ದೇಶಕ್ಕಾಗಿ ತಮ್ಮ ಬದುಕನ್ನು ಅರ್ಪಣೆ ಮಾಡಿದ ಮಹಾನುಭಾವರ ಬಗ್ಗೆ ಮಕ್ಕಳು ತಿಳಿಯಬೇಕು. ನಮಗೆ ಬಂದ ಸ್ವಾತಂತ್ರ್ಯದ ಮಹತ್ವವನ್ನು ತಿಳಿಯಬೇಕಾದರೆ ದೇಶಭಕ್ತರ ಬಲಿದಾನಗಳ ಬಗ್ಗೆ ಅರಿಯಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಗುರುವಾರ ದೇಶಭಕ್ತರ ಬಲಿದಾನ ದಿನಾಚರಣೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದಿಂದ ಶಾಲೆಗೆ ಡೆಸ್ಕ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಗತ್ಸಿಂಗ್, ರಾಜಗುರು ಮತ್ತು ಸುಖದೇವ್ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ದಿನವಿದು. ಚಿಕ್ಕ ವಯಸ್ಸಿನಲ್ಲಿಯೇ ಉದಾತ್ತ ಕಾರ್ಯಕ್ಕಾಗಿ ತಮ್ಮ ಜೀವವನ್ನು ಬಲಿದಾನವನ್ನಾಗಿ ಅವರು ಅರ್ಪಿಸಿದ್ದಾರೆ. ಅಥಹವರ ಜೀವನ ಚರಿತ್ರೆಯನ್ನು ಮಕ್ಕಳು ತಿಳಿಯಬೇಕು. ಆಗ ಮಾತ್ರ ನಮ್ಮ ಈಗಿನ ಬದುಕಿಗೆ, ಸಿಕ್ಕಿರುವ ಸ್ವಾತ್ಂತ್ರ್ಯದ ಬೆಲೆ ತಿಳಿಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದಿಂದ ಶಾಲೆಗೆ ಐದು ಡೆಸ್ಕ್ಗಳನ್ನು ನೀಡಲಾಯಿತು. ಶಾಲೆಯ ವತಿಯಿಂದ ಶೇ.20 ರಷ್ಟು ಹಣ ಡೆಸ್ಕ್ಗಳಿಗಾಗಿ ನೀಡಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ಮೋಹನ್ಕುಮಾರ್ ತಿಳಿಸಿದರು.
ಶಿಕ್ಷಕ ಎಸ್.ಚಾಂದ್ಪಾಷ ಭಗತ್ಸಿಂಗ್, ರಾಜಗುರು ಮತ್ತು ಸುಖದೇವ್ ಕುರಿತಂತೆ ಸುಧೀರ್ಘವಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿವರಿಸಿದರು. ಗ್ರಾಮದ ವೃದ್ಧರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನ, ಎಸ್ಡಿಎಂಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಸದಸ್ಯರಾದ ಈಶ್ವರಾಚಾರಿ, ವೆಂಕಟಮ್ಮ, ಶಿಕ್ಷಕರಾದ ಅಶೋಕ್, ಭಾರತಿ ಹಾಜರಿದ್ದರು.