Home Articles ಬರಗಾಲವ ಎದು/(ಹೆದ)ರಿಸಲು ಸಿದ್ಧವಾಗಲಿ ಶಿಡ್ಲಘಟ್ಟ

ಬರಗಾಲವ ಎದು/(ಹೆದ)ರಿಸಲು ಸಿದ್ಧವಾಗಲಿ ಶಿಡ್ಲಘಟ್ಟ

0

ಶಿಡ್ಲಘಟ್ಟ – ನಮ್ಮೆಲ್ಲರಿಗೂ ತಿಳಿದಂತೆ ಪ್ರಪಂಚದಲ್ಲಿ ರೇಷ್ಮೆ ಕೃಷಿಗೆ ಹೆಸರುವಾಸಿ, ಇಲ್ಲಿನ ರೇಷ್ಮೆ ಅಕ್ಕ ಪಕ್ಕದ ರಾಜ್ಯಗಳಲ್ಲದೆ ಹೊರ ದೇಶಗಳಿಗೂ ರಫ್ತು ಮಾಡಲಾಗುತ್ತದೆ. ಇಲ್ಲಿನ ರೇಷ್ಮೆ ಮಾರುಕಟ್ಟೆ ಭಾರತದಲ್ಲಿಯೇ ದೊಡ್ಡದಾದರೆ, ಇಲ್ಲಿನ ರೇಷ್ಮೆಯ ಹೊಳಪು, ವಿನ್ಯಾಸ ಹಾಗೂ ಕರ್ಷಕ ಬಲದ ಕಾರಣ ಅದು ಬೇರೆ ಯಾವುದೇ ಪ್ರಾಂತ್ಯದ ಬೆಳೆಗಿನ್ನೂ ಉತ್ತಮವಾದುದೆಂದು ಪ್ರಚಲಿತವಾಗಿದೆ. ಇದರ ಜೊತೆ ಜೊತೆಗೇ ಶಿಡ್ಲಘಟ್ಟ ಪ್ರಖ್ಯಾತವಾಗಿರುವುದು ಹಾಲು ಮತ್ತು ತರಕಾರಿಗಳ ಬೆಳೆಗಾಗಿ. ಪ್ರತಿದಿನ 100000 ಲೀ ಹಾಲು ಇಲ್ಲಿ ಸಂಗ್ರಹವಾದರೆ, ಇಲ್ಲಿ ಕಾಲಕ್ಕೆ ತಕ್ಕಂತೆ ರೈತರಿಂದ ಬೆಳೆಯಲ್ಪಡುವ ತರಕಾರಿಗಳು ಹೊರ ರಾಜ್ಯ ಹಾಗೂ ದೇಶಗಳಿಗೆ ರಫ್ತು ಮಾಡಲ್ಪಡುತ್ತವೆ.
13feb3ಇಷ್ಟೆಲ್ಲಾ ಪ್ರಖ್ಯಾತಿಯನ್ನು ಪಡೆದಿರುವ ನಮ್ಮ ಊರು ಇತ್ತೀಚಿನ ದಿನಗಳಲ್ಲಿ ಪ್ರಖ್ಯಾತಿ ಪಡೆಯುತ್ತಿರುವುದು ಬೇರೆಯದೇ ಮತ್ತೊಂದು ಕಾರಣಕ್ಕಾಗಿ – ಅದೇ ಇಲ್ಲಿನ ‘ಬರಗಾಲ’ಕ್ಕಾಗಿ. ಕಾಲ ಕಾಲಕ್ಕೆ ಮಳೆಯಾಗದೆ ಕಂಗೆಟ್ಟಿರುವ ರೈತರೊಂದು ಕಡೆಯಾದರೆ, ಕುಡಿಯುವ ನೀರಿಗೆ ಪರದಾಡುತ್ತಿರುವ ಸಾಮಾನ್ಯ ಜನರೊಂದು ಕಡೆ. ಮೇವಿನ ಕೊರತೆಯಿಂದಾಗಿ ರಾಸುಗಳನ್ನು ಮಾರಿಕೊಳ್ಳುತ್ತಿರುವವರೊಂದು ಕಡೆಯಾದರೆ, ಕಲುಷಿತ / ರಾಸಾಯನಿಕಗಳ ಹೆಚ್ಚಿನ ಪ್ರಮಾಣದಿಂದ ಅನಾರೊಗ್ಯಕ್ಕೀಡಾಗುತ್ತಿರುವ ಜನರೊಂದು ಕಡೆ. ಇದಕ್ಕೆಲ್ಲಾ ಮೂಲವನ್ನು ಹುಡುಕುತ್ತಾ ಹೋದಲ್ಲಿ ಸಿಗುವುದೊಂದೇ ಪ್ರಶ್ನೆ ಹಾಗು ಒಂದೇ ಉತ್ತರ – ನೀರು? ಹೌದು… ನೀರು.
ಶಿಡ್ಲಘಟ್ಟ ತನ್ನೆಲ್ಲಾ ಚಟುವಟಿಕೆಗಳಿಗೆ ಅವಲಂಭಿತವಾಗಿರುವುದು ನೀರಿನ ಮೇಲೆಯೇ. ಜನರಿಗೆ ಕುಡಿಯುವ ನೀರು ಎಷ್ಟು ಪ್ರಾಮುಖ್ಯವೋ ಹಾಗೆಯೇ ಇಲ್ಲಿನ ಎಲ್ಲಾ ವ್ಯವಹಾರಿಕ ಜೀವನಕ್ಕೂ ನೀರೇ ಪ್ರಮುಖ ಆಧಾರ. ರಾಸುಗಳ ಮೇವಿಗೆ ನೀರಿನ ಪ್ರಾಮುಖ್ಯತೆ ಎಷ್ಟು ಇದೆಯೋ ಅಷ್ಟೇ ಇಲ್ಲಿನ ಕೃಷಿ ಚಟುವಟಿಕೆಗಳಿಗಿದೆ. ಇನ್ನು ಊರಿನ ಜೀವವೆಂದೇ ತಿಳಿದಿರುವ ರೇಷ್ಮೆ ಅವಲಂಭಿತವಾಗಿರುವುದೇ ಇಲ್ಲಿನ ನೀರಿನ ಮೇಲೆ. ಇಷ್ಟೆಲ್ಲಾ ಪ್ರಾಮುಖ್ಯತೆ ಹೊಂದಿರುವ ನೀರು ನಮ್ಮಲ್ಲಿ ದಿನದಿನಕ್ಕೆ ಕಡಿಮೆಯಾಗುತ್ತಿರುವುದು ಆತಂಕದ ಹಾಗೂ ಮುಂಬರುವ ದೊಡ್ಡ ಅನಾಹುತದ ಪ್ರಾರಂಭವೇ ಸರಿ.

