ನಿಮಗೆ ಮದುವೆಯಾಗಿ ಕೆಲವು ವರ್ಷಗಳಾಗಿದ್ದರೆ,
1. ವೈವಾಹಿಕ ಜೀವನದಲ್ಲಿ ಏಕಾತಾನತೆಯಿಂದಾಗಿ ಬೇಸರವುಂಟಾಗಿದೆಯೇ?
2. ಪತಿಪತ್ನಿಯರ ಮಧ್ಯೆ ಆಗಾಗ ಬಿಸಿಬಿಸಿ ಮಾತುಕತೆಗಳಾಗತ್ತಿದೆಯೇ ಅಥವಾ ಹಾಗಾಗದಿದ್ದರೂ ಒಟ್ಟಾರೆ ಮೊದಲಿನ ಆತ್ಮೀಯತೆ ಉಳಿದಿಲ್ಲ ಅನ್ನಿಸುತ್ತಿದೆಯೇ?
3. ಗಂಡ ಹೆಂಡತಿಯರಲ್ಲಿ ಒಬ್ಬರಿಗೆ ಆಸಕ್ತಿ ಕಡಿಮೆಯಾದ ಕಾರಣಕ್ಕಾಗಿ ಲೈಂಗಿಕ ಜೀವನ ನೀರಸ ಅನ್ನಿಸಿ ನೀವು ಪಬ್ಬು, ಕ್ಲಬ್ಬುಗಳನ್ನು ಹುಡುಕಿಕೊಂಡು ಹೋಗುತ್ತಿದ್ದೀರಾ?
4. ನಮ್ಮ ಜೀವನದಲ್ಲಿ ಇನ್ನೇನು ಉಳಿದಿಲ್ಲ, ಮಕ್ಕಳಿಗೆ ಒಂದು ದಾರಿ ತೋರಿಸಿದರೆ ಎಲ್ಲಾ ಮುಗಿದಂತೆ ಅನ್ನಿಸುತ್ತಿದೆಯೇ?
ಹಾಗಿದ್ದರೆ ನೀವು ದಾಂಪತ್ಯ ಜೀವನದ ಸರಿಯಾದ ಬೆಳವಣಿಗೆಯ ಹಂತದಲ್ಲಿದ್ದೀರಾ, ಬೇಸರ ಮಾಡಿಕೊಳ್ಳುವ ಅಗತ್ಯವೇನಿಲ್ಲ!!
ಇದು ವ್ಯಂಗ್ಯವಲ್ಲ
ಮೇಲಿನ ಮಾತುಗಳಲ್ಲಿ ವ್ಯಂಗ್ಯದ ಧ್ವನಿ ನಿಮಗೆ ಕಂಡಿದ್ದರೆ ಕ್ಷಮಿಸಿ, ನನಗೆ ನಿಮ್ಮನ್ನು ಹಂಗಿಸುವ ಉದ್ದೇಶವಿಲ್ಲ. ಇಂತಹ ಹೊಸತನವಿಲ್ಲದ, ಬೇಸರದ, ಭಿನ್ನಾಭಿಪ್ರಾಯಗಳ ಹಂತ ಸಾಮಾನ್ಯವಾಗಿ ಹೆಚ್ಚಿನವರ ವೈವಾಹಿಕ ಜೀವನದಲ್ಲಿ ಬಂದೇ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪತಿಪತ್ನಿಯರು ತಮ್ಮ ಮಾನಸಿಕ ಆತಂಕ, ಕಿರಿಕಿರಿಗಳನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ತಮ್ಮ ಭಾವೀ ಜೀವನದ ಬಗೆಗೆ ಎಂತಹ ಧೋರಣೆ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನವುದು ಅತಿ ಮುಖ್ಯ. ಇದರ ಆಧಾರದ ಮೇಲೆ ನಿಮ್ಮ ದಾಂಪತ್ಯದಲ್ಲಿ ಶಾಶ್ವತವಾದ ಸಂತೋಷ, ಸಮಾಧಾನಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆಯೇ ಇಲ್ಲವೇ ಎನ್ನುವುದು ನಿರ್ಧರಿತವಾಗುತ್ತದೆ.
