ್ದತಿ ಜಾರಿ ಮಾಡಬೇಕು, ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಪರಿಸ್ಥಿತಿಯು ಎದುರಾಗುವುದು. ಮಕ್ಕಳು ವಿವೇಕಾನಂದರ ತತ್ವಗಳನ್ನು ಪಾಲಿಸಿದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುವರು ಎಂದರು.
ಗ್ರಾಮ ಪಂಚಾಯ್ತಿ ಸದಸ್ಯೆ ಪದ್ಮಮ್ಮ, ಮುಖ್ಯ ಶಿಕ್ಷಕ ಬಾಬು, ಶಿಕ್ಷಕ ಗಣೇಶ್, ಗ್ರಾಮಸ್ಥರಾದ ಗೋವಿಂದಪ್ಪ, ವೆಂಕಟೇಶಪ್ಪ ಹಾಜರಿದ್ದರು.