ನಮ್ಮ ಶಿಡ್ಲಘಟ್ಟ ಹಿಂದಿನಿಂದಲೂ ಹೀಗೆ ನೀರಿನ ಅಭಾವದಿಂದ ಕೂಡಿತ್ತೆ ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ಸಿಗುವ ಸ್ಪಷ್ಟ ಉತ್ತರ – ‘ಇಲ್ಲ’.

ನಮ್ಮ ಹಿರಿಯರು ಹೇಳುವ ಪ್ರಕಾರ ಶಿಡ್ಲಘಟ್ಟ ಹಿಂದೆ ಕಾಲ ಕಾಲಕ್ಕೆ ಮಳೆ, ಸಮ್ರುದ್ಧವಾದ ಬೆಳೆಯಿಂದ ಕೂಡಿದ್ದ ಪ್ರದೇಶ. ಹಿಂದೆ ಮಳೆಗಾಲದಲ್ಲಿ ಊರಿನ ಎರಡು ಕೆರೆಗಳು ತುಂಬಿ ಮರಿವೆ ಹೋದ ನಿದರ್ಶನಗಳನ್ನು ನಮ್ಮ ಹಿರಿಯರಿಂದ ಕೇಳಿ ತಿಳಿಯಬಹುದು, ಹಾಗೆಯೇ ಹಿಂದೆ ಬಾವಿಗಳಲ್ಲಿ ಕೈಗೆ ಎಟುಕುವಂತೆ ನೀರು ಸಿಗುತ್ತಿದ್ದುದೂ ಅವರು ನೆನೆಯುವುದುಂಟು.
ಹಾಗಿದ್ದರೆ, ಈಚಿನ ವರ್ಷಗಳಲ್ಲಿ ಆದ ಬದವಲಾವಣೆಗಳೇನು? ಹಿಂದೆ ಏತಗಳಲ್ಲಿ ಹೊಲಗಳಿಗೆ ಹರಿಸಲು ಸಿಗುತ್ತಿದ್ದ ನೀರು ಇಂದು ಆಳದ ಬೋರ್ವೆಲ್ಗಳಿಗೂ ಸಿಗದೇ ಇರಲು ಕಾರಣಗಳೇನು?
ಕಾರಣಗಳನ್ನು ಹುಡುಕಿದರೆ ಸಿಗುವುದು ಎರಡು ಪ್ರಮುಖ ಅಂಶಗಳು, ಭೂಮಿಯ ಮೇಲ್ಮೈ ನೀರು ಹಾಗೂ ಅಂತರ್ಜಲ ಎರಡೂ ದಿನದಿನಕ್ಕೆ ನಾಶ ಹೊಂದುತ್ತಿರುವುದು.

