“ಬೇಂಟ್” ಎಂಬ ಶಬ್ದ ನಿಮಗೆ ಹೊಸದಾಗಿ ಕಾಣಿಸಬಹುದು ನಿಜ. ಅದು ಕನ್ನಡದ “ಬೇಡ” ಇಂಗ್ಲೀಷ್ನ “ಡೋಂಟ್” ಗಳ ಕಸಿ. ನಿಷೇದಾತ್ಮಕ ಶಬ್ದಗಳು. ಅವುಗಳೇ ನಮ್ಮನ್ನು ಆಳುತ್ತಿರುವ ಶಬ್ದಗಳು.
ಕಾನ್ವೆಂಟ್ಗೆ ಹೋಗುತ್ತಿದ್ದ ಪುಟ್ಟ ಬಾಲಕನೊಬ್ಬನ ಹತ್ತಿರ ಅಲ್ಲಿನ ಟೀಚರ್ ಕೇಳಿದಳು “What is your name?” ಅಂತ. ಅದಕ್ಕೆ ಆ ಬಾಲಕ ಉತ್ತರಿಸಿದ “don’t John” ಅಂತ. ಟೀಚರ್ಗೆ ಆಶ್ಚರ್ಯ ಇದೆಂಥ ಹೆಸರು ಅಂತ. ಆದರೆ ಕೊನೆಗೆ ತಿಳಿದದ್ದಿಷ್ಟು. ಅವನ ಹೆಸರು “ಜಾನ್” ಅಂತ. ಆದರೆ ಮನೆಯಲ್ಲಿ ಅವನೇನು ಮಾಡುತ್ತಿದ್ದರೂ ಅವನ ತಂದೆ-ತಾಯಿ “don’t John” ಅಂತ ಪದೇ ಪದೇ ಹೇಳುತ್ತಿದ್ದುದ್ದರಿಂದ ಆತ ಸ್ವಾಭಾವಿಕವಾಗಿಯೇ ತನ್ನ ಹೆಸರು “don’t John” ಅಂತ ತಿಳಿದುಕೊಂಡಿದ್ದ.
ಇದು ಜಾನ್ನೊಬ್ಬನ ಕಥೆಯಲ್ಲ. ಇದು ಇಂದಿನ ಬದುಕಿನ ವಾಸ್ತವ. ನಮ್ಮ ಮನೆಗಳಲ್ಲೂ ನೋಡಿ. ಮಗುವಿಗೆ ನಾವು ಹೇಳುವುದು “ಬೇಡ” ಅಂತ. ಅದನ್ನು ಮುಟ್ಟಬೇಡ, ಇದನ್ನು ಕೇಳಬೇಡ, ಇಲ್ಲಿ ಆಟವಾಡಬೇಡ, ಹಾಗೆ ತಿನ್ನಬೇಡ, ಓಡಬೇಡ, ಹೀಗೆ ಬೇಡಬೇಡ ಎಂದು ಹೇಳುತ್ತಲೇ ಇರುತ್ತೇವೆ. ಮಗುವೊಂದು ಏನನ್ನು ಮಾಡಲು ಹೊರಟರೂ ನಾವು ಮೊದಲಿಗೆ ಅದಕ್ಕೆ ಪ್ರೋತ್ಸಾಹ ನೀಡುವುದನ್ನು ಬಿಟ್ಟು, ನೀನು ಮಾಡು. ಮುಂದುವರಿ, ಎಂದು ಹೇಳುವುದಕ್ಕೆ ಬದಲಾಗಿ ‘ಬೇಡ’ ಎಂದು ಅದರ ಉತ್ಸಾಹವನ್ನು ಕುಗ್ಗಿಸುತ್ತೇವೆ.
