Home News ಸವಲತ್ತುಗಳು ಅರ್ಹ ಫಲಾನುಭವಿಗೆ ಸಿಗುತ್ತಿಲ್ಲ

ಸವಲತ್ತುಗಳು ಅರ್ಹ ಫಲಾನುಭವಿಗೆ ಸಿಗುತ್ತಿಲ್ಲ

0

ಸರ್ಕಾರದಿಂದ ಬರುವ ಯಾವುದೇ ಸವಲತ್ತುಗಳು ಅರ್ಹ ಫಲಾನುಭವಿಗೆ ಸಿಗುತ್ತಿಲ್ಲ. ನಗರಸಭೆ ಕಾರ್ಯಾಲಯದಲ್ಲಿ ಮಧ್ಯವರ್ತಿಗಳ ಸಹಕಾರವಿಲ್ಲದೇ ಯಾವುದೇ ಕೆಲಸ ಕಾರ್ಯಗಳಾಗುತ್ತಿಲ್ಲ ಎಂದು ನಗರದ ಒಂದನೇ ವಾರ್ಡಿನ ಸದಸ್ಯ ಲಕ್ಷಯ್ಯ ಆರೋಪಿಸಿದರು.
ನಗರದ ನಗರಸಭಾ ಸಭಾಂಗಣದಲ್ಲಿ ಗುರುವಾರ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಒಂದನೇ ವಾರ್ಡಿನಲ್ಲಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಸುತ್ತಿರುವ ಕಾಮಗಾರಿಯ ವೇಳೆ ಕುಡಿಯುವ ನೀರಿನ ಪೈಪ್ ಲೈನ್ ಕಿತ್ತುಹಾಕಲಾಗಿ ಈ ಬಗ್ಗೆ ಸದಸ್ಯನಾದ ನಾನು ಪ್ರಶ್ನಿಸಿದರೆ ಬದಲಿ ಪೈಪು ಅಳವಡಿಸಲು ನಗರಸಭೆಗೆ ೫೦ ಲಕ್ಷ ಹಣ ನೀಡಿದ್ದೇವೆ ಎನ್ನುತ್ತಾರೆ ಈ ಬಗ್ಗೆ ಅಧಿಕಾರಿಗಳು ಸಭೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ವ್ಯಾಪ್ತಿಯಲ್ಲಿರುವ ನಿವೇಶನ ಹಾಗೂ ಮನೆಗಳಿಗೆ ಖಾತೆ ಮಾಡಿಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದು, ಈ ಬಗ್ಗೆ ಆಯುಕ್ತರು ತ್ವರಿತ ಕ್ರಮ ಜರುಗಿಸಬೇಕು ಎಂದು ನಗರಸಭೆ ಕೆಲ ಸದಸ್ಯರು ಒತ್ತಾಯಿಸಿದರು.
ನಗರಸಭೆಯಾಗಿ ಮೇಲ್ದರ್ಜೆಗೇರಿದಾಗ ನಗರಕ್ಕೆ ಹೊಂದಿಕೊಂಡಂತಿರುವ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೆಲ ನಿವೇಶನ ಹಾಗೂ ಮನೆಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲು ಈ ಹಿಂದೆ ಇದ್ದ ಆಯುಕ್ತರು ಖಾತೆ ಮಾಡಿಕೊಡುತ್ತಿದ್ದರು. ಆದರೆ ಇದೀಗ ಬಂದಿರುವ ಆಯುಕ್ತರು ಖಾತೆ ಮಾಡಲು ಅನುಮತಿ ನೀಡುತ್ತಿಲ್ಲ. ಈ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ನಗರಸಭೆ ಪೌರಾಯುಕ್ತ ಚಲಪತಿ ಈ ಬಗ್ಗೆ ಪ್ರತಿಕ್ರಿಯಿಸಿ ಈ ಹಿಂದೆ ನಗರಸಭೆಯಲ್ಲಿ ಖಾತೆ ಮಾಡಿಕೊಡಲು ಅಧಿಕಾರಿಗಳು ಕೈ ಬರವಣಿಗೆಯಲ್ಲಿ ಕೊಡುತ್ತಿದ್ದರು. ಆದರೆ ಇದೀಗ ಸರ್ಕಾರದ ಆದೇಶದಂತೆ ಖಾತೆಗಳನ್ನು ಆನ್ಲೈನ್ ಮೂಲಕ ಮಾಡಲಾಗುತ್ತಿದ್ದು ಸರ್ಕಾರದ ನಿರ್ದೇಶನದಂತೆ ಅಗತ್ಯ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸಿದಲ್ಲಿ ಮಾತ್ರ ಖಾತೆ ಮಾಡಲಾಗುವುದು ಎಂದರು.
ಅಗತ್ಯ ದಾಖಲಾತಿಗಳಲ್ಲಿ ಒಂದಾದ ಭೂ ಪರಿವರ್ತನೆ ದಾಖಲೆ ಹಳೆಯ ನಗರದ ಯಾರ ಬಳಿಯೂ ಇಲ್ಲ ಹಾಗಾಗಿ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಈ ಬಗ್ಗೆ ಪೌರಾಯುಕ್ತರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲು ಮುಂದಾಗಬೇಕು ಎಂದು ಸದಸ್ಯರು ತಿಳಿಸಿದರು.
ಸಭೆಯಲ್ಲಿ ೨೦೧೫-೧೬ ಹಾಗು ೨೦೧೬-೧೭ ನೇ ಸಾಲಿನ ೧೪ ನೇ ಹಣಕಾಸು ಸಾಮಾನ್ಯ ಮೂಲ ಅನುಧಾನದಲ್ಲಿದಡಿ ಉಳಿಕೆಯಾಗಿರುವ ೨೯ ಲಕ್ಷ ರೂಗಳಿಗೆ ಕ್ರಿಯಾ ಯೋಜನೆ, ೧೩ ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನ ರಸ್ತೆ ಮತ್ತು ಸೇತುವೆ ನಿರ್ವಹಣೆ, ಸಾಮಾನ್ಯ ಕಾರ್ಯಾದಾರಿತ ಅನುದಾನದಡಿ ಉಳಿಕೆಯಾಗಿರುವ ೧೦ ಲಕ್ಷ ರೂಗಳಿಗೆ ಕ್ರಿಯಾಯೋಜನೆ, ಪೌರ ಕಾರ್ಮಿಕರ ಬೆಳಗಿನ ಉಪಹಾರ ಖಾಯಂ ಮತ್ತು ಹೊರಗುತ್ತಿಗೆ ನೌಕರರಿಗೂ ನೀಡುವ ಕುರಿತು ಹಾಗು ಶೇ. ೨೪.೧೦ ಮತ್ತು ಶೇ. ೭.೨೫, ಶೇ.೩ ರ ಅನುದಾನದಲ್ಲಿ ವಿವಿಧ ಕಲ್ಯಾಣ ಯೋಜನೆಗಳಿಗೆ ಫಲಾನುಭನವಿಗಳನ್ನು ಆಯ್ಕೆ ಮಾಡಿ ಸವಲತ್ತು ವಿತರಿಸಲು ಸಭೆಯಲ್ಲಿ ಸದಸ್ಯರ ಅನುಮೋದನೆ ಪಡೆಯಲಾಯಿತು.
ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ನಗರಸಭೆ ಸದಸ್ಯರು, ಸಿಬ್ಬಂದಿ ಹಾಜರಿದ್ದರು.