ಹಲವು ವಿರೋಧದ ನಡುವೆಯೂ ಸಾವಿತ್ರಿ ಬಾಪುಲೆ ದೇಶದಲ್ಲಿ ಮೊಟ್ಟ ಮೊದಲು ಪ್ರತ್ಯೇಕ ಹೆಣ್ಣುಮಕ್ಕಳ ಶಾಲೆ ಆರಂಭಿಸಿ ದಾರಿ ದೀಪವಾಗಿದ್ದಾರೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ನಡೆದ ಸಾವಿತ್ರಿ ಬಾಪುಲೆ ಅವರ ೧೮೬ ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ, ಶೋಷಿತರಿಗೆ ನಿಷೇಧಿಸಿದ ಶಿಕ್ಷಣ ಹಕ್ಕನ್ನು ಜ್ಯೋತಿ ಬಾಪುಲೆ ಪತ್ನಿ ಸಾವಿತ್ರಿ ಬಾಪುಲೆ ಪುಣೆಯಲ್ಲಿ ಪ್ರತ್ಯೇಕ ಹೆಣ್ಣು ಮಕ್ಕಳ ಶಾಲೆಯನ್ನು ಆರಂಭಿಸಿ, ವಿದ್ಯೆ ಕಲಿಯುವಂತೆ ಮಾಡಿದ್ದಾರೆ. ಅಂದು ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಹೇಳಿಕೊಡದೆ ಹೋಗಿದ್ದರೆ ನಮ್ಮ ಸ್ಥಿತಿ ಯಾವ ಮಟ್ಟದಲ್ಲಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಚಲನಚಿತ್ರ ನಟ ಆರ್.ಜನಾರ್ಧನ್ ಮಾತನಾಡಿ, ಸಾವಿತ್ರಿ ಬಾಪುಲೆ ಭಾರತದ ಪ್ರಥಮ ಶಿಕ್ಷಕಿ ಮಾತ್ರವಲ್ಲ. ವಿಶ್ವದ ಮಾತೆ ಆಗಿದ್ದಾರೆ. ಮಹಿಳೆಯರ ಉದ್ಧಾರಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮಹಿಳೆ ವಿರುದ್ಧವಿರುವ ಅನಿಷ್ಟ ಪದ್ಧತಿ ವಿರುದ್ಧ ಹೋರಾಟ ನಡೆಸಿದರು. ಇಡೀ ಶೋಷಿತ ಸಮುದಾಯ ದಿನನಿತ್ಯ ಸಾವಿತ್ರಿಬಾಪುಲೆ ಅವರನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜು ಮಾತನಾಡಿ, ಬ್ರಿಟೀಷರ ವಿರೋಧದ ನಡುವೆಯೂ ಸ್ವಂತ ಶಾಲೆ ತೆರೆದು ಮಹಿಳೆಯರಿಗೆ ಶಿಕ್ಷಣ ನೀಡಲಾರಂಭಿಸಿದ ದಿಟ್ಟ ಹಾಗು ದೇಶದ ಮೊದಲ ಶಿಕ್ಷಕಿ ಸಾವಿತ್ರ ಬಾಪುಲೆ. ಜಾತಿಧರ್ಮವರ್ಗ ಭೇದ ಮಾಡದೆ ಎಲ್ಲರಿಗೂ ಅಕ್ಷರದೂಟ ಉಣಬಡಿಸಿದ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನ. ಈ ದಿನವನ್ನು ಶಿಕ್ಷಕಿಯರ ದಿನಾಚರಣೆ ಎಂದು ಸರ್ಕಾರ ಘೋಷಣೆ ಮಾಡಬೇಕು.
ಬಾಲ್ಯ ವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯದಂತಹವುಗಳನ್ನು ತೊಲಗಿಸಲು ಮೊದಲು ಮಹಿಳೆ ಶಿಕ್ಷಣವಂತಳಾಗಬೇಕು. ಸಾವಿತ್ರಿ ಭಾಪುಲೆಯಂತಹವರ ಜೀವನ ಸಾಧನೆಗಳ ಬಗ್ಗೆ ತಿಳಿದುಕೊಂಡು ಅವರಲ್ಲಿನ ಒಳ್ಳೆಯ ಗುಣ, ತತ್ವ ಆದರ್ಶಗಳನ್ನು ನಾವೂ ಸಹ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ. ಜಾತಿ ಮತ ಧರ್ಮ ಬಡವ ಶ್ರೀಮಂತ ಎನ್ನುವ ತಾರತಮ್ಯ ಇಲ್ಲದೆ ಎಲ್ಲರೂ ಈ ನಾಡಿನ ಶ್ರೇಯಸ್ಸಿಗೆ ಶ್ರಮಿಸಬೇಕು ಎಂದು ಹೇಳಿದರು.
ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ‘ನೀನಿಲ್ಲದ ಮಳೆ’ ಚಲನಚಿತ್ರ ತಂಡದವರು ಜನ ಗಣ ಮನ ಅರ್ಥಸಹಿತ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದರು.
ಚಿತ್ರ ನಿರ್ಮಾಪಕ ದೇವರಾಜು, ಚಿತ್ರನಟಿ ವ್ಯಾಲರಿ, ಭವ್ಯ, ಮುಖಂಡರಾದ ಲಕ್ಷ್ಮೀನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯೆ ಉಮಾ, ನೇತ್ರಾವತಿ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಪುಷ್ಪಾ ರಾಮಚಂದ್ರ, ಮುಖ್ಯಶಿಕ್ಷಕಿ ವೆಂಕಟರತ್ನಮ್ಮ, ಮುನಿವೆಂಕಟಸ್ವಾಮಿ, ಬಾಬು, ನರಸಿಂಹಮೂರ್ತಿ, ಜಗದೀಶ್, ಶಿಕ್ಷಕರಾದ ಚಾಂದ್ಪಾಷ, ಭಾರತಿ, ಅಶೋಕ್, ನೃತ್ಯಕಲಾವಿದ ಸಿ.ಎನ್.ಮುನಿರಾಜು, ಕೆಂಪೇಗೌಡ, ವೇಣುಗೋಪಾಲ್, ಕಿರುಚಿತ್ರ ನಿರ್ದೇಶಕ ರಂಗ ಹಾಜರಿದ್ದರು.