ಜಿದ್ದು ಕೃಷ್ಣಮೂರ್ತಿಯವರು ಹೇಳುವಹಾಗೆ ‘ಸ್ವತಂತ್ರವಾಗಿ ಯೋಚಿಸುವ, ಹೆದರಿಕೆಯಿಲ್ಲದ, ನಿರ್ಧಿಷ್ಟ ಮಾದರಿಗಳಿಲ್ಲದ, ಸಂದರ್ಭದಲ್ಲಿ ಮಾತ್ರ ಯಾವುದು ನಿಜ-ಸತ್ಯ ಎನ್ನುವುದನ್ನು ಅನ್ವೇಷಿಸಿಕೊಳ್ಳಲು ಸಾಧ್ಯ’. ಆದರೆ ನಾವು ಪ್ರತಿಯೊಂದು ಸಂದರ್ಭದಲ್ಲೂ ಭಯವನ್ನು ಹುಟ್ಟು ಹಾಕುತ್ತೇವೆ. ಸ್ವತಂತ್ರ ಕ್ರಿಯೆಯನ್ನು ಕಿತ್ತುಕೊಳ್ಳುತ್ತೇವೆ. ಹಾಗಾಗಿ ಅದರ ಅನ್ವೇಷಕ ಗುಣವನ್ನು ನಿಧಾನವಾಗಿ ನಾಶಪಡಿಸುತ್ತೇವೆ. ಮನೆಯಲ್ಲಿ ಮಗುವಿದ್ದಲ್ಲಿ ಅದನ್ನು ಜೊಪಾನವಾಗಿ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗುವುದು. ಆದರೆ ಜೋಪಾನದ ನೆಪದಲ್ಲಿ ಅದರ ಚಟುವಟಿಕೆಗಳನ್ನು ಸದಾ ನಿಯಂತ್ರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಬೇಕಿದ್ದರೆ ಬೆಳಗಿನಿಂದ ರಾತ್ರಿಯವರೆಗೆ ಒಟ್ಟು ಎಷ್ಟು ಬಾರಿ ‘ಬೇಡ ಮಗು’. ಅದು ಬೇಡ, ಹಾಗೆ ಮಾಡ ಬೇಡ, ಹೀಗೆ ಮಾಡಬೇಡ, ಎಂದು ನಿಷೇಧಾತ್ಮಕ ಶಬ್ದಗಳನ್ನು ಬಳಸುತ್ತೇವೆ. ಎಂದು ಬೇಕಿದ್ದರೆ ಪರೀಕ್ಷಿಸಿ. ನಾವು ನಮಗರಿವಿಲ್ಲದೆ ಇಂಥ ನಿಷೇದಾತ್ಮಕ ಪದಪ್ರಯೋಗಗಳನ್ನು ಮಾಡುತ್ತಲೇ ಇರುತ್ತೇವೆ. ಇದರಿಂದಾಗಿ ಅದರ ಬೆಳೆವಣಿಗೆಯ ಮೇಲಾಗುವ ಪರಿಣಾಮಗಳನ್ನ ಮಾತ್ರ ಗಮನಿಸುವುದೇ ಇಲ್ಲ. ಪ್ರತಿಯೊಂದಕ್ಕು ಬೇಡ-Don’t ಏನ್ನುತ್ತಲೇ ಸಾಗಿದರೆ, ಅದು ಕಾಲಕ್ರಮೇಣ ಅದೇ ಸರಿ ಎಂದು ಕೊಳ್ಳಬಹುದು. ಅಥವಾ ಖಿನ್ನತೆಗೆ ಗುರಿಯಾಗಬಹುದು. ಸ್ವತಂತ್ರ ಪರಿಸರವಿದ್ದಲ್ಲಿ ಸರಾಗವಾಗಿ ಉಸಿರಾಡಬಹುದು. ಸಹಜವಾಗಿ ಉಸಿರಾಡುವ ವಾತವರಣದಲ್ಲಿ ಸರಿಯಾಗಿ ಬೆಳೆಯಬಹುದು!.
