Home News ಸರ್ಕಾರಿ ಶಾಲೆಗೆ ಕಂಪೆನಿಯ ಉದ್ಯೋಗಿಗಳ ನೆರವು

ಸರ್ಕಾರಿ ಶಾಲೆಗೆ ಕಂಪೆನಿಯ ಉದ್ಯೋಗಿಗಳ ನೆರವು

0

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಉತ್ತಮ ಶಿಕ್ಷಣ ಮತ್ತು ಶೈಕ್ಷಣಿಕ ಪರಿಸರವನ್ನು ಒದಗಿಸಿದಲ್ಲಿ ಅವರು ಉತ್ತಮ ಪ್ರಜೆಗಳಾಗುವಲ್ಲಿ ಸಂಶಯವಿಲ್ಲ ಎಂದು ಬೆಂಗಳೂರಿನ ಇಂಡಿಯನ್ ಡಿಸೈನ್ಸ್ ಎಕ್ಸ್ಪೋರ್ಟ್ ಕಂಪೆನಿಯ ಮಾಲೀಕ ಖಲೀಂ ಉರ್ ರೆಹಮಾನ್ ಅಭಿಪ್ರಾಯಪಟ್ಟರು.
ಶಿಡ್ಲಘಟ್ಟ- ತಾಲ್ಲೂಕಿನ ವೈ.ಹುಣಸೇನಹಳಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಮ್ಮ ಕಂಪೆನಿಯಿಂದ ದತ್ತು ತೆಗೆದುಕೊಂಡ ಹಿನ್ನೆಲೆಯಲ್ಲಿ ಮಕ್ಕಳಿಗೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಪರಿಕರಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.
ಪೋಷಕರು ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಬೇಕು. ಶಾಲಾಭಿವೃದ್ಧಿ ಸಮಿತಿಯವರು ಮತ್ತು ಶಿಕ್ಷಕರು ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ. ಅದರೊಂದಿಗೆ ಶಾಲೆಗೆ ಅಗತ್ಯವಿರುವ ಉಳಿದೆಲ್ಲ ಅಂಶಗಳನ್ನೂ ನಮ್ಮ ಕಂಪೆನಿಯಿಂದ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಕಂಪೆನಿಯ ಉದ್ಯೋಗಿ ಜಿ.ಎನ್.ನಂದಕುಮಾರ್ ಮಾತನಾಡಿ, ಶಾಲೆಗೆ ಬರುವ ಮಕ್ಕಳ ಬಗ್ಗೆ ಪೋಷಕರಲ್ಲದೆ ಗ್ರಾಮಸ್ಥರೂ ಗಮನಹರಿಸಬೇಕು. ಶಾಲಾ ಸಮಯದಲ್ಲಿ ಸಮವಸ್ತ್ರ ಧರಿಸಿರುವ ಮಕ್ಕಳು ಹೊರಗೆ ಕಂಡಲ್ಲಿ ವಿಚಾರಿಸಿ ಶಾಲೆಗೆ ಕರೆತರಬೇಕು. ಮುಂದಿನ ದಿನಗಳಲ್ಲಿ ಶಾಲೆಗೆ ಅಬತ್ಯವಿರುವ ಡೆಸ್ಕ್ಗಳು, ಕಂಪ್ಯೂಟರ್ಗಾಗಿ ಬ್ಯಾಟರಿ, ಶಾಲೆಯು ಸೋರದಂತೆ ರಿಪೇರಿ ಮುಂತಾದವುಗಳನ್ನು ಮಾಡಿಕೊಡುವುದಾಗಿ ಹೇಳಿದರು.
ವಾಟರ್ ಫಿಲ್ಟರ್, ಕ್ರಿಕೆಟ್, ವಾಲೀಬಾಲ್, ಹಾಕಿ ಮುಂತಾದ ಆಟದ ಸಾಮಗ್ರಿಗಳು, ಪಾಠೋಪಕರಣಗಳನ್ನು ಸೇರಿದಂತೆ ಕಲಿಕೆ ಹಾಗೂ ಕ್ರೀಡೆಗೆ ಸಹಕಾರಿಯಾಗುವ ಸುಮಾರು ೧ ಲಕ್ಷ ರೂಪಾಯಿ ಮೌಲ್ಯದ ಪರಿಕರಗಳನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.
ಕಂಪೆನಿಯ ಅಬ್ದುಲ್ ರಜಾಕ್, ದೇವರಾಜ್, ಅರುಣ್, ಸುಹಾಲ್, ಸತೀಶ್ಕುಮಾರ್, ಶಿವಶಂಕರ್, ಮಣಿ, ವಿಜಿ, ಶಿಕ್ಷಣ ಸಂಯೋಜಕ ಶ್ರೀನಾಥ್, ಮುಖ್ಯ ಶಿಕ್ಷಕಿ ಹಂಸವೇಣಿ, ಸಹಶಿಕ್ಷಕರಾದ ಕುಮುದ, ಮಂಜುಳ, ವಿದ್ಯಾ, ಶ್ರೀನಾಥ್, ಅಕ್ಕಾಯಮ್ಮ, ಎಸ್ಡಿಎಂಸಿ ಅಧ್ಯಕ್ಷ ಮುನೇಗೌಡ, ಗ್ರಾಮ ಪಂಚಾಯತಿ ಸದಸ್ಯ ಮುನಿಯಪ್ಪ, ಜಿ.ಎನ್.ಶ್ಯಾಮಸುಂದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.