ತಾಲ್ಲೂಕಿನ ಗೊಲ್ಲಹಳ್ಳಿಯ ಹೊರವಲಯದಲ್ಲಿ ಹುಚ್ಚು ಸೋರೆ ಕಂಡು ಬಂದಿದೆ. ಸಾಮಾನ್ಯವಾಗಿ ಹುಚ್ಚು ಸೋರೆ ಗಿಡವನ್ನು ಕಂಡರೆ ಕುರಿ ಮೇಕೆ ಮೇಯಿಸುವವರು ಬುಡ ಸಮೇತ ಕಿತ್ತು ಬಿಸಾಡುತ್ತಾರೆ. ಅಪರೂಪಕ್ಕೆಂಬಂತೆ ಎಲ್ಲರ ಕಣ್ತಪ್ಪಿ ಸಾಕಷ್ಟು ಹುಚ್ಚು ಸೋರೆಕಾಯಿಗಳು ಬಿಟ್ಟಿದ್ದು, ಕೆಲವು ಅಲ್ಲೇ ಒಣಗಿ ಬಿದ್ದು ಕೊಳೆತಿವೆ.
ಹುಚ್ಚು ಸೋರೆಕಾಯಿಯಲ್ಲಿ ಶೇ.45 ರಷ್ಟು ವಿಷವಿರುತ್ತದೆ. ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಕಂಡು ಬರುವ ಇವು ಕ್ಯೂಬಾದ ಕಾಫಿ ತೋಟಗಳಲ್ಲಿ ಕಳೆಗಿಡಗಳಾಗಿ ಬೆಳೆಯುತ್ತವೆ. ಹೆಚ್ಚು ವಿಷವಿರುವುದರಿಂದ ಕುರಿ ಮತ್ತು ಮೇಕೆಗಳು ತಿಂದರೆ ಸಾಯುತ್ತವೆಂದು ಕುರಿ ಮೇಕೆ ಮೇಯಿಸುವವರು ಅವುಗಳನ್ನು ಹುಚ್ಚು ಸೋರೆ ಬಳಿ ಸುಳಿಯದಂತೆ ಎಚ್ಚರಿಕೆ ವಹಿಸುತ್ತಾರೆ.
ಇದರ ಕಾಯಿ ಮತ್ತು ಎಲೆ ಎರಡೂ ವಿಷಕಾರಿ. ಆದರೆ ಬೀಜದಲ್ಲಿ ವಿಷ ಕಡಿಮೆ. ಹಾಗಾಗಿ ಚರ್ಮರೋಗಗಳಿಗೆ ಬೇರೆ ಬೇರೆ ವಸ್ತುಗಳೊಂದಿಗೆ ಇದರ ಬೀಜವನ್ನೂ ಅಲ್ಪ ಪ್ರಮಾಣದಲ್ಲಿ ಬಳಸುತ್ತಾರೆ. ಆದರೆ ಅನುಭವಿಗಳಿಗೆ ಮಾತ್ರ ಈ ಪ್ರಮಾಣದ ವಿಷಯ ತಿಳಿದಿರುತ್ತದೆ. ಹಿಂದೆ ಹುಚ್ಚು ಸೋರೆಕಾಯಿಯನ್ನು ಕುದುರೆಗಳಿಗೆ ವಿರೇಚನ(ಬೇಧಿ) ಮಾಡಿಸಲು ಬಳಸುತ್ತಿದ್ದರಂತೆ.
ಹುಚ್ಚು ಸೋರೆಕಾಯಿಯನ್ನೇ ಹೋಲುವ ಕಹಿತೊಂಡೆ(ಕಾಡುತೊಂಡೆ), ಕಹಿಹೀರೆ(ಕಾಡು ಹೀರೆ), ಕಹಿ ಸೌತೆ(ಕಾಡು ಸೌತೆ) ಪ್ರಕೃತಿಯಲ್ಲಿ ಕಾಣಬಹುದು, ಕಹಿ ಎಂಬ ಪದಕ್ಕೆ ಪರ್ಯಾಯವಾಗಿ ಕಾಡು ಎಂಬ ಪದವನ್ನೂ ಬಳಸುವುದು ವಾಡಿಕೆಯಲ್ಲಿದೆ. ಆದರೆ ಇವುಗಳ ವಿಷ ಪ್ರಮಾಣ ಬಲು ಕಡಿಮೆ. ಕಾಡು ತೊಂಡೆ ಹಣ್ಣಾದಾಗ ಮಾಮೂಲಿ ಸಿಹಿ ತೊಂಡೆಯಂತೆಯೇ ರುಚಿ ಮತ್ತು ಬಣ್ಣವನ್ನು ಪಡೆಯುತ್ತದೆ. ಆಗ ಹಕ್ಕಿಗಳು ಅವನ್ನು ತಿನ್ನುತ್ತವೆ.
‘ಪ್ರಕೃತಿಯಲ್ಲಿನ ಹಲವಾರು ವಿಷಯುಕ್ತ ಗಿಡಗಳಲ್ಲಿ ಹುಚ್ಚು ಸೋರೆಯೂ ಒಂದು. ಗ್ರಾಮೀಣ ಭಾಗದ ಅನುಭವಿಗಳಿಗೆ ಈ ವ್ಯತ್ಯಾಸ ತಿಳಿದಿರುತ್ತದೆ. ಆದರೆ ಆಧುನಿಕರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ನಮ್ಮ ಸುತ್ತಲಿನಲ್ಲಿಯೇ ಒಳಿತು ಕೆಡುಕು, ಒಳ್ಳೆಯದು ಕೆಟ್ಟದ್ದು ಇರುವಂತೆ, ತಿನ್ನುವಂತದ್ದು, ತಿನ್ನಬಾರದ್ದು, ದೇಹಕ್ಕೆ ಸಹಕಾರಿಯಾದದ್ದು, ವಿಷಕಾರಿಯಾದ್ದು ಕೂಡ ಇರುತ್ತದೆ. ಇವುಗಳ ಜ್ಞಾನ ಬದುಕಿಗೆ ಸಗತ್ಯ’ ಎನ್ನುತ್ತಾರೆ ಸಾವಯವ ಕೃಷಿಕ ಪರಿವಾರದ ಸಂಚಾಲಕ ಬೂದಾಳ ರಾಮಾಂಜಿನಪ್ಪ.