ಮಗು ಶಿಸ್ತಾಗಿ ಬೆಳೆಯಬಾರದೆಂದು ಹೇಳುತ್ತಿಲ್ಲ. ಅದು ಇಂಗ್ಲೀಷ್ನಲ್ಲಿ ಸಂಭಾಷಣೆ ನಡೆಸುವುದು ತಪ್ಪು ಎಂದೂ ಹೇಳುತ್ತಿಲ್ಲ. ಆದರೆ ಆ ಶಿಸ್ತಿನ ಹೆಸರಿನಲ್ಲಿ ಒತ್ತಡ ಹೇರುವುದು ತರವಲ್ಲ. ಸಹಜ ಬೆಳವಣಿಗೆಗೆ ಅಡ್ಡಿ ಮಾಡುವುದು ಅಷ್ಟೊಂದು ಸಮಂಜಸವಲ್ಲ, ಎಂದಷ್ಟೇ ಹೇಳಬಹುದು. ಒಂದು ಮಗು ತನಗೆ ಸಿಕ್ಕಿದ್ದನ್ನು ತನ್ನಿಷ್ಟದಂತೆ ಗಮನಿಸುತ್ತದೆ. ಅದರ ಕೈಗೆ ಬಳಪ ಸಿಕ್ಕರೆ ಸಿಕ್ಕ ಸಿಕ್ಕಂತೆ ಗೀಚುತ್ತದೆ. ಮತ್ತದರಲ್ಲೇ ಸಂಭ್ರಮಿಸುತ್ತದೆ. ಹಾಗೇ, ಆಟಿಕೆಯ ವಸ್ತು ಸಿಕ್ಕಾಗ ಅದನ್ನು ಕಿತ್ತು ನೊಡುತ್ತದೆ. ಪುನಃ ಸರಿಪಡಿಸಲು ಪ್ರಯತ್ನಿಸುತ್ತದೆ. ಕುತೂಹಲ ಅದರ ಸಹಜ ಸ್ವಭಾವ. ಆ ಮೂಲಕವೇ ಅದು ಪ್ರಪಂಚವನ್ನು ಅರ್ಥೈಸಿಕೊಳ್ಳುತ್ತಾ ಬೆಳೆಯುವುದು. ಆದರೆ ಅದರ ಭಾವ/ಬುಧ್ದಿ ಪ್ರಪಂಚವನ್ನು ಅರ್ಥೈಸಿಕೊಳ್ಳದೇ-ಅದನ್ನು ಹತ್ತಿಕ್ಕುವುದು, ಸದಾ ನಮ್ಮ ಕ್ರಿಯೆಗಳಲ್ಲಿ ಅದಕ್ಕಿಂತ ಹೆಚ್ಚಾಗಿ ನಾವಾಡುವ ಮಾತುಗಳ ಮುಖಾಂತರ ಜರುಗುತ್ತಿರುತ್ತದೆ. ಮಗುವಿಗಾಗಿ ಖರೀದಿಸಿದ್ದು ಅದು ಅದರ ವಸ್ತು. ಅದನ್ನದು ಹೇಗಾದರೂ ಬಳಸಿಕೊಳ್ಳಲಿ ಎಂಬ ಉದಾರತೆಯ ಕೊರತೆ ನಮ್ಮೆಲ್ಲರಲ್ಲೂ ಎದ್ದು ಕಾಣುತ್ತದೆ. ಯಾಕೆಂದರೆ ಅದು ಹಾಳು ಮಾಡುತ್ತಿರುತ್ತದೆ. ಪುನಃ ಪುನಃ ನಾವು ಕೊಡಿಸುತ್ತಿರುತ್ತೇವೆ. ಒಂದು ಹಂತದವರೆಗೆ ಇದೆಲ್ಲ ಸಾಮಾನ್ಯ. ಮಗುವಿಗೆ ಮುಖ್ಯವಾಗಿ ಅನಿಸಬೇಕಾದ್ದು ಅದು. ಅದರದ್ದೇ ಅದರ ಮೇಲೆ ಅದಕ್ಕೇ ಸಂಪೂರ್ಣ ಹಕ್ಕಿದೆ. ಅದರ ಸಂಪೂರ್ಣ ಸ್ವಾಮ್ಯ ಅದರದ್ದೇ, ಎಂಬ ಭಾವನೆ ಮೂಡಿದರೆ, ಅದು ಸಂತೋಷದಿಂದ, ಕ್ರಿಯಾಶೀಲತೆಯಿಂದ ಬೆಳೆಯಲು ಸಾಧ್ಯ.
‘ಡೋಂಟ್ ಜಾನ್’ ಎನ್ನುವುದಕ್ಕೆ ಬದಲಾಗಿ ‘ಎಸ್ಜಾನ್’ ಎಂದರೆ ‘ಬೇಡ ಮಗು’ ಎನ್ನುವುದಕ್ಕೆ ಬದಲಾಗಿ ‘ಮಾಡು ಮಗು’ ಎಂದರೆ, ಪ್ರೋತ್ಸಾಹದ ನುಡಿಗಳು ನಮ್ಮಿಂದ ಹೊರಬಂದರೆ, ಅದರ ಕ್ರಿಯೆಗಳಿಗಿಷ್ಟು ಬೆನ್ನು ತಟ್ಟಿದರೆ, ಅದರ ಮುಖದಲ್ಲಿ ಸದಾ ಮಂದಹಾಸ ಮತ್ತು ಅದರ ಚಟುವಟಿಕೆಗಳಿಗಷ್ಟು ಸ್ಪೂರ್ತಿ ದೊರೆತಂತಾಗಿ, ಅದರ ಬೆಳೆವಣಿಗೆ ಸ್ವತಂತ್ರವಾಗಿ, ಕ್ರಿಯಾಶೀವಾಗಿ, ಇರಬಹುದು. ಹಾಗಲ್ಲದೆ ಎಲ್ಲಿ ‘ಡೋಂಟ್’ ಅನ್ನುತ್ತಾರೊ, ‘ಬೇಡ’ ವೆನ್ನುತ್ತಾರೋ ಎಂಬ ಭಯದಲ್ಲೇ ಇದ್ದರೆ ಬೆಳೆವಣಿಗೆ ಕುಂಠಿತವಾಗುವ ಸಾಧ್ಯತೆಯೇ ಹೆಚ್ಚು.
ಜಿದ್ದು ಕೃಷ್ಣಮೂರ್ತಿಯವರು ಹೇಳುವಂತೆ ‘ಭಯ ಮನುಷ್ಯನ ವೈಚಾರಿಕತೆಯನ್ನು ನಾಶಪಡಿಸುತ್ತದೆ. ಅಷ್ಟೆ ಅಲ್ಲ ಮನುಷ್ಯ ಸಂಬಂಧಗಳನ್ನು ಮತ್ತು ಪ್ರೀತಿಯನ್ನು ಕೂಡ’. ಹಾಗಾಗಿ ನಾವು, ಬೇಡ-ಬೇಡ ಎಂದು ಭೀತಿ ಹುಟ್ಟಿಸುವುದಕ್ಕೆ ಬದಲಾಗಿ ಭೇಷ್ ಎಂದು ಪ್ರೀತಿ ಹುಟ್ಟಿಸಿದರೆ ‘ಬೇಂಟ್’ ಬೆಳವಣಿಗೆಗೆ ಮಂಗಳ ಹಾಡಬಹುದು.
ಮಗುವೊಂದು ಮನೆಗೆ ಬೇರೆಯಾರಾದರೂ ಬಂದಾಗಲೇ ಹೆಚ್ಚು ಹಟ-ಗಲಾಟೆ ಮಾಡುವ ಅಂಶವನ್ನು ನೀವು ಗಮನಿಸಿರಬಹುದು. ಕಾರಣ ಅದು ಬೇರೆಯವರು ಬಂದದ್ದಕ್ಕಲ್ಲ. ಬದಲಿಗೆ ತನ್ನನ್ನು ಸರಿಯಾಗಿ ಗಮನಿಸದಿದ್ದಕ್ಕೆ. ನೀವು ನೀವೇ ಮಾತುಕತೆಗೆ ತೊಡಗಿದ್ದಕ್ಕೆ. ಅದು ತಪ್ಪಲು ನೀವು ಹೋದಲ್ಲಿ ಮೊದಲಿಗೆ ಮಗುವನ್ನೆ ಮಾತನಾಡಿಸಿ. ಬೆನ್ನುತಟ್ಟಿ ನೋಡಿ. ಅನಂತರ ಅದರ ರಗಳೆ-ಗಲಾಟೆ ಎಷ್ಟಿರುತ್ತದೆ ಎಂದು. ಬಹುತೇಕ ಸಂದರ್ಭಗಳಲ್ಲಿ ಎಲ್ಲಾ ಮಾಮೂಲಿಯಾಗಿ ಸಹಜವಾಗಿ ಶಾಂತವಾಗಿ ಇದ್ದು ಬಿಡುತ್ತದೆ. ಇದೆಲ್ಲ ಸಾಧ್ಯವಾಗುವುದು ನಾವು ಸೂಕ್ಷ್ಮವಾಗಿ ಈ ಬದುಕನ್ನು ಗಮನಿಸಿದಾಗ ಮಾತ್ರ. ‘ಬೇಂಟ್-ಬೇಡ-ಡೋಂಟ್’ ಬದಲಿಗೆ ಭೇಷ್!, ಶಬ್ದ ಪ್ರಯೋಗವಾಗಲಿ. ‘ಗದರಿ’ ಸಾಧಿಸುವುದು ಸಾಧುವಲ್ಲ. ಡಾ.ಜಿ.ಎಸ್.ಶಿವರುದ್ರಪ್ಪ ನವರ ಕವಿತೆ ‘ಪ್ರೀತಿ ಇಲ್ಲದ ಮೇಲೆ-ಹೂವು ಅರಳೀತು ಹೇಗೆ? ಹಾಗೇ ಮಗು ಬೆಳೆದೀತು ಹೇಗೆ?.
ರವೀಂದ್ರ ಭಟ್ ಕುಳಿಬೀಡು.