Home News ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

0

ಅಂತರ್ಜಲದ ಕುಸಿತದಿಂದ ನೀರಿನ ಫ್ಲೂರೈಡೀಕರಣಗೊಂಡು ಹಲ್ಲುಗಳು ಟೊಳ್ಳಾಗುವುದು, ಹಲ್ಲುಗಳಲ್ಲಿ ಕುಳಿಗಳುಂಟಾಗುವುದು ಸಂಭವಿಸುತ್ತಿದ್ದು, ದಂತದ ಆರೋಗ್ಯದ ಬಗ್ಗೆ ಎಚ್ಚರಿಕೆ ಅತ್ಯಗತ್ಯ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಭಾರತೀಯ ರೆಡ್ಕ್ರಾಸ್ ಸೊಸೈಟಿ, ಯುನಿಟಿ ಸಿಲ್ಸಿಲಾ ಫೌಂಡೇಷನ್, ಸೌಂದರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ಧಿ ಸಂಸ್ಥೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಹಾಗೂ ವಿಜಯಾ ಮೆಡಿಕಲ್ಸ್ ಸಹಯೋಗದಲ್ಲಿ ನಡೆದ ಉಚಿತ ದಂತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಆರೋಗ್ಯ ಸೇವೆಯು ದುಬಾರಿಯಾಗುತ್ತಿದೆ. ಅದರಲ್ಲಿಯೂ ದಂತದ ಆರೋಗ್ಯದ ಬಗ್ಗೆ ಜನರು ಹೆಚ್ಚಿನ ಕಾಳಜಿವಹಿಸುತ್ತಿಲ್ಲ. ಕೆಲವಾರು ಸಂಸ್ಥೆಗಳು ಕೈಜೋಡಿಸಿ ಈ ರೀತಿಯ ದಂತ ಚಿಕಿತ್ಸೆಯ ಶಿಬಿರವನ್ನು ಆಯೋಜಿಸಿರುವುದು ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ದಂತ ಚಿಕಿತ್ಸೆಗಾಗಿ ಆಗಮಿಸಿದ್ದ ರೋಗಿಗಳಿಗೆ ಯುನಿಟಿ ಸಿಲ್ಸಿಲಾ ಫೌಂಡೇಷನ್ ಮತ್ತು ವಿಜಯಾ ಮೆಡಿಕಲ್ಸ್ ವತಿಯಿಂದ ಉಚಿತವಾಗಿ ಹಲ್ಲುಜ್ಜುವ ಬ್ರೆಷ್ ಮತ್ತು ಪೇಸ್ಟ್ ವಿತರಿಸಿದರು. ಸುಮಾರು 150 ಮಂದಿ ದಂತ ತಪಾಸಣೆಗೆ ಒಳಗಾದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಗುರುಬಸಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ರೆಡ್ಕ್ರಾಸ್ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ, ದಂತವೈದ್ಯರಾದ ಡಾ.ಕುಬ್ರಾ ಅಂಜುಮ್, ಡಾ.ಪ್ರತಿಭಾ, ಸೌಂದರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ಧಿ ಸಂಸ್ಥೆಯ ಡಾ.ವಿಜಯಾ, ವಿಜಯಾ ಮೆಡಿಕಲ್ಸ್ ಮಂಜುನಾಥ್, ಯುನಿಟಿ ಸಿಲ್ಸಿಲಾ ಫೌಂಡೇಷನ್ನ ಮಹಮ್ಮದ್ ಅಸ್ಸದ್, ಅಕ್ರಂಪಾಷ, ಇಮ್ತಿಯಾಜ್ ಪಾಷ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.