ತಾಲ್ಲೂಕು ಹಾಗೂ ಜಿಲ್ಲೆಯ ರೈತರ ಉಪಬೆಳೆಯಾದ, ಆರ್ಥಿಕ ಬೆಳೆಗಳಲ್ಲಿ ಒಂದಾದ ಕೊತ್ತಂಬರಿ ಸೊಪ್ಪನ್ನು ನಂಬಿದ್ದ ರೈತರು ಈ ಬಾರಿ ಸಾಕಷ್ಟು ನಷ್ಟವನ್ನು ಅನುಭವಿಸುವಂತಾಗಿದೆ.
ಕಳೆದೆರಡು ತಿಂಗಳ ಹಿಂದೆ ಬಿದ್ದ ಮಳೆಯಿಂದಾಗಿ ಎಲ್ಲೆಡೆ ಕೊತ್ತಂಬರಿ ಸೊಪ್ಪಿನ ಫಸಲು ಚೆನ್ನಾಗಿ ಬಂದಿದ್ದು, ಬೆಲೆಯು ನೆಲಕಚ್ಚಿರುವ ಹಿನ್ನೆಲೆಯಲ್ಲಿ ರೈತರು ಟಿಲ್ಲರ್ ಹಾಗೂ ಆಟೋಗಳಲ್ಲಿ ಕೊತ್ತಂಬರಿ ಸೊಪ್ಪನ್ನು ತಂದು ಒಂದು ದೊಡ್ಡ ಕಟ್ಟಿಗೆ 10 ರೂಗಳಂತೆ ಮಾರಾಟ ಮಾಡುತ್ತಿದ್ದಾರೆ.
‘ಅರ್ಧ ಎಕರೆಯಲ್ಲಿ ಸುಮಾರು ಎರಡು ಟನ್ ಕೊತ್ತಂಬರಿ ಸೊಪ್ಪನ್ನು ಬೆಳೆದಿದ್ದೇನೆ. ಬೆಲೆ ಹೆಚ್ಚಿದ್ದಾಗ ತೋಟಕ್ಕೇ ಬಂದು ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದವರು ಈಗ ಹತ್ತಿರ ಕೂಡ ಸುಳಿಯುತ್ತಿಲ್ಲ. ಬೆಳೆಯನ್ನು ತೋಟದಲ್ಲಿ ಬಿಡಲಾಗದೇ, ಆಟೋ ಮಾಡಿಕೊಂಡು ತಂದು ಕನಿಷ್ಠ ಕೂಲಿಯಾದರೂ ಗಿಟ್ಟಲಿ ಎಂದು ಮಾರಾಟ ಮಾಡುತ್ತಿದ್ದೇನೆ. ಆಟೋ ಖರ್ಚು, ಪೆಟ್ರೋಲು, ನಮ್ಮ ಕೂಲಿ, ಶ್ರಮ, ಬೆಳೆ ಬೆಳೆಯಲು ಮಾಡಿದ ಖರ್ಚು ಲೆಕ್ಕ ಹಾಕಿದರೆ ನಮ್ಮ ಪಾಡು ಯಾರಿಗೂ ಬೇಡವೆನಿಸುತ್ತದೆ’ ಎನ್ನುತ್ತಾನೆ ರೈತ ಮುನಿರಾಜು.
