‘ಹೊಗೆರಹಿತ ಗ್ರಾಮ, ನಗರ’ದ ಕನಸಿನೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯಡಿ ತಾಲ್ಲೂಕಿನಲ್ಲಿ 90 ಅನಿಲ ಸಂಪರ್ಕಗಳಿಗೆ ಅರ್ಜಿ ಬಂದಿದ್ದು ಹಂತಹಂತವಾಗಿ ವಿತರಿಸಲಾಗುತ್ತದೆ ಎಂದು ವೆಂಕಟೇಶ್ವರ ಇಂಡೇನ್ ಗ್ಯಾಸ್ ವ್ಯವಸ್ಥಾಪಕ ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿ ಆವರಣದಲ್ಲಿ ಅನಿಲ ಸಂಪರ್ಕಗಳಿಗೆ ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು.
ಪರಿಸರ ಉಳಿಸುವುದಲ್ಲದೆ ಆರೋಗ್ಯದ ಸುರಕ್ಷತೆಗೂ ಬಹು ಅನುಕೂಲಕರವಾದ ಉಜ್ವಲ ಯೋಜನೆಯ ಸದುಪಯೋಗವನ್ನು ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಕುಟುಂಬದವರು ಪಡೆಯಬೇಕೆಂದು ಹೇಳಿದರು.
‘ಉಜ್ವಲ’ ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರದೆ ಇರುವ ಬಿ.ಪಿ.ಎಲ್. ಕಾರ್ಡ್ನಲ್ಲಿ ವಿಶೇಷವಾಗಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಪಡೆಯಲು 2 ಪಾಸ್ಪೋರ್ಟ್ ಭಾವಚಿತ್ರ, ಆಧಾರ್ ನಕಲು, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ಬುಕ್, ಬಿ.ಪಿ.ಎಲ್ ಕಾರ್ಡ್ಗಳ ನಕಲುಗಳನ್ನು ಸ್ಥಳೀಯ ಗ್ಯಾಸ್ ಏಜೆನ್ಸಿಗಳಲ್ಲಿ ನೀಡಿ, ಪರಿಶೀಲನೆ ನಂತರ ಸಂಪರ್ಕ ಪಡೆಯ ಬೇಕು ಎಂದು ನುಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಕಲ್ಪನಾ, ಕಾರ್ಯದರ್ಶಿ ವಿ.ಶ್ರೀನಿವಾಸ್, ರಾಜಣ್ಣ, ಸಂತೋಷ್, ನಾರಾಯಣಸ್ವಾಮಿ, ವೆಂಕಟೇಶ್ವರ ಇಂಡೇನ್ ಗ್ಯಾಸ್ನ ಭರತ್, ನಾಗೇಶ್ ಮತ್ತಿತರರು ಹಾಜರಿದ್ದರು.