Home News ಹಾಲು ಉತ್ಪಾಧಕರ ಸಹಕಾರ ಸಂಘದ ಅಧ್ಯಕ್ಷರುಗಳ ಅಧ್ಯಯನ ಪ್ರವಾಸಕ್ಕೆ ಚಾಲನೆ

ಹಾಲು ಉತ್ಪಾಧಕರ ಸಹಕಾರ ಸಂಘದ ಅಧ್ಯಕ್ಷರುಗಳ ಅಧ್ಯಯನ ಪ್ರವಾಸಕ್ಕೆ ಚಾಲನೆ

0

ಗುಣಮಟ್ಟದ ಹಾಲು ಉತ್ಪಾದನೆ ಮಾಡದಿದ್ದಲ್ಲಿ ಹಾಲು ಉತ್ಪಾದಕರು, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೂ ಭವಿಷ್ಯದಲ್ಲಿ ಸಂಕಷ್ಟದ ದಿನಗಳು ಎದುರಾಗಲಿವೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೆಶಕ ಬಂಕ್‌ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಅಧ್ಯಯನ ಪ್ರವಾಸಕ್ಕೆ ನಗರದ ಬಸವೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ರಾತ್ರಿ ಚಾಲನೆ ನೀಡಿ ಮಾತನಾಡಿ, ಹಾಲು ಮತ್ತು ಹಾಲು ಉತ್ಪನ್ನಗಳನ್ನು ಆಹಾರ ಕಲಬೆರೆಕೆ ನಿಯಂತ್ರಣ ಕಾಯಿದೆಯಡಿ ತರಲಾಗಿದೆ. ಆದ್ದರಿಂದ ಕಳಪೆ ಹಾಲು ಉತ್ಪನ್ನಗಳನ್ನು ತಯಾರಿಸುವುದು, ಸಂಗ್ರಹಿಸುವುದು ಹಾಗೂ ದಾಸ್ತಾನು ಮಾಡುವುದು, ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಆದ್ದರಿಂದ ಗುಣಮಟ್ಟದ ಹಾಲು ಉತ್ಪಾದನೆ ಮಾಡದೆ ವಿಧಿಯಿಲ್ಲ ಎಂದರು.
ಇದಕ್ಕೂ ಮಿಗಿಲಾಗಿ ಗುಣಮಟ್ಟದ ಹಾಲಿಗೆ ಮಾತ್ರವೇ ಸರ್ಕಾರವು ಪ್ರೋತ್ಸಾಹ ಧನವನ್ನು ವಿತರಿಸಲಿದ್ದು ಕಳಪೆ ಗುಣಮಟ್ಟದ ಹಾಲಿಗೆ ಸಿಗುವುದಿಲ್ಲ. ಆದ್ದರಿಂದ ಎಲ್ಲ ಹೈನುಗಾರರು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಆಧ್ಯತೆ ನೀಡಬೇಕಿದೆ ಎಂದು ತಿಳಿಸಿದರು.
ಹಾಗಾಗಿಯೆ ಕಾಲ ಕಾಲಕ್ಕೆ ಹೈನುಗಾರರನ್ನು ಬೇರೆ ಬೇರೆ ರಾಜ್ಯದ ಹಾಗೂ ನಮ್ಮದೇ ರಾಜ್ಯದ ಇತರೆ ಅಭಿವೃದ್ದಿ ಶೀಲ ಡೇರಿಗಳಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುವುದು. ಅಲ್ಲಿ ಅಧ್ಯಯನ ನಡೆಸಿ ಅಲ್ಲಿನ ಒಳ್ಳೆಯ ಅಂಶಗಳನ್ನು ಇಲ್ಲಿ ಅನುಷ್ಟಾನಗೊಳಿಸಿಕೊಳ್ಳಬೇಕು. ಆದ್ದರಿಂದ ಎಲ್ಲ ರೈತರು ಪ್ರವಾಸ ಕಾಲದಲ್ಲಿ ಎಲ್ಲವನ್ನು ತಿಳಿದುಕೊಂಡು ಬರಬೇಕೆಂದು ಮನವಿ ಮಾಡಿದರು.
ಕೋಚಿಮುಲ್‌ನ ಶಿಡ್ಲಘಟ್ಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಹನುಮಂತರಾವ್ ಮಾತನಾಡಿ, ೫೦ ಮಂದಿ ಹೈನುಗಾರರನ್ನು ೮ ದಿನಗಳ ಕಾಲ ಮಹಾರಾಷ್ಟ್ರದ ಕೊಲ್ಲಾಪುರದ ಗೋಕುಲ್ ಡೇರಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ ಎಂದು ವಿವರಿಸಿದರು.
ಅಲ್ಲಿ ಹೈನುಗಾರಿಕೆಯನ್ನು ಯಾವ ರೀತಿ ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಹೇಗೆ ಮಾಡಬೇಕು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಸುವ ಹೈನುಗಾರಿಕೆ ಮಾಡುವುದು ಹೇಗೆಂಬುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿಕೊಡಲಾಗುವುದು. ನಿಮ್ಮ ಜತೆ ನಮ್ಮ ಇಲಾಖೆಯ ಅಧಿಕಾರಿಗಳು ಆಗಮಿಸಲಿದ್ದು ಅವರೊಂದಿಗೆ ಅಲ್ಲಿನ ಡೇರಿಯ ಅಧಿಕಾರಿ, ಸಿಬ್ಬಂದಿಯೂ ನಿಮಗೆ ಅಗತ್ಯ ಮಾಹಿತಿ ಮಾರ್ಗದರ್ಶನ ನೀಡಲಿದ್ದಾರೆ. ಎಲ್ಲರೂ ಅಣ್ಣ ತಮ್ಮಂದಿರಂತೆ ಒಂದಾಗಿ ಅಧ್ಯಯನ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬನ್ನಿ, ಪ್ರವಾಸ ಕಾಲದಲ್ಲಿ ನಮ್ಮ ಸಂಸ್ಥೆಯಿಂದಲೆ ಉಟ, ವಸತಿ ಇನ್ನಿತರೆ ಎಲ್ಲ ಅನುಕೂಲಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕೋಚಿಮುಲ್‌ನ ಸ್ಥಳೀಯ ಶಿಬಿರ ಕಚೇರಿಯ ಮೇಲ್ವಿಚಾರಕರಾದ ಮುನೇಗೌಡ, ಕುಮ್ಮಣ್ಣ, ಶ್ರೀನಿವಾಸ್, ಮಂಜುನಾಥ್, ಹಾಲು ಉತ್ಪಾಧಕರ ಸಹಕಾರ ಸಂಘಗಳ ನೌಕರರ ಕಾರ್ಯದರ್ಶಿ ಬೋದಗೂರು ಚಂದ್ರೇಗೌಡ ಮತ್ತಿತರರು ಹಾಜರಿದ್ದರು.