ಕೊತ್ತಂಬರಿ ಸೊಪ್ಪನ್ನು ಅದೃಷ್ಟದ ಬೆಳೆ ಎಂದು ತಿಳಿದಿರುವ ರೈತರು ಇತರ ತರಕಾರಿ ಬೆಳೆ ಜೊತೆಗೆ ಒಂದಷ್ಟು ಜಮೀನನ್ನು ಕೊತ್ತಂಬರಿ ಸೊಪ್ಪು ಬೆಳೆಯಲು ಮೀಸಲಿಡುವುದು ಸಾಮಾನ್ಯ. ಕೆಲವು ಸಲ ಕೊತ್ತಂಬರಿ ಬೆಲೆ ದುಬಾರಿಯಾಗುವುದುಂಟು. ನಾಲ್ಕು ಬೆರಳು ಗಾತ್ರದ ಕಟ್ಟು 100 ರೂಗಳ ಗಡಿ ದಾಟಿದ್ದ ಉದಾಹರಣೆಯೂ ಇದೆ. ಬೆಲೆ ಎಷ್ಟಾದರೂ ಖರೀದಿಸಲೇಬೇಕಾದ ಅನಿವಾರ್ಯತೆ ಗ್ರಾಹಕರದ್ದು. ತಾಲ್ಲೂಕಿನಲ್ಲಿ ಬೆಳೆಯುವ ಕೊತ್ತಂಬರಿ ಸೊಪ್ಪು, ಆಂಧ್ರಪ್ರದೇಶದ ಮದನಪಲ್ಲಿ, ಕದಿರಿ, ಕಡಪ, ಹೈದರಾಬಾದ್, ತಮಿಳುನಾಡಿನ ಚೆನ್ನೈ, ರಾಜ್ಯದ ಬೆಂಗಳೂರು ಮಾರುಕಟ್ಟೆಗೆ ರವಾನೆಯಾಗುತ್ತದೆ. ಬೇಡಿಕೆ ಇದ್ದಾಗ ಆಂಧ್ರಪ್ರದೇಶ ಹಾಗೂ ತಮಿಳು ನಾಡಿನ ವ್ಯಾಪಾರಿಗಳು ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿ, ತೋಟಗಳನ್ನು ಗುತ್ತಿಗೆ ಪಡುತ್ತಾರೆ. ಬೆಲೆ ಕುಸಿದ ಸಂದರ್ಭದಲ್ಲಿ ಕೃಷಿಕರೇ ಕಿತ್ತು ಕಟ್ಟು ಕಟ್ಟಿ ಸಾಗಿಸಬೇಕಾಗುತ್ತದೆ.
ಒಂದೆಡೆ ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿತದಿಂದಾಗಿ ರೈತರು ಬೇಸರಗೊಂಡಿದ್ದರೆ, ಮತ್ತೊಂದೆಡೆ ಗ್ರಾಹಕರು ಮತ್ತು ಗೃಹಿಣಿಯರು ಸಂತಸದಿಂದಿದ್ದಾರೆ. ಕೊತ್ತಂಬರಿ ಸೊಪ್ಪಿನ ಗೊಜ್ಜು, ಚಟ್ನಿ, ತಂಬುಳಿ, ಕಡುಬು ಮುಂತಾದ ಖಾದ್ಯಗಳ ತಯಾರಿಯೂ ನಡೆದಿದೆ.
‘ಕೊತ್ತಂಬರಿ ಸೊಪ್ಪು ನಮ್ಮ ಆಹಾರದ ಅವಿಭಾಜ್ಯ ಅಂಗ. ಆರೋಗ್ಯಕ್ಕೂ ಸಾಕಷ್ಟು ಒಳ್ಳೆಯದು. ಕೊತ್ತಂಬರಿ ಸೊಪ್ಪಿನ ಜ್ಯೂಸ್ ಮಾಡಿ ಕುಡಿಯಬಹುದು. ಅಥವಾ, ಆಹಾರದಲ್ಲಿ ಕೊತ್ತಂಬರಿಯನ್ನ ಹೆಚ್ಚು ಬಳಕೆ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲನ್ನ ಕರಗಿಸಲು ಸಹಾಯವಾಗುತ್ತದೆ. ಕೊಲೆಸ್ಟ್ರಾಲ್ ತಗ್ಗಿಸುತ್ತದೆ. ಬಿಪಿ, ಶುಗರನ್ನು ನಿಯಂತ್ರಣದಲ್ಲಿಡುತ್ತದೆ. ನರಗಳನ್ನು ಶಾಂತಗೊಳಿಸಿ, ಒತ್ತಡವನ್ನು ತಗ್ಗಿಸುತ್ತದೆ. ಮಾನಸಿಕ ಸ್ವಾಸ್ಥ್ಯವನ್ನ ಕಾಪಾಡುತ್ತದೆ. ಮೂಳೆಗಳ ಆರೋಗ್ಯಯುತ ಬೆಳವಣಿಗೆಗೆ ಸಹಕರಿಸುವುದಲ್ಲದೆ, ಗಾಯವಾದಾಗ ಬೇಗ ರಕ್ತ ಹೆಪ್ಪುಗಟ್ಟಲು ಸಹಕರಿಸುತ್ತದೆ. ಅನೀಮಿಯಾ ತಡೆಗಟ್ಟಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಕೊತ್ತಂಬರಿ ಗೊಜ್ಜು ಮತ್ತು ಚಟ್ನಿ ಎಲ್ಲರಿಗೂ ಅಚ್ಚುಮೆಚ್ಚು’ ಎಂದು ಗೃಹಿಣಿ ಲಕ್ಷ್ಮಿ ತಿಳಿಸಿದರು.
- Advertisement -
- Advertisement -
- Advertisement -







