Home News ಅಂಚೆ ಇಲಾಖೆಯ ಸಿಬ್ಬಂದಿಯಿಂದ ಜಾಥಾ

ಅಂಚೆ ಇಲಾಖೆಯ ಸಿಬ್ಬಂದಿಯಿಂದ ಜಾಥಾ

0

ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಹಾಗೂ ಮದುವೆಗಾಗಿ ‘ಹೆಣ್ಣು ಮಗು ಉಳಿಸಿ-ಹೆಣ್ಣು ಮಗು ಓದಿಸಿ’ ಎಂಬ ಘೋಷ ವಾಕ್ಯದೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆ ಕುರಿತು ಜಾಗೃತಿ ಮೂಡಿಸಲು ಅಂಚೆ ಇಲಾಖೆ ಪಣ ತೊಟ್ಟಿದೆ ಎಂದು ಚಿಕ್ಕಬಳ್ಳಾಪುರ ವಿಭಾಗೀಯ ಅಂಚೆ ನಿರೀಕ್ಷಕ ವೆಂಕಟರೋಣಪ್ಪ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಕುರಿತಂತೆ ವಿವರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಜನರಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಬಡ್ಡಿ ದರ ಇದಾಗಿದ್ದು, ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ‘ಸುಕನ್ಯಾ ಸಮೃದ್ಧಿ ಖಾತೆ’ ಯೋಜನೆ ಆರಂಭಿಸಿದೆ. ಎಲ್ಲಾ ಅಂಚೆ ಕಚೇರಿಗಳಲ್ಲೂ ಖಾತೆ ತೆರೆಯಬಹುದಾಗಿದೆ.
10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಲ್ಲಿ ಖಾತೆ ತೆರೆದು 21 ವರ್ಷಗಳ ಬಳಿಕ ಹಣ ಪಡೆಯುವ ಮಹತ್ವದ ಯೋಜನೆ ಇದಾಗಿದ್ದು, ಖಾತೆ ತೆರೆದ 14 ವರ್ಷಗಳವರೆಗೆ ಮಾತ್ರ ಹಣ ಜಮಾ ಮಾಡಬೇಕು. ಠೇವಣಿಯಲ್ಲಿ ಅರ್ಧದಷ್ಟು ಮೊತ್ತವನ್ನು ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಮದುವೆಗೆ ಬಳಕೆ ಮಾಡಿಕೊಳ್ಳಬಹುದು. ಹಾಗಾಗಿ ಎಲ್ಲ ಅಂಚೆ ಕಚೇರಿಗಳಲ್ಲಿ ಫ್ಲೆಕ್ಸ್, ನಾಮಫಲಕಗಳನ್ನು ಹಾಕುವ ಮೂಲಕ ಗ್ರಾಹಕರನ್ನು ಯೋಜನೆಯತ್ತ ಸೆಳೆಯಲು ಅಂಚೆ ಇಲಾಖೆ ಮುಂದಾಗಿದೆ ಎಂದರು.
ದೇಶದೆಲ್ಲೆಡೆ ಅಂಚೆ ಕಚೇರಿ ಮತ್ತು ಬ್ಯಾಂಕ್ಗಳಲ್ಲಿ ಯೋಜನೆ ಆರಂಭಗೊಂಡಿದ್ದರೂ ರಾಜ್ಯದಲ್ಲಿ ಇದೆ ಮೊದಲು ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಖಾತೆ ತೆರೆಯಬಹುದಾಗಿದ್ದು, ಖಾತೆ ಆರಂಭಕ್ಕೆ ಜನನ ಪ್ರಮಾಣ ಪತ್ರ ಹಾಗೂ ಪೋಷಕರ ವಿಳಾಸ ಮತ್ತು ಗುರುತಿನ ಚೀಟಿ ಪ್ರತಿ ಸಲ್ಲಿಸಬೇಕಿದೆ ಎಂದು ವಿವರಿಸಿದರು.
ಗೌರಿಬಿದನೂರು ವಿಭಾಗೀಯ ಅಂಚೆ ನಿರೀಕ್ಷಕ ಹನುಮಂತರಾಜು, ಶಿಡ್ಲಘಟ್ಟ ಪೋಸ್ಟ್ ಮಾಸ್ಟರ್ ಸಿ.ವಿ.ವೆಂಕಟಾಚಲಪತಿ, ಆಶಾ, ಪ್ರಸನ್ನಕುಮಾರ್, ಅಶ್ವತ್ಥನಾರಾಯಣ, ಗಜೇಂದ್ರ, ಮಂಜಪ್ಪ, ಪ್ರಸಾದ್, ರಾಮಾಂಜಿನಪ್ಪ, ಆಶಾಕುಮಾರ್, ರಾಮಪ್ಪ, ಗೋವಿಂದಪ್ಪ, ವೆಂಕಟೇಶಮೂರ್ತಿ, ಶ್ರೀನಿವಾಸ್, ಚಂದ್ರೇಗೌಡ ಹಾಜರಿದ್ದರು.
 

error: Content is protected !!