Home News ಸರ್ಕಾರಿ ಶಾಲೆಗಳ ಪ್ರಗತಿಗೆ ನೆರವು ನೀಡಬೇಕು

ಸರ್ಕಾರಿ ಶಾಲೆಗಳ ಪ್ರಗತಿಗೆ ನೆರವು ನೀಡಬೇಕು

0

ಶಿಕ್ಷಣ ವ್ಯವಸ್ಥೆಯಿಂದ ದೂರ ಉಳಿಯುತ್ತಿರುವ ಮಕ್ಕಳನ್ನು ಶಿಕ್ಷಣ ವ್ಯಾಪ್ತಿಗೆ ಒಳಪಡಿಸಲು ಸಮುದಾಯ್ ಮುಖಂಡರು ಶ್ರಮಿಸಬೇಕು. ಸರ್ಕಾರಿ ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ಸ್ವಯಂ ಸೇವಾ ಸಂಸ್ಥೆಗಳು ಶೈಕ್ಷಣಿಕ ನೆರವನ್ನು ಕಲ್ಪಿಸಲು ಶ್ರಮಿಸಬೇಕೆಂದು ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವಿಜಯನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಬಿ.ಬೆಟ್ಟೇಗೌಡ ತಿಳಿಸಿದರು.
ತಾಲ್ಲೂಕಿನ ಸಾದಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಜಯನಗರ ಲಯನ್ಸ್ ಕ್ಲಬ್ ಹಾಗೂ ಸ್ಥಳಿಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹಯೋದಲ್ಲಿ ಆಯೋಜಿಸಿದ್ದ ಗ್ರಾಮೀಣ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣಾ ಸಮಾರಂಭ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಲಯನ್ಸ್ ಕ್ಲಬ್ ವಿಶ್ವಮಟ್ಟದ ಸಂಸ್ಥೆಯಾಗಿದ್ದು ೧೦೦ವರ್ಷಗಳ ಸೇವಾವಧಿಯನ್ನು ಪೂರೈಸಿದೆ. ಕೇವಲ ಶೈಕ್ಷಣಿಕ ಪ್ರಗತಿಗೆ ಮಾತ್ರವಲ್ಲದೆ ಸಮುದಾಯ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ನೀಡಿ ಆರೋಗ್ಯ ಶಿಬಿರಗಳನ್ನು, ಅಂಗವಿಕಲ ಕಲ್ಯಾಣ ಕಾರ್ಯಕ್ರಮಗಳು, ಹಿರಿಯ ನಾಗರಿಕರ ಸೇವಾ ಕಾರ್ಯಕ್ರಮ, ಪರಿಸರ ಸಮೃದ್ಧಿ, ನೈರ್ಮಲ್ಯ ಮತ್ತು ಸ್ವಚ್ಚತೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೬ ವರ್ಷಗಳಿಂದ ವಿಶೇಷವಾಗಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಗುಡಿಬಂಡೆಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಸಹಕಾರದೊಂದಿಗೆ ನೆರವನ್ನು ಕಲ್ಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ನೆರವೇರಿಸಲು ನಮ್ಮ ಸಂಸ್ಥೆ ಸಿದ್ದವೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಈ ಹಿಂದೆಯೂ ಸಾಕಷ್ಟುಬಾರಿ ಲಯನ್ಸ್ ಕ್ಲಬ್ ವಿಜಯನಗರ ಶಾಖೆಯ ಸಂಸ್ಥೆ ಹಾಗೂ ಗುಡಿಬಂಡೆಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಹೆಚ್ಚಿನ ಪ್ರಮಾಣ ಶೈಕ್ಷಣಿಕ ನೆರವನ್ನು ಕಲ್ಪಿಸಿದ್ದು, ಈ ಬಾರಿ ಸಾದಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೧೫೦ ತಟ್ಟೆ ಲೋಟ, ೪೦೦ ನೋಟ್ ಪುಸ್ತಕಗಳನ್ನು ವಿತರಿಸುವ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಾದಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ೧೫೦ ತಟ್ಟೆ ಲೋಟ, ೪೦೦ ನೋಟ್ ಪುಸ್ತಕಗಳನ್ನು ವಿಜಯನಗರ ಲಯನ್ಸ್ ಕ್ಲಬ್ ವತಿಯಿಂದ ವಿತರಿಸಲಾಯಿತು.
ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ವಕೀಲ ಜಿ.ವಿ ವಿಶ್ವನಾಥ್, ವಿಜಯನಗರ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ಕೃಷ್ಣಯ್ಯ, ಖಜಾಂಚಿ ಅರುಣ್ ಪ್ರಕಾಶ್, ಪದಾಧಿಕಾರಿಗಳಾದ ಆರ್. ರಾಮಮೂರ್ತಿ, ವಿ. ಗಂಗಾಧರ್ ರಾವ್, ವೆಂಕಟೇಶ್ ಮೂರ್ತಿ, ನರಸಿಂಹಮೂರ್ತಿ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹ ಕಾರ್ಯದರ್ಶಿ ಎನ್. ಮಂಜುನಾಥ್, ಸಿಆರ್ಪಿ ಗಂಗಾಧರ್, ಎಸ್ಡಿಎಂಸಿ ಅಧ್ಯಕ್ಷ ಎಸ್.ಎನ್.ರಾಜಣ್ಣ, ಸಾದಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಾರಿ ಮುಖ್ಯ ಶಿಕ್ಷಕ ಕೆ.ಸಿ. ರಮೇಶ್, ಸಹ ಶಿಕ್ಷಕರಾದ ಯು.ರಾಮಾಂಜಿನೆಯ, ಜಿ. ಪದ್ಮಾವತಿ, ಪುಷ್ಪಲತ, ಅನಂತು, ದೈಹಿಕ ಶಿಕ್ಷಕ ಎಸ್.ಎನ್.ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.