ಹಾಗಿದ್ದರೆ ಇದರ ಮೂಲ?

ನಮಗೆ ಸಿಗುವ ಮಾಹಿತಿಗಳ ಪ್ರಕಾರ ಹಿಂದೆ ಈ ಪ್ರದೇಶದಲ್ಲಿ ಅರಣ್ಯ ಪ್ರದೇಶ ಸಾಕಷ್ಟಿಲ್ಲದಿದ್ದರೂ ಜನ ಸಂಖ್ಯೆಗನುಗುಣವಾಗಿ ಸಮತೋಲನ ಕಾಯ್ದುಕೊಂಡಿತ್ತು, ಅಂತರ್ಜಲ ಎತೇಚ್ಚವಾಗಿದ್ದುದದರ ಜೊತೆಗೆ ಕಾಲಕ್ಕನುಗುಣವಾಗಿ ಮಳೆಯಾಗುತ್ತಿತ್ತು. ಹಾಗೆ ಕಾಲ ಕಳೆದಂತೆ ಜನರ ಸಂಖ್ಯೆ ಹೆಚ್ಚಾಗಿ ಮರಗಿಡಗಳ ಸಂಖ್ಯೆ ಕಡಿಮೆಯಾಗತೊಡಗಿತು ಮಳೆಯ ಪ್ರಮಾಣ ಕಡಿಮೆಯಾಗಿ ಬರಗಾಲ ಎದುರಾಗುತ್ತಿದೆಯಲ್ಲದೆ, ಎಗ್ಗಿಲ್ಲದ ಕೊಳವೆ ಬಾವಿಗಳ ಕೊರೆತದಿಂದ ಅಂತರ್ಜಲ ಸಂಪೂರ್ಣ ಬತ್ತಿ, ಕೃಷಿ ಚಟುವಟಿಕೆಗಳಷ್ಟೇ ಅಲ್ಲದೆ ಕುಡಿಯುವ ನೀರಿಗೂ ಸಂಚಕಾರ ಬರತೊಡಗಿತು. ಸರ್ಕಾರದ ಮಾಹಿತಿಯ ಪ್ರಕಾರ ಪ್ರತಿ ವರ್ಷ ಶಿಡ್ಲಘಟ್ಟದಲ್ಲಿ ಅಂದಾಜಿಗಿಂತಲೂ ಸರಾಸರಿ ೪೦% ಕಡಿಮೆ ಮಳೆಯಾಗುತ್ತಿದೆ. ಹಾಗೆಯೇ ಇನ್ನು ಅಂತರ್ಜಾಲದ ಬಗ್ಗೆ ಹೇಳುವುದಾದರೆ ಇಂದು 1000 ಅಡಿಗಳನ್ನು ಮೀರುತ್ತಿದೆ. ಈ ಆಳದಲ್ಲಿ ಫ್ಲೂರೈಡ್ನಂತಹ ಅಪಾಯಕಾರಿ ರಾಸಾಯನಿಕಗಳು ಹೆಚ್ಚಿನ ಮಾತ್ರದಲ್ಲಿರುತ್ತಲ್ಲದೆ, ಆರ್ಸನಿಕ್ ನಂತಹ ವಿಷಕಾರಿ ಅಂಶಗಳು ನೀರಿಗೆ ಬೆರೆಯುವ ಸಾಧ್ಯತೆ ಅಧಿಕವಾಗಿರುತ್ತದೆ. ಇನ್ನು ನಮ್ಮ ನಗರಸಭೆಯ ಮಾಹಿತ್ಯ ಪ್ರಕಾರ ಈಗಾಗಲೇ 51 ಬೋರ್ವೆಲ್ಗಳಿದ್ದು ಅದರಲ್ಲಿ 23ಕ್ಕೆ ಮಾತ್ರ ಪಂಪ್ಸೆಟ್ ಅಳವಡಿಸಲಾಗಿದೆ. ಹಾಗಿದ್ದಲ್ಲಿ 50% ಗೂ ಅಧಿಯ ಬೋರ್ವೆಲ್ಗಳು ಕಾರ್ಯ ನಿರ್ವಹಿಸದೆ ಹಾಗೆಯೇ ಇವೆ. ಇದು ಕೇವಲ ಸರ್ಕಾರದ ಅಂಕಿಗಳು. ಇನ್ನು ಸಾರ್ವಜನಿಕರು ಖಾಸಗಿಯಾಗಿ ಅಳವಡಿಸಿಕೊಂಡಿರುವ ಕೊಳವೆಬಾವಿಗಳನ್ನು ಗಣನೆಗೆ ತೆಗೆದುಕೊಂಡರೆ ಸಮೀಕ್ಷೆಯ ಪ್ರಕಾರ ಶಿಡ್ಲಘಟ್ಟ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕೊಳವೆ ಬಾವಿಗಲಿರುವ ಪ್ರದೇಶಗಳಲ್ಲೊಂದು. ಇನ್ನು ಬರದ ತೀವ್ರತೆ ನಿಮ್ಮ ಊಹೆಗೆ ಬಿಟ್ಟಿದ್ದು…
ಇಷ್ಟೇ ಅಲ್ಲದೆ ಇದರ ತೀವ್ರತೆ ಕೃಷಿ, ಜೀವ ಜಂತುಗಳಲ್ಲದೆ, ನಗರದ ಪ್ರಮುಖ ಬೆಳೆ, ಪ್ರಪಂಚದಲ್ಲಿ ಪ್ರಸಿದ್ಧವಾಗಿರುವ ಹಾಗೂ ಶಿಡ್ಲಘಟ್ಟದ 70% ಜನರಿಗೆ ವೃತ್ತಿಯನ್ನು ಕಲ್ಪಿಸುತ್ತಿರುವ ರೇಷ್ಮೆಯ ಮೇಲೂ ಉಂಟಾಗಲಿದೆ. ನೀರಿನ ಅಭಾವ ಹಾಗೂ ರಾಸಾಯನಿಕ ಮಿಶ್ರಿತ ನೀರು ರೇಷ್ಮೆಯು ತನ್ನ ವಿನ್ಯಾಸ ಹಾಗೂ ಹೊಳಪನ್ನು ಕಳೆದುಕೊಳ್ಳುತ್ತದೆ.
ಈಗಲೇ ಹೀಗಿದ್ದರೆ ಇನ್ನು ಮುಂದಿನ ಪೀಳಿಗೆಗೆ?…

ಹಾಗಿದ್ದರೆ ಇದಕ್ಕೆ ಪರಿಹಾರವಿಲ್ಲವೇ?

ಉತ್ತರ.. ‘ಇದೆ’.
ಮರುಭೂಮಿಯಾದ ರಾಜಸ್ಥಾನ್, ಹನಿ ನೀರು ಸಿಗದ ಗುಜರಾತ್ ನ ಕಛ್ಚ್ ಹಾಗೂ ತಮಿಳು ನಾಡುವಿನ ಚೆನ್ನೈ ನ ಉದಾಹರಣೆಗಳು ನಮಗೆ ಸಿಗುತ್ತವೆ. ಇಲ್ಲಿ ಅತಿ ಕಡಿಮೆ ಮಳೆಯಾದರೂ ನೀರಿನ ಹಾಹಾಕಾರವುಂಟಾಗದೆ ಜನರು ಕುಡಿಯುವ ನೀರನ್ನು ಸಮರ್ಪಕವಾಗಿ ಬಳಸುತ್ತಿದ್ದಾರೆ. ಅವರ ಮಾರ್ಗಳನ್ನು ಅನುಸರಿಸಿದರೆ ನಾವುಗಳು ಹೇಗೆ ಈ ಬರದಿಂದ ಮುಕ್ತರಾಗಬಹುದು ಎಂಬುದಕ್ಕೆ ಮಾರ್ಗಗಳು ದೊರೆಯುತ್ತವೆ.

ಬರವನ್ನು ಎದುರಿಸಲು ಅನುಸರಿಸಬಹುದಾದಂತಹ ಕೆಲವು ಅಂಶಗಳೆಂದರೆ:

  1. ಕೊಳವೆ ಬಾವಿಗಳಿಗೆ ನಿರ್ಬಂಧ ಹೇರುವುದು ಹಾಗೂ ಅಂತರ್ಜಲದ ವೃದ್ಧ್ದಿಗೆ ಪೂರಕವಾದ ವಾತಾವರಣವನ್ನುಂಟುಮಾಡುವುದು (50% ಗೂ ಕಡಿಮೆ ನೀರು ದೊರೆಯುತ್ತಿರುವ ಸಂದರ್ಭದಲ್ಲಿ ಇನ್ನು ಅಧಿಕ ಕೊಳವೆ ಬಾವಿಗಳನ್ನು ಕೊರೆಸುವುದು ಅರ್ಥಕ್ಕೆ ದೂರವಾದುದು).
  2. ಈಗಾಗಲೇ ನಿಶ್ಪ್ರಯೋಜಕವಾಗಿರುವ ಕೊಳವೆ ಬಾವಿಗಳಿಗೆ Recharge Pits / Percolation Tanksಗಳನ್ನು ಅಳವಡಿಸಿ ಮಳೆ ಕೊಯ್ಲಿಗೆ ಅನುಕೂಲ ಮಾಡುವುದು.(ಉದಾಹರಣೆ: https://www.youtube.com/watch?v=91K-28X7qcM)
  3. ರಸ್ತೆಯ ಇಕ್ಕೆಲಗಳಲ್ಲಿ ಗಿಡ, ಮರಗಳನ್ನು ನೆಡುವುದು ಹಾಗೂ ಅರಣ್ಯವೃದ್ಧಿಗೆ ಪ್ರೋತ್ಸಾಹಿಸುವುದು.
  4. ಹೊಸದಾಗಿ ಕಟ್ಟಲ್ಪಡುವ ಎಲ್ಲಾ ಮನೆ ಹಾಗೂ ಕಟ್ಟಡಗಳಿಗೆ ಮಳೆ ಕೊಯ್ಲು ಪದ್ಧತಿಯನ್ನು ಕಡ್ಡಾಯಗೊಳಿಸುವುದು ಹಾಗೂ ಈಗಾಗಲೇ ಕಟ್ಟಲ್ಪಟ್ಟಿರುವ ಮನೆಗಳಿಗೆ/ಕಟ್ಟಡಗಳಿಗೆ ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಹಕರಿಸುವುದು.
  5. ನೀರಿನ ಹರಿವನ್ನು ಪ್ರತಿಬಂಧಿಸಿ ಚೆಕ್ ಡ್ಯಾಮ್ ಗಳನ್ನು ಹಾಗೂ ಅಂತರ್ಜಾಲ ವೃಧ್ಧಿಸಲು ಹೂಳೆತ್ತುವ ಕಾರ್ಯಗಳನ್ನು ಅಳವಡಿಸುವುದು.
  6. ನೀರಿನ ಸಂಸ್ಕರಣೆಯ ಘಟಕಗಳನ್ನು ಸ್ಥಾಪಿಸುವುದು.
  7. ಜನರು ತಮ್ಮ ಮನೆಯ ಸುತ್ತ ಮುತ್ತ ಮರಗಿಡಗಳನ್ನು ಬೆಳೆಸುವುದು.
  8. ಜನರು ಮನೆಗಳಿಗೆ ಮಳೆ ಕೊಯ್ಲಿನ ಪದ್ಧತಿಯನ್ನು ಅಳವಡಿಸಿ ನೀರನ್ನು ಶೇಖರಿಸಿ, ಸಂಸ್ಕರಿಸಿ ಹಾಗೂ ಅಂತರ್ಜಲದ ವೃದ್ದಿಗೆ ಸಹಕರಿಸುವುದು.

ಇದರಲ್ಲಿ ಸರ್ಕಾರದ ಪಾತ್ರವೆಷ್ಟಿದೆಯೋ ಅಷ್ಟೇ ಜನಸಾಮಾನ್ಯನ ಪಾತ್ರವೂ ಇದೆ. ಸಮಯೋಚಿತ ನಿರ್ಧಾರಗಳು ನಮ್ಮ ಮುಂಬರುವ ದಿನಗಳನ್ನು ಪ್ರತಿಬಿಂಬಿಸುತ್ತವೆ. ಹಾಗೆಯೇ ನಮ್ಮ ನಾಳೆಗೆ ನಾವು ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕು. ನಮ್ಮ ನಾಳೆಯನ್ನು ನಾವೇ ರೂಪಿಸಬೇಕು.
Reference:
http://www.shidlaghattatown.gov.in/
http://aranya.gov.in/
http://dmc.kar.nic.in/
– ಸಂದೀಪ್ ಜಗದೀಶ್ವರ್

error: Content is protected !!