Home Articles ಸಂಕಷ್ಟದಲ್ಲಿ ರೈತ; ಭಾರವಾದ ಜಾನುವಾರು, ಎತ್ತಿನ ಬದಲು ಪವರ್‌ ಟಿಲ್ಲರ್‌

ಸಂಕಷ್ಟದಲ್ಲಿ ರೈತ; ಭಾರವಾದ ಜಾನುವಾರು, ಎತ್ತಿನ ಬದಲು ಪವರ್‌ ಟಿಲ್ಲರ್‌

0

ಆಧುನಿಕತೆ ಮತ್ತು ತಾಂತ್ರಿಕತೆಯತ್ತ ಕೃಷಿ ವಾಲುತ್ತಿರುವುದು ಒಂದೆಡೆಯಾದರೆ, ಕೃಷಿ ಉಪಕರಣಗಳ ಚಾಲನಾ ಶಕ್ತಿಯಾದ ದನಸಂಪತ್ತುಗಳನ್ನು ಕಳೆದುಕೊಳ್ಳುತ್ತಿರುವುದು ಮತ್ತೊಂದೆಡೆಯಾಗಿ ಸೇರಿಕೊಂಡು ತಾಲ್ಲೂಕಿನಲ್ಲಿ ರಾಗಿ ಹೊಲದಲ್ಲಿ ಗುಂಟವೆ ಹಾಕುವುದಕ್ಕೆ ಪವರ್‌ ಟಿಲ್ಲರ್‌ ಬಳಸಲು ಪ್ರಾರಂಭಿಸಿದ್ದಾರೆ.
ರಾಗಿ ಹೊಲದಲ್ಲಿ ಕೈಬಿತ್ತನೆ ಮಾಡುವುದರಿಂದ ಕೆಲವೆಡೆ ಹೆಚ್ಚು ಪೈರು ಬೆಳೆದರೆ ಇನ್ನು ಕೆಲವು ಕಡೆ ಕಡಿಮೆ ಪೈರು ಮೊಳೆತಿರುತ್ತದೆ. ಇವನ್ನು ಸರಿದೂಗಿಸಲು ಹಾಗೂ ಕಳೆಯನ್ನು ಹೋಗಲಾಡಿಸಲು ಗುಂಟವೆ ಹಾಕುತ್ತಾರೆ. ಉದ್ದುದ್ದ ಗುಂಟವೆ ಮತ್ತು ಅಡ್ಡ ಗುಂಟವೆ ಎಂದು ಎರಡು ರೀತಿಯಾಗಿ ಹಾಕುವುದೂ ಉಂಟು. ಇದರಿಂದಾಗಿ ಪೈರು ಚೆನ್ನಾಗಿ ಬೇರು ಬಿಟ್ಟುಕೊಳ್ಳುವುದರಿಂದ ‘ಗುಂಟವೆ ಹಾಕಿದ ಹೊಲ ಚೆನ್ನ…’ ಎಂಬ ಗಾದೆ ಮಾತಿದೆ. ಈ ಕೆಲಸಕ್ಕೆ ಅನುಭವವಿರಲೇ ಬೇಕು.
ಮಳೆ ಬೆಳೆ ಸರಿಯಾಗಿಲ್ಲದೆ ಈಗ ಜಾನುವಾರುಗಳ ಪೋಷಣೆ ಗ್ರಾಮಗಳಲ್ಲಿ ಕಷ್ಟವಾಗತೊಡಗಿದೆ. ವ್ಯವಸಾಯದ ಬದುಕಿನ ಅವಿಭಾಜ್ಯ ಅಮಗವಾಗಿದ್ದ ಎತ್ತುಗಳ ಪೋಷಣೆ ಮೊದಲಿನಷ್ಟು ಸುಲಭವಾಗಿಲ್ಲ. ಬರದ ಕಾರಣ ಕೃಷಿ ಜಾನುವಾರುಗಳನ್ನು ಕಳೆದುಕೊಂಡು ಯಂತ್ರಗಳ ಮೇಲಿನ ಅವಲಂಬನೆ ಅನಿವಾರ್ಯವಾಗಿದೆ.
‘ಎತ್ತುಗಳ ಪಾಲನೆ ಪೋಷಣೆ ಈಗ ರೈತರಿಗೆ ಹೊರೆಯಾಗತೊಡಗಿದೆ. ಅಲ್ಲದೆ ಕೃಷಿ ಯಂತ್ರೋಪಕರಣಗಳಿಗೆ ಸರ್ಕಾರ ಸಹಾಯಧನ ನೀಡುತ್ತಿರುವುದರಿಂದಾಗಿ ಗುಂಟವೆ ಹಾಕಲು ಪವರ್‌ ಟಿಲ್ಲರ್‌ ಬಳಸಲು ತಾಲ್ಲುಕಿನ ಕೃಷಿಕರು ಪ್ರಾರಂಭಿಸಿದ್ದಾರೆ. ಪವರ್‌ ಟಿಲ್ಲರ್‌ ಬಳಸುವುದರಿಂದ ಮೂರರಿಂದ ನಾಲ್ಕು ಗುಂಟವೆ ಕೋಲುಗಳನ್ನು ಕಟ್ಟಬಹುದು ಮತ್ತು ವೇಗವಾಗಿ ಅಂದರೆ ದಿನಕ್ಕೆ ಮೂರು ಎಕರೆಯಷ್ಟು ಗುಂಟವೆ ಹಾಕಬಹುದಾಗಿದೆ. ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯು ಕೃಷಿಕನಿಗೂ ಬಂದೊದಗಿದೆ’ ಎನ್ನುತ್ತಾರೆ ತಲಕಾಯಲಬೆಟ್ಟ ಸಾವಯವ ಕೃಷಿ ಪರಿವಾರದ ಸಂಚಾಲಕ ಬೂದಾಳ ರಾಮಾಂಜಿನಪ್ಪ.
–ಡಿ.ಜಿ.ಮಲ್ಲಿಕಾರ್ಜುನ.

error: Content is protected !!