ದಾಂಪತ್ಯದ ಬೆಳವಣಿಗೆಯ ಹಂತಗಳು
ಮದುವೆಯಾದ ಆರಂಭದ ಹಂತದಲ್ಲಿ ಪತಿಪತಿಯರಿಬ್ಬರೂ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಮತ್ತು ಮೆಚ್ಚಿಸುವ ತವಕದಲ್ಲಿರುತ್ತಾರೆ. ಹಲವಾರು ವರ್ಷ ಪ್ರೇಮಿಸಿ ಮದುವೆಯಾದವರೂ ಕೂಡ ಇದನ್ನೇ ಮಾಡುತ್ತಾರೆ, ಏಕೆಂದರೆ ಗಂಡಹೆಂಡತಿಯರಾಗಿ ನಿಭಾಯಿಸಬೇಕಾದ ಜವಾಬ್ದಾರಿಗಳು ಅಥವಾ ಸಾಮಾಜಿಕ ಚೌಕಟ್ಟುಗಳು ಪ್ರೇಮಿಗಳಿಗೆ ಇರುವುದಿಲ್ಲ. ದಾಂಪತ್ಯದ ಅಗತ್ಯಗಳು ಬರಿಯ ಪ್ರೇಮ ಸಂಬಂಧದ ಅಗತ್ಯಗಳಿಗಿಂತ ಭಿನ್ನವಾಗಿರುತ್ತದೆ.
ಹೀಗೆ ಒಬ್ಬರು ಇನ್ನೊಬ್ಬರನ್ನು ಖುಷಿಪಡಿಸುವ ಕೆಲಸ ಪ್ರೀತಿ, ತ್ಯಾಗ, ಹೊಂದಾಣಿಕೆಯ ಹೆಸರಿನಲ್ಲಿ ನಡೆಯುತ್ತಿರುತ್ತದೆ. ವಾಸ್ತವದಲ್ಲಿ ಇದು ನಿಜವಾದ ಪ್ರೇಮವೇ? ಮುಂದೆ ನೋಡೋಣ.
ಎಲ್ಲಿಯವರೆಗೆ ಸಹಿಸಿಕೊಳ್ಳಲಿ?
ಬಹುಷಃ ಇದು ಮದುವೆ ಎನ್ನವು ಸಾಮಾಜಿಕ ಸಂಸ್ಥೆ ಹುಟ್ಟಿದಂದಿನಿಂದಲೇ ನಡೆದು ಬಂದ ರೀತಿ. ಹಾಗಾಗಿಯೇ ವಿಚ್ಛೇದನಗಳು ಮದುವೆಯ ಜೊತೆಗೇ ಹುಟ್ಟಿದವು, ಹೆಚ್ಚೆಂದರೆ ಇಪ್ಪತ್ತು ನಿಮಿಷಗಳ ನಂತರ!-ಎನ್ನುವ ಮಾತಿದೆ.
ಇದಕ್ಕಾಗಿ ಯಾವ ದಂಪತಿಗಳೂ ನಿರಾಸೆಗೊಳ್ಳುವ ಕಾರಣಗಳೇನಿಲ್ಲ. ವಾಸ್ತವದಲ್ಲಿ ಇವೆಲ್ಲಾ ವೈವಾಹಿಕ ಸಂಬಂಧ ರೂಪಗೊಳ್ಳುವ ಬೆಳವಣಿಗೆಯ ಸಹಜ ಹಂತಗಳು. ವಿಪರ್ಯಾಸವೆಂದರೆ ಇವೆಲ್ಲಾ ನಡೆಯುವುದು ಪ್ರೇಮ, ಪ್ರೀತಿ, ತ್ಯಾಗ, ಹೊಂದಾಣಿಕೆ ಎನ್ನವು ಹೆಸರಿನಲ್ಲಿ! ನಮ್ಮಲ್ಲಿ ಹೆಚ್ಚಿನವರು ಇದೇ ಹಂತದಲ್ಲೇ ಕೊನೆಯವರೆಗೂ ಕಳೆದುಬಿಟ್ಟರೆ, ಕೆಲವರು ಸಂಬಂಧವನ್ನೂ ಇನ್ನೂ ಹಾಳುಮಾಡಿಕೊಂಡು ವಿಚ್ಛೇದನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಹೊಸ ಸಂಗಾತಿಯನ್ನು ಹುಡುಕಿಕೊಂಡು ಹೋಗುವವರು ಹೊಸ ಸಂಬಂಧದಲ್ಲೂ ಕೂಡ ಮತ್ತೇ ಇದೇ ದಾರಿಯಲ್ಲಿ ನಡೆಯಬೇಕಾಗುತ್ತದೆ. ಬೆರಳೆಣಿಕೆಯಷ್ಟು ಜನ ಮಾತ್ರ ತಾತ್ಕಲಿಕ ಮಾನಸಿಕ ಆತಂಕ, ಕಿರಿಕಿರಿಗಳನ್ನು ಮೆಟ್ಟಿನಿಂತು ಮುಂದುವರೆದು ಶಾಶ್ವತ ಸಮಾಧಾನದತ್ತ ನಡೆಯುತ್ತಾರೆ.
ಎಲ್ಲಿದೆ ಇದರ ಮೂಲ?
ಮುಂದುವರೆಯುವುದು..
ವಸಂತ್ ನಡಹಳ್